“ರೀ, ನಾಳೇ ನಾಲ್ಕನೇ ಶನಿವಾರ ಚುಂಚನಕಟ್ಟೆಗೆ ಹೋಗಿಬರೋಣ” ಎಂದು ಮಡದಿ ಶಕುಂತಲೆ ಹೇಳಿದಾಗ ಸರಿ ಎಂದೆ. ನಾನು ಕೂಡ ಅಲ್ಲಿಗೆ ಹೋಗಿ ಬಂದು ಬಹಳ ವರ್ಷಗಳೇ ಆಗಿತ್ತು. ನನ್ನ ಮಡದಿಯ ಊರು ಚುಂಚನಕಟ್ಟೆ ಸಮೀಪದ ಕೆ.ಆರ್.ನಗರ ತಾಲ್ಲೂಕಿನ ನಾಟನಹಳ್ಳಿ ಗ್ರಾಮ. ನಾವು ಕಾಶಿಗೆ ಹೋಗಿ ಬಂದು ವಾರವಾಗಿತ್ತಷ್ಟೇ. ಕಾಶಿಗೆ ಹೋಗಿಬಂದವರು ರಾಮೇಶ್ವರಕ್ಕೆ ಹೋಗಿಬರಬೇಕೆಂಬ ವಾಡಿಕೆಯಿದೆಯಂತೆ! ಅದಿರುವುದು ತಮಿಳುನಾಡಿನಲ್ಲಿ. ಬಹುಶ: ಅಲ್ಲಿಗೆ ಹೋಗುವ ಅವಕಾಶ ಯಾವಾಗ ದೊರಕುವುದೋ..? ಸದ್ಯಕ್ಕೆ ಚುಂಚನಕಟ್ಟೆಗೆ ಹೋಗಿ ಅಲ್ಲಿರುವ ಶ್ರೀರಾಮನ ದರ್ಶನ ಮಾಡಿಬರುವ ಬಯಕೆ ಶಕುಂತಲೆಯದು. ಅಯೋಧ್ಯೆಯ ಶ್ರೀರಾಮನ ನವದೇಗುಲದ ವರದಿಗಳು ಪುರಾಣ ಕಥೆಗಳು ಟಿವಿಗಳಲ್ಲಿ ಬರುತ್ತಿರಲಾಗಿ ನಾವು ಕಾಶಿಗೆ ಹೋದಾಗ ಅಲ್ಲಿಂದ 250 ಕಿ.ಮೀ.ಅಂತರದಲ್ಲಿದ್ದ ಅಯೋದ್ಯೆಗೂ ಹೋಗಿಬರಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದೆವು. ಟ್ಯಾಕ್ಸಿ ನಾವು ತಂಗಿದ್ದ ಜಂಗಮಮಠದ ಬಳಿ ಬಂದು ನಾವು ರೂಂನಿಂದ ಸ್ನಾನ ಮಾಡಿ ಕೆಳಗಿಳಿದು ಬರುವಷ್ವರಲ್ಲಿ ಲಾರಿ ಚಾಲಕರ ಸ್ಟ್ರೈಕ್ ಎಫೆಕ್ಟ್ ನಿಂದಾಗಿ ಟ್ಯಾಕ್ಸಿ ಚಾಲಕ ವಾಪಸ್ಸು ಹೋಗಿದ್ದ. ಇದರ ಹಿಂದಿನ ದಿನ ನಾವು ಕಾಶಿಯಿಂದ ಟ್ಯಾಕ್ಸಿ ಬುಕ್ ಮಾಡಿ ತ್ರಿವೇಣಿ ಸಂಗಮ ಕ್ಷೇತ್ರ ಪ್ರಯಾಗರಾಜ್ಗೆ ಹೋಗಿ ಬರುವಾಗ ರಾತ್ರಿ ಹೆದ್ದಾರಿಯಲ್ಲಿ ಲಾರಿಗಳು ನಿಂತು ಟ್ರಾಪಿಕ್ ಜಾಮ್ ಆಗಿ ಟ್ಯಾಕ್ಸಿ ಚಾಲಕ ಯಾವಯಾವುದೋ ಹಳ್ಳಿ ಗಲ್ಲಿ ರಸ್ತೆ ನುಗ್ಗಿ ಅಂತೂ ನಮ್ಮನ್ನು ವಾಪಸ್ಸು ಕಾಶಿಗೆ ತಲುಪಿಸಿದ್ದ. ಮತ್ತೆಂದು ಕರ್ನಾಟಕದಿಂದ ಇಷ್ಟು ದೂರದ ಅಯೋಧ್ಯೆಗೆ ಬಂದು ಹೋಗುವುದು ಸಾಧ್ಯವಾಗುವುದೋ ಇಲ್ಲವೋ..? ಎಂದು ನನ್ನ ಹೆಂಡತಿಯ ಅಕ್ಕ ಮತ್ತು ಭಾವನವರ ಒತ್ತಾಸೆಯ ಪ್ರಯತ್ನ ಕಡೆಗಳಿಗೆಯಲ್ಲಿ ಕೈಗೆಟುಕಲಿಲ್ಲ. ಇದೇ ಕುತೂಹಲದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಆಯೋಧ್ಯೆಯ ಕಥೆಯನ್ನು ಅಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ದೃಶ್ಯವನ್ನು ಟಿ.ವಿ.ಯಲ್ಲಿ ಕುತೂಹಲದಿಂದ ನೋಡುತ್ತಿದ್ದೇವೆ, ಇರಲಿ.
ನಾವು ಶನಿವಾರ ಬೆಳಿಗ್ಗೆ ಐದಕ್ಕೆಲ್ಲಾ ಎದ್ದು ಸ್ನಾನ ಮಾಡಿ ಹಾಸನದಿಂದ ಗೊರೂರು ಮಾರ್ಗ ಚುಂಚನಕಟ್ಟೆಗೆ ಹೋಗುವ ಮೈಸೂರು ಬಸ್ಸನ್ನು ಹಿಡಿದು 10.45ರ ಹೊತ್ತಿಗೆ ಚುಂಚನಕಟ್ಟೆ ತಲುಪಿದೆವು. ಈ ದಿನದಂದು ಕಲ್ಯಾಣೋತ್ಸವ ಇತ್ತಾಗಿ ನನಗೂ ಉತ್ಸವ ಮೂರ್ತಿಯ ಅಡ್ಡೆ ಹೊತ್ತು ನಡೆಯಲು ಅವಕಾಶ ದೊರಕಿತು.
ನಾನು ಈ ಹಿಂದೆ ಸಂಗಮ ಎಂಬ ಪುಸ್ತಕ ಪ್ರಕಟಿಸಿ ಇದರಲ್ಲಿ ಕಾವೇರಿ ನದಿ ದಡದಲ್ಲಿ ತಲಕಾವೇರಿಯಿಂದ ತಮಿಳುನಾಡಿನ ಪೂಂ ಪಟ್ಟಣದವರೆಗೆ ಬರುವ ಐತಿಹ್ಯ ದೇಗುಲಗಳ ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು, ನದಿ ಅಣೆಕಟ್ಟೆ ಯೋಜನೆಗಳು ಹೇಮಾವತಿ ನದಿ ಒಳಗೊಂಡು ಉಪನದಿಗಳು ಆ ದಡಗಳ ಸ್ಥಳ ಪರಿಚಯ ಕುರಿತಾಗಿ ಬರೆದಿರುವೆ.
ಸಾಲಿಗ್ರಾಮದಿಂದ 7 ಕಿ.ಮೀ.ದೂರ (ನಾವು ಈ ಮಾರ್ಗವೇ ಹೋಗಿದ್ದೆವು)
ಕೆ.ಆರ್.ನಗರದಿಂದ 15 ಕಿ.ಮಿ. ದೂರವಿರುವ ಚುಂಚನಕಟ್ಟೆಯಲ್ಲಿ ಕಾವೇರಿ ನದಿ 65 ಅಡಿ ಎತ್ತರದಿಂದ ಬಂಡೆಗಳ ಮೇಲಿಂದ ಬೋರ್ಗರೆಯುತ್ತಾ ದುಮ್ಮಿಕ್ಕಿ ಮೋಹಕ ಜಲಪಾತ ದೃಶ್ಯ ರಮಣೀಯವಾಗಿದೆ. ಕಾವೇರಿ ನದಿಯ ಮೊದಲ ಜಲಪಾತ. ಈ ಜಲಪಾತದ ಬಂಡಗಳು ಒಡೆದು ಪದರ ಪದರವಾಗಿದ್ದು ಲಕ್ಷ್ಮಣನು ತೃಣಮುನಿಗಳ ಕೋರಿಕೆಯಂತೆ ಬಾಣದಿಂದ ಬಂಡೆಯನ್ನು ಭೇದಿಸಿ. ಈ ಭೇದಿಸಿದ ಬಂಡೆಯ ಮೇಲಿನ ಪಾದದ ಗುರುತು ತೃಣಬಿಂದು ಮಹಾಮುನಿಗಳ ಪಾದವೆಂದು ಹೇಳುತ್ತಾರೆ. ಸೀತಾದೇವಿ ಸ್ನಾನ ಮಾಡಿದ ಸ್ಥಳವೆಂಬ ನಂಬಿಕೆಯಲ್ಲಿ ಹಳದಿ ಬಣ್ಣದ ನೀರು ಬೀಳುವ ಜಾಗವನ್ನು ಸೀತೆಮಡು ಎಂದೂ, ಜಲಪಾತದ ಶಬ್ಧವನ್ನು ಸೀತೆಮೊರೆವು ಎನ್ನುತ್ತಾರೆ. ಸೀತೆಯು ಸ್ನಾನ ಮಾಡುವಾಗ ಆವಳು ಬಳಸಿದ ಅರಿಶಿಣ ಸೀಗೆಕಾಯಿಯ ಬಣ್ಣವೆಂದೂ ಜಲಪಾತದ ಆ ಭಾಗವನ್ನು ಸೀತೆ ಬಚ್ಚಲು ಎಂದೂ ಕರೆಯುತ್ತಾರೆ. ಜಲಪಾತ ದುಮ್ಮಿಕ್ಕುವ ರಭಸದ ಸದ್ದು ಸುತ್ತಲ ಹಳ್ಳಿಗಳಿಗೆ ಕೇಳುತ್ತದೆಯಾದರೂ ಶ್ರೀ ಕೋದಂಡರಾಮ ದೇವಾಲಯದ ಗರ್ಭಗುಡಿಯ ಒಳಗೆ ಕೇಳುವುದಿಲ್ಲ. ಇದಕ್ಕೆ ಸ್ಥಳೀಯರು ರಾಮಾಯಣ ಕಾಲದಲ್ಲಿ ರಾಮ, ಸೀತೆ ಲಕ್ಷ್ಮಣರು ಇಲ್ಲಿ ಕೆಲವು ಸಮಯ ತಂಗಿದ್ದು ಆ ವೇಳೆ ಚುಂಚ ಚುಂಚಿ ಎಂಬ ರಾಕ್ಷಸರು ಈ ಪ್ರದೇಶದ ಜನರಿಗೆ ನೀಡುತ್ತಿದ್ದ ಹಿಂಸೆಯಿಂದ ಮುಕ್ತಿ ನೀಡಲು ರಾಮನು ಈ ರಾಕ್ಷಸರ ವಧೆ ಮಾಡಿ ಆ ರಾಕ್ಷಸರು ನಮ್ಮ ಹೆಸರು ಇಲ್ಲಿಗೆ ಕೊನೆಯಾಗುವುದು ಎಂದು ದುಃಖಿಸಲು ರಾಮನು ಈ ಪ್ರದೇಶಕ್ಕೆ ಚುಂಚಾರಣ್ಯ ಎಂದು ನಾಮಕರಣ ಮಾಡಿದನೆಂದುಕ್ರಮೇಣ ಚುಂಚನಕಟ್ಟೆ ಆಯಿತೆಂದು ಹೇಳುತ್ತಾರೆ.
ಇಲ್ಲಿ ವಾಸ್ತವ್ಯ ಮಾಡಿ ಸೀತೆ ವಿಶ್ರಾಂತಿ ಪಡೆಯುವ ವೇಳೆ ಆಕೆಗೆ ತೊಂದರೆ ಆಗಬಾರದೆಂದು ರಾಮನು ಕಾವೇರಿ ಹರಿಯುವ ಹಾದಿಗೆ ಅಡ್ಡಲಾಗಿ ಬಾಣ ಬಿಟ್ಟು ನೀರು ಹರಿಯುವ ಸದ್ದು ನನ್ನ ಸೀತೆ ಇರುವಲ್ಲಿಗೆ ಕೇಳಕೂಡದು ಎಂದು ಆಜ್ಞಾಪಿಸಿ ಅಂತೆಯೇ ಕಾವೇರಿ ಹರಿಯುವ ಶಬ್ಧ ಕೋದಂಡರಾಮ ದೇವಾಲಯದ ಒಳಭಾಗಕ್ಕೆ ಕೇಳುವುದಿಲ್ಲ ಎಂದೂ ಹೇಳುತ್ತಾರೆ.
ಕಾವೇರಿ ನದಿ ದಂಡೆಯ ಚುಂಚನಕಟ್ಟೆಯಲ್ಲಿ ತೃಣ ಮುನಿಗಳು ತಪಸ್ಸನ್ನಾಚರಿಸಿದರೆಂದು ಪ್ರತೀತಿ. ರಾವಣನ ವಧೆ ನಂತರ ರಾಮನು ಅಯೋಧ್ಯೆಗೆ ಹಿಂತಿರುಗುವಾಗ ಇಲ್ಲಿರುವ ತೃಣಬಿಂದು ಮುನಿಗಳ ಆಶ್ರಮಕ್ಕೆ ಭೇಟಿ ಕೊಟ್ಟಿದ್ದನೆಂದು ದಂತಕತೆ ಹೇಳುತ್ತದೆ. ಚುಂಚ ಮತ್ತು ಚುಂಚಿ ಎಂಬ ಬೇಡ ದಂಪತಿಗಳು ಮಹಾಕ್ರೂರಿಗಳಾಗಿ ಸಾಧು ಸಜ್ಜನರಿಗೆ ತೊಂದರೆ ಕೊಡುತ್ತಿದ್ದ ಕಾಲಕ್ಕೆ ತೃಣಬಿಂದು ಮುನಿಗಳಿಂದಾಗಿ ಕಾಡುಮೃಗಗಳಿಗೆ ತಾವು ಬಿಟ್ಟ ಬಾಣಗಳು ಫಲಿಸದೆ ಇರಲು ಈ ಮುನಿಗಳ ತಪಶಕ್ತಿ ಎಂದು ತಿಳಿದು ಬೇಡ ದಂಪತಿಗಳ ಮನ ಪರಿವರ್ತನೆಯಾಗಿ ಮುನಿಗಳಿಗೆ ಶರಣಾಗಿ ತಮ್ಮ ಪೂರ್ವ ಜನ್ಮ ವೃತ್ತಾಂತವನ್ನು ಮುನಿಗಳಿಂದ ತಿಳಿದು ಮುನಿಗಳ ಹಿತವಚನದಂತೆ ತಮ್ಮ ಶಾಪ ವಿಮೋಚನೆಗಾಗಿ ಆಶ್ರಮವಾಸಿಗಳಾದರೆಂದು ಈಗ ಶ್ರೀರಾಮ ದೇವಾಲಯದ ಮುಂದೆ ಕಾವಲುಗಾರರಾಗಿ ಇರುವ ವಿಗ್ರಹಗಳನ್ನು ಚುಂಚ ಚುಂಚಿಯರ ವಿಗ್ರಹಗಳೆಂದು, ಇವರಿಂದಾಗಿಯೇ ಈ ಕ್ಷೇತ್ರಕ್ಕೆ ಚುಂಚನಕಟ್ಟೆ ಎಂಬ ಹೆಸರು ಬಂದಿದೆ ಎಂಬ ಕಥೆಯೂ ಇದೆ.
ಇಲ್ಲಿನ ಶ್ರೀ ಕೋದಂಡರಾಮ ದೇವಾಲಯವು ಬಹಳ ಸುಂದರವಾದ ರಚನೆಯಿಂದ ಕೂಡಿ ಪ್ರಸಿದ್ದಿ ಪಡೆದಿದೆ. ವಿಶೇಷವೆಂದರೆ ಗರ್ಭಗುಡಿಯಲ್ಲಿ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ. ಶ್ರೀರಾಮನ ಬಲಗಡೆ ಸೀತೆ ಎಡಗಡೆ ಲಕ್ಷ್ಮಣ ವಿಗ್ರಹವಿದ್ದು ಶ್ರೀಮನ್ನಾರಾಣನ ದಶಾವತಾರದ ಚಿತ್ರಗಳನ್ನು ದೇವಾಲಯದ ಹೊರಾಂಗಣ ಗೋಡೆಯಲ್ಲಿ ಚಿತ್ರಿಸಲಾಗಿದೆ. 1993ರಲ್ಲಿ ನಿರ್ಮಿಸಿರುವ ಈ ದೇವಾಲಯದ ಮಹಾದ್ವಾರದ ರಾಜಗೋಪುರವು ದೇಗುಲದ ಸಹಜ ಸೌಂದರ್ಯ ಹೆಚ್ಚಿಸಿದೆ. ಉತ್ತರಾಯಣ ಪುಣ್ಯಕಾಲ ಅರ್ಥಾತ್ ಮಕರ ಸಂಕ್ರಾಂತಿ ಹಬ್ಬದ ಮಾರನೇ ದಿನ ಶ್ರೀಕೋದಂಡರಾಮ ದೇವರ ಉತ್ಸವಮೂರ್ತಿಯ ಬ್ರಹ್ಮರಥೋತ್ಸವ ಬಹು ವಿಜೃಂಭಣೆಯಿಂದ ಜರುಗುತ್ತದೆ. ಈ ವರ್ಷ ತಾ. 16-1-2024ರ ಮಂಗಳವಾರ ರಥಾರೋಹಣ ಮತ್ತು ಬ್ರಹ್ಮ ರಥೋತ್ಸವ ಬೆಳಗ್ಗೆ 11.10 ರಿಂದ 12.10 ನಿಮಿಷಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಡೆಯುವುದಾಗಿ ದೇವಸ್ಥಾನದಲ್ಲಿ ನನಗೆ ಸಿಕ್ಕ ಅಹ್ವಾನ ಪತ್ರಿಕೆಯಲ್ಲಿದೆ. ದೇವಸ್ಥಾನ ಪರಿಸರ ಈಗ ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಅಭಿವೃದ್ದಿ ಹೊಂದಿ ಒಂದು ಆಕರ್ಷಣೀಯ ಪ್ರವಾಸಿ ತಾಣವಾಗಿ ಸ್ವಚ್ಛತೆಯಿಂದ ಕೂಡಿದೆ. ಇಲ್ಲಿ ರಥೋತ್ಸವ ಅಂಗವಾಗಿ ಸುಮಾರು 15 ದಿನಗಳ ಕಾಲ ನಡೆಯುತ್ತಿದ್ದ ದನಗಳ ಜಾತ್ರೆ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿತ್ತು. ಒಳ್ಳೆಯ ಎತ್ತುಗಳ ಜೋಡಿಗೆ ಚುಂಚನಕಟ್ಟೆ ಜೋಡಿ ಎಂದು ಕರೆಯುವುದನ್ನು ನಾವು ಕೇಳಿದ್ದೇವೆ. ಇಲ್ಲಿ ಜಾತ್ರೆ ನಡೆಯುವ ಸಂಕೇತವಾಗಿ ಬಸ್ ನಿಲ್ದಾಣ ಕೆಳಗೆ ದೇವಸ್ಥಾನದ ಮೇಲ್ಗಡೆ ಇರುವ ವೃತ್ತದಲ್ಲಿ ಬಸವನ ವಿಗ್ರಹವಿದೆ. ರಥೋತ್ಸವ ನಡೆದ ಎರಡು ದಿವಸಕ್ಕೆ ತೀರ್ಥಕಡದಲ್ಲಿ ತೆಪ್ಪೋತ್ಸವ ತಾ. 18-1-2024ರ ಗುರುವಾರ ಜರುಗುತ್ತದೆ. ಈ ತೀರ್ಥಕಡದಲ್ಲಿ ಕಂಚಿನ ರಥ ಮುಳುಗಿ ಹೋಗಿದೆ ಎಂದು ಹೇಳುತ್ತಾರೆ.
ಚುಂಚನಕಟ್ಟೆಯ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಲಾಗಿದ್ದು ಇದನ್ನು ಹನುಮಂತಕಟ್ಟೆ ಎನ್ನುತ್ತಾರೆ. ಈ ಕಟ್ಟೆಯನ್ನು ಮೈಸೂರು ಅರಸರಾಗಿದ್ದ ಚಿಕ್ಕ ದೇವರಾಜ ಒಡೆಯರ್ ಕಾಲದಲ್ಲಿ ಕ್ರಿ.ಶ.1672ರಲ್ಲಿ ನಾಲೆ ನಿರ್ಮಿಸಲಾಗಿದೆ. ಮುಂದೆ ಇದು ಶಿಥಿಲವಾದಾಗ ದಿವಾನ್ ಪೂರ್ಣಯ್ಯನವರು ದುರಸ್ತಿ ಮಾಡಿಸಿದ್ದಾರೆ. ಈಗ ಶ್ರೀ ಕೋದಂಡರಾಮ ದೇವಾಲಯದ ಎದುರು ಭವ್ಯವಾದ ಹನುಮಂತನ ಬಹು ಎತ್ತರದ ವಿಗ್ರಹವನ್ನು ಕಡೆದು ನಿಲ್ಲಿಸಿ ದೇವಾಲಯ ಪರಿಸರಕ್ಕೆ ವಿಶೇಷ ಮೆರುಗು ತಂದಿದೆ. ಇಲ್ಲಿ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಇದೆ. ನಾವು ದೇವಸ್ಥಾನ ಒಳಾಂಗಣ ಸುತ್ತುವಾಗ ಶ್ರೀರಾಮ ಕಲ್ಯಾಣ ಚಿತ್ರಣವಿರುವ ಸ್ಥಳದಲ್ಲಿ ಉತ್ಸವಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಗುತ್ತಿತ್ತು.
ಹಿಂದೊಮ್ಮೆ ಚಿಗಳ್ಳಿ ಆರ್.ಡಿ.ಗೌಡರು ಚುಂಚನಕಟ್ಟೆ ಜಾತ್ರೆ ಜೋಡೆತ್ತು ಹೊಡೆದಿದ್ದರು. ಯಾವುದೇ ವಿಷಯ ತಿಳಿಸದೇ ಇಲ್ಲೇ ಹೋಗಿಬರೋಣ ಬನ್ನಿ ಎಂದು ನನ್ನನ್ನು ಒಂದು ಲಾರಿಯಲ್ಲಿ ಕರೆದುಕೊಂಡು ಹೋಗಿದ್ದರು. ಆ ಲಾರಿಯಲ್ಲಿ ಒಂದು ಬಿಳಿ ಕುದುರೆ ಅವರ ಶಾಲೆಯ ಹೆಣ್ಣು ಮಕ್ಕಳು ಇದ್ದರು. ಸರಿ ರಾತ್ರಿ 9 ಗಂಟೆ ರಾತ್ರಿಯಲ್ಲಿ ಸೊಗಸಾದ ಜೋಡಿ ಎತ್ತುಗಳನ್ನು ಬಟ್ಟೆಗಳಿಂದ ಅಲಂಕರಿಸಿ ವಾಲಗದೊಂದಿಗೆ ಜಾತ್ರೆಯಲ್ಲಿ ಅದ್ದೂರಿ ಮೆರವಣಿಗೆ ಮಾಡಿಸಿದ್ದರು. ಹೆಣ್ಣು ಮಕ್ಕಳು ಕಳಶ ಹೊತ್ತು ನಡೆದಿದ್ದರು. ಎತ್ತುಗಳಿಗೆ ರಾಜಮಹಾರಾಜರಂತೆ ಚಾಮರದ ಶೃಂಗಾರ. ಮುಂದೆ ಕುದುರೆಯ ನಡೆ. ಇದರ ಒಂದು ವರದಿ ಮಾಡಬೇಕೆಂಬ ಬಯಕೆಯಲ್ಲಿ ಅವರು ನನ್ನನ್ನು ಕರೆದೊಯ್ದಿದ್ದರು. ಮೆರವಣಿಗೆ ಮುಗಿದು ಅರ್ಧರಾತ್ರಿಯಲ್ಲಿ ಅಲ್ಲಿಯೇ ಅಡಿಗೆ ಮಾಡಿಸಿ ಉಣ್ಣುವ ಹೊತ್ತಿಗೆ ಹಸಿದು ಹೈರಾಣಾಗಿದ್ದರೂ ಆಗ ನಾನು ಬರೆದಿದ್ದ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿ ಆರ್.ಡಿ.ಗೌಡರು ಸಂತೋಷಪಟ್ಟರು. ನನಗೂ ಖುಷಿಯಾಗಿ ಆ ರಾತ್ರಿ ಅನುಭವಿಸಿದ ವನವಾಸ ಬೇಸರ ದೂರವಾಗಿತ್ತು.
ಮಡದಿ ಶಕುಂತಲೆ ಹೇಳಿದಳು “ರೀ, ನಾನು ಚಿಕ್ಕವಳಿದ್ದಾಗ ನಮಪ್ಪನ ಜೊತೆ ಇಲ್ಲಿಗೆ ಬಂದು ಅಡಿಗೆ ಮಾಡಿ ಪರ ಮಾಡುತ್ತಿದ್ದೆವು” ಎಂದಳು. ಪರ ಎಂದರೆ ಇಲ್ಲಿಯೇ ಅಡಿಗೆ ಮಾಡಿ ಅಟ್ಟುಂಡು ಹೋಗುವುದು. ಇಲ್ಲಿ ಭಕ್ತರು ಮುಡಿ ಕೊಟ್ಟು ತಮ್ಮ ನೆಂಟರಿಷ್ಟರು ಕರೆದುಕೊಂಡು ಬಂದು ಅಡಿಗೆ ಮಾಡಿ ಅಟ್ಟುಂಡು ಹೋಗುತ್ತಾರೆ. ಈಗಲೂ ದೇವಸ್ಥಾನದ ಎಡಬದಿ ತಗ್ಗಿನಲ್ಲಿ ಕೆಲವರು ಅಡಿಗೆ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡೆವು. ದೇವಸ್ಥಾನದ ಕೆಳಭಾಗ ತುಂಬಾ ಮರಗಿಡಗಳು ಬೆಳೆದು ತಂಪಾದ ವಾತಾವರಣವಿದೆ. ದೇವಸ್ಥಾನ ಮುಂಭಾಗ ಬೆಳೆದಿರುವ ಒಂದು ಅರಳಿಮರ ಸುತ್ತಾ ಸ್ವಲ್ಪ ಎತ್ತರವಾಗಿ ಅಂಗಳ ನಿರ್ಮಿಸಿ ಮೆಟ್ಟಿಲು ಮಾಡಿ ವಿಶೇಷವಾಗಿ ಧರ್ನುಮಾಸದಲ್ಲಿ ಅರಳಿಮರ ಸುತ್ತುವ ಹೆಂಗಸರಿಗೆ ಅನುಕೂಲ ಕಲ್ಪಿಸಿದ್ದಾರೆ. ನದಿ ಕಡೆಗೆ ಯಾರೂ ಹೋಗದಂತೆ ರಕ್ಷಣಾ ಬೇಲಿ ಇದೆ. ಇಲ್ಲಿನ ಪರಿಸರ ವೀಕ್ಷಿಸಲು ವೀಕ್ಷಣ ಗೋಪುರವಿದೆ. ಇಲ್ಲಿ ನಾವು ಹತ್ತಿ ದೇವಸ್ಥಾನ, ಜಲಪಾತದ ಪೋಟೋ ತೆಗೆದವು. ದೇವಸ್ಥಾನದ ಮುಂಭಾಗ ಇದ್ದ ರಥಕ್ಕೆ ವಾರ್ನಿಶ್ ಕೆಲಸ ನಡೆಯುತ್ತಿತ್ತು. ಜಾತ್ರೆ ಪ್ರಯುಕ್ತ ಬಳೇ ಅಂಗಡಿ. ಪುರಿಕಾರ ಅಂಗಡಿಗಳು ಇದ್ದವಾಗಿ ನಾವು ಪುರಿಕಾರ ಖರ್ಜೂರ ಖರೀದಿಸಿ ಹಾಸನಕ್ಕೆ ಮರಳಿದೆವು.
ಗೊರೂರು ಅನಂತರಾಜು, ಹಾಸನ.
ಮೊ: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.-573201