ಸಿಂದಗಿ; ಇಡೀ ದೇಶಕ್ಕೆ ಹರಡಿದ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ನಡೆಯದಿರುವ ಕಾರಣ ಅನೇಕ ಪ್ರದೇಶಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿವೆ, ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಾಚಾರ್ಯ ಎಮ್.ಎಸ್. ಹೈಯಾಳಕರ್ ಹೇಳಿದರು.
ಪಟ್ಟಣದ ಪದ್ಮರಾಜ ಮಹಿಳಾ ಪಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “18 ವರ್ಷದೊಳಗಿನ ವಯೋಮಾನದ ಅಪ್ರಾಪ್ತ ವಿವಾಹಿತ ಮಹಿಳೆಯರಲ್ಲಿ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಿ ಮಾನ್ಯ ಸವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ” ಹೆಣ್ಣು ಮಕ್ಕಳಿಗೆ 18ವರ್ಷ, ಗಂಡು ಮಕ್ಕಳಿಗೆ 21 ವರ್ಷ ವಯಸ್ಸಾಗುವವರೆಗೆ ವಿವಾಹ ಮಾಡಬಾರದು, ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ಹೆರಿಗೆ ಸಂದರ್ಭದಲ್ಲಿ ಮಗು ಮತ್ತು ತಾಯಿ ಮರಣಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇವರಿಬ್ಬರೂ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಮಕ್ಕಳು ವಿಕಲಾಂಗರಾಗಿ ಜನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ “ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಹಬ್ಬುತ್ತಿರುವ ಬಾಲ್ಯ ವಿವಾಹ ಪದ್ದತಿಯನ್ನು ನರ್ಮೂಲನೆ ಮಾಡಬಹುದು ಎಂದರು.
ಮಹಾವಿದ್ಯಾಲಯದ ಉಪನ್ಯಾಸಕ ಗಿರೀಶ ಕುಲಕರ್ಣಿ ಮಾತನಾಡಿ, ಆಡುತ್ತಾ, ಕಲಿಯುತ್ತ, ನಲಿಯುತ್ತ ಜೀವನ ಅನುಭವಿಸಬೇಕಾದ ಅಪ್ರಾಪ್ತ ಹೆಣು ಮಕ್ಕಳನ್ನು ಮದುವೆ ಎಂಬ ಸಂಕಷ್ಟಕ್ಕೆ ದೂಡುವ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ದತಿ ಸಮಾಜದಲ್ಲಿ ಇನ್ನೂ ಜೀವಂತವಾಗಿವೆ. ಕಾನೂನು ರೂಪಿಸಿ ಈ ವಿವಾಹಗಳನ್ನು ತಡೆಯಲು ಹಲವು ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಬಾಲ್ಯ ವಿವಾಹ ಪ್ರಕರಣಗಳು ವರದಿ ಆಗುತ್ತಲೇ ಇದೆ. ಬಡತದಿಂದಾಗಿ ಹೆಣ್ಣು ಮಕ್ಕಳನ್ನು ಭಾರ ಎಂದು ಭಾವಿಸುವ ಪೋಷಕರು ಮದುವೆ ಮಾಡಿಕೊಟ್ಟು ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ನಿರ್ಧರಿಸುತ್ತಿರುವುದು ಅದು ತಪ್ಪು ತಿಳಿವಳಿಕೆ ಎಂಬುದನ್ನು ಅರಿವು ಮೂಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಬಾಹುಬಲಿ ಒನಕುದರಿ, ಶ್ರೀನಿವಾಸ ಪತ್ತಾರ, ಆಸಿಫ್ ಕೋಕಣಿ, ಹೇಮಾ ಹಿರೇಮಠ, ರೇವಣಸಿದ್ದ ಹಾಲಕೇರಿ, ಸಾಯಬಣ್ಣ ಸಜ್ಜನ, ಲಕ್ಷ್ಮಿ ಮಾರ್ಸನಳ್ಳಿ, ಹೇಮಾ ಕಾಸರ, ನಾಗಯ್ಯ ಹಿರೇಮಠ, ಲಕ್ಷ್ಮಿ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.