ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತು ವಿನಃ ಆಲಸಿಯ ಆಸ್ತಿಯಲ್ಲ. ನಿರಂತರ ಪ್ರಯತ್ನದಿಂದಾಗಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಹಿರಿಯ ಸಾಹಿತಿ ಶಿಕ್ಷಕ ಡಾ. ಮಹದೇವ ಜಿಡ್ಡಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸ್ಥಳೀಯ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಜರುಗಿದ ಗುರುಬಳಗದ ಸತ್ಕಾರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಸದಾ ಸಾಮಾಜಿಕ ಕಾಳಜಿ ಅತ್ಯವಶ್ಯಕವಾಗಿದೆ. ಯಾವುದೇ ವೃತ್ತಿಯಾಗಿರಲಿ ಅದರಲ್ಲಿ ಶೃದ್ಧೆ ಹಾಗೂ ಪ್ರಾಮಾಣಿಕವಾಗಿ ದುಡಿಮೆ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸ್ಪರ್ಧಾತ್ಮಕಯುಗದಲ್ಲಿ ತಾವು ಮಾಡಿರುವ ಸಾಧನೆ ಮೆಚ್ಚುವಂತಹದು. ತಮ್ಮ ಸೇವೆ ಸಾರ್ವಜನಿಕ ಜೀವನಕ್ಕೆ ಉಪಯುಕ್ತವಾಗುವ ನಿಟ್ಟಿನಲ್ಲಿ ಸದ್ಬಳಕೆಯಾಗಬೇಕೆಂದರು.
ತಾಲೂಕಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ಎಸ್.ಎಸ್ ಪಾಟೀಲ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿಸಬೇಕೆಂಬುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗ ಬೇಕು. ಪಾಲಕ ಪೋಷಕರಾದ ನಾವುಗಳು ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಜೀವನ ರೂಪಿಸಿಕೊಡುವದು ಆದ್ಯ ಕರ್ತವ್ಯವಾಗಿದೆ. ಉನ್ನತ ಶಿಕ್ಷಣ ಆಧ್ಯಾತ್ಮಿಕ ಜೀವನ ಅತ್ಯಮೂಲ್ಯವಾಗಿದೆ. ಸದ್ವಿಚಾರ ಸಹಕಾರದ ಮನೋಭಾವ ಅತ್ಯಗತ್ಯವಾಗಿದೆ. ಕೋವಿಡ್-೧೯ ಸಂದರ್ಭದಲ್ಲಿ ಜೀವನವೆ ಬೇಸರ ತಂದಿರುವದು ವಿಪರ್ಯಾಸವಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನೆಮ್ಮದಿಯ ಜೀವನ ನಡೆಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಡ್ವಿನ್ ಪರಸನ್ನವರ, ಸಂತ ಶಿರೋಮನಿ ಶಿವರಾಮದಾದಾ ಗ್ರಂಥ ಕರ್ತ ಮಾಯಪ್ಪ ರಾಜಾಪೂರ ಮಾತನಾಡಿ, ಸಮಾಜದ ಅಂಕು ಡೊಂಕುಗಳಿಗೆ ಅಂಜದೆ ನಿಸ್ವಾರ್ಥ ಜೀವನ ನಮ್ಮದಾಗಬೇಕು. ಸಮರ್ಥ ಸಧೃಡ ಸಮಾಜ ನಿರ್ಮಾಣವಾಗಬೇಕು. ಪ್ರತಿಯೊಬ್ಬರು ಸಮಾಜ ಕಟ್ಟುವ ನಿಟ್ಟಿನಲ್ಲಿ ಅಗತ್ಯ ಸಹಾಯ ಸಹಕಾರ ನೀಡಬೇಕು. ಸಾಧಕರು ಸಮಾಜ ಮುಖಿಯಾಗಿ ಬೆಳೆಯಬೇಕು ಇತರರಿಗೆ ಪ್ರೇರಣಾದಾಯಕರಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ಪೃಥ್ವಿರಾಜ ಪಾಟೀಲ, ಸುಷ್ಮಾ ಪರಸನ್ನವರ, ವಿನೋದ ಕಳ್ಳಿಗುದ್ದಿ, ಪಿ.ಎಸ್.ಐ ಮಹೇಶ ಕಳ್ಳಿಗುದ್ದಿ, ಸಂತ ಶಿರೋಮನಿ ಶಿವರಾಮದಾದಾ ಗ್ರಂಥ ಕರ್ತ ಮಾಯಪ್ಪ ರಾಜಾಪೂರ ಹಾಗೂ ಸುಷ್ಮಾ ಪರಸನ್ನವರ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘಟನೆಯ ರಾಜ್ಯ ಸಂಚಾಲಕ ಮಾಲತೇಶ ಸಣ್ಣಕ್ಕಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ, ನಿರ್ದೇಶಕ ಶಿವಲಿಂಗ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ, ಪದವೀಧರ ಶಿಕ್ಷಕರ ಸಂಘದ ಗೋವಿಂದ ಸಣ್ಣಕ್ಕಿ, ಸಿ.ಆರ್.ಪಿ ಗಳಾದ ಆರ್,.ಎಸ್ ಗೋಡೇರ, ಪಿ.ಜೆ ಕಳ್ಳಿಮನಿ, ಜಗದೀಶ ಕೊಳ್ಳಾರ, ಮಹದೇವ ಅಮಣಿ, ಖಾನಟ್ಟಿ ಮಾಜಿ ಗ್ರಾ.ಪಂ ಉಪಾದ್ಯಕ್ಷ ಸಿದ್ದಪ್ಪ ಹಳ್ಳೂರ, ಮುನ್ಯಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಲಂಗೋಟಿ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಆರ್ ಕೊತ್ತಲ, ಶಿಕ್ಷಕರಾದ ಎಸ್.ಎ.ದಡ್ಡಿಮನಿ, ಹನೋಕ ದಡ್ಡಿಮನಿ, ಎಲ್.ಎಲ್ ವ್ಯಾಪಾರಿ, ಎಸ್.ಎಮ್ ಮಂಗಿ,ಎಸ್.ಬಿ ಕಳ್ಳಿಗುದ್ದಿ, ಎಸ್.ಎಲ್ ಪಾಟೀಲ, ಎಸ್.ಎಸ್ ಮಾವಿನಹಿಂಡಿ ಮತ್ತಿತರರು ಉಪಸ್ಥಿತರಿದ್ದರು.