ಬೀದರ – ಅತಿ ಪವಿತ್ರ ಸ್ಥಳವಾದ ಚಳಕಾಪೂರ್ ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದೇನೆ. ಕರ್ನಾಟಕದ ಜನರಿಗೆ ಶುಭವಾಗಲಿ ಎನ್ನುವ ಸಂಕಲ್ಪ ಮಾಡಿದ್ದೇನೆ. ದಿ. 13 ರಂದು ಹನುಮಾನ್ ಗದಾ ಪ್ರಹಾರ ಮಾಡುತ್ತೇವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ ನಂತರ ಪತ್ರಕರ್ತರೊಡನೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಶುಭವಾಗಲಿ ಎಂಬ ಸಂಕಲ್ಪದೊಂದಿಗೆ ಚಾಲೀಸಾ ಪಠಣ ಮಾಡಿದ್ದೇನೆ. ಭಜರಂಗ ದಳ ಬ್ಯಾನ್ ಮಾಡುತ್ತೇವೆ ಎನ್ನುವ ಇಂಥಾ ಮೂರ್ಖರಿಗೆ ನಾಳೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಡುತ್ತಾರೆ. ಇದರ ಪರಿಣಾಮ ದಿ. 13 ರಂದು ಅರ್ಥವಾಗುತ್ತದೆ ಎಂದರು.
ಅಲ್ಪಸಂಖ್ಯಾತರನ್ನು ಓಲೈಸುವುದು, ಬಹುಸಂಖ್ಯಾತ ರನ್ನು ಕಡೆಗಣಿಸುವುದು ಕಾಂಗ್ರೆಸ್ ನೀತಿ. ಅಧಿಕಾರಕ್ಕಾಗಿ ಅದು ಇದನ್ನೆಲ್ಲ ಮಾಡುತ್ತದೆ. ಮೋದಿಯವರು ಯಾವ ಜಾತಿ, ಧರ್ಮ, ನೋಡಿಲ್ಲ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಕಾಂಗ್ರೆಸ್ ನ ಓಲೈಕೆ ರಾಜಕಾರಣವನ್ನು ನಾವು ಖಂಡಿಸುತ್ತೆವೆ ಎಂದು ಖೂಬಾ ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ಮುಕ್ತ ಮಾರಾಟಕ್ಕೆ ಅವಕಾಶ ನೀಡುವುದಾಗಿ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರದ ಬಗ್ಗೆ ಕೆರಳಿದ ಅವರು, ಸಿಎಂ ಇಬ್ರಾಹಿಂ ಗೆ ತಲೆ ಕೆಟ್ಟಿದೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದೆ. ಗೋವಿನ ಶಾಪ ಜಿಡಿಎಸ್ ನ ನೇತಾರರಿಗೆ ತಟ್ಟುತ್ತದೆ. ಹೀಗಾಗಿ ಜೆಡಿಎಸ್ ಬಹುಮತ ಪಡೆಯುವುದೇ ಇಲ್ಲ ಎಂದು ಕೇಂದ್ರ ಸಚಿವರು ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ