ಸಿಂದಗಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಗ್ರಾಮಸಭೆ ನಡೆಸುವುದು ಮುಖ್ಯ. ಪೌಷ್ಟಿಕ ಆಹಾರ ,ಮಕ್ಕಳ ಕ್ರೀಡಾ ಕೂಟ, ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ, ಮಾನಸಿಕ ಅರೋಗ್ಯ ಸಂಬಂಧಿತ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಓದುವ ಬೆಳಕು ಕಾರ್ಯಕ್ರಮ ಆಯಾ ಪಂಚಾಯತಿ ವತಿಯಿಂದ ಮಕ್ಕಳಿಗೆ ಹಮ್ಮಿಕೊಳ್ಳಬೇಕು ಎಂದು ಸಂಗಮ ಸಂಸ್ಥೆಯ ಸಹನಿರ್ದೆಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಹೇಳಿದರು.
ತಾಲೂಕಿನ ರಾಂಪುರ ಪಿ. ಎ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಂಪುರ ಪಿ ಎ ಗ್ರಾಮ ಪಂಚಾಯತ್ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಮಕ್ಕಳ ಸಮಸ್ಯೆಗಳು, ಬೇಡಿಕೆಗಳು ಮತ್ತು ಪ್ರಶ್ನೆಗಳು ಹಾಕಲು ಧ್ವನಿ ಪೆಟ್ಟಿಗೆಯ ವ್ಯವಸ್ಥೆ ಪಂಚಾಯತ್ ವತಿಯಿಂದ ಮಕ್ಕಳಿಗೆ ಮಾಡಬೇಕು.
ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಗಾಗಿ ಸರ್ಕಾರದಿಂದ ಇರುವ ಯೋಜನೆಗಳು/ಸೌಲಭ್ಯಗಳು, ಮಕ್ಕಳ ಶಿಕ್ಷಣ, ಅರೋಗ್ಯ ವ್ಯವಸ್ಥೆ ವಸತಿ ನಿಲಯಗಳು, ವಿಪತ್ತು ನಿರ್ವಹಣೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ, ಸಾರ್ವಜನಿಕ ಕಟ್ಟಡ, ಅಂಗನವಾಡಿ ಇವುಗಳ ಕುರಿತು ಚರ್ಚೆ ಮಾಡಲು ಮುಕ್ತ ಅವಕಾಶ ನೀಡುವುದು. ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಕ್ಕಳ ನ್ಯಾಯ ಕಾಯ್ದೆ, ಮಕ್ಕಳ ಸಾಗಣಿಕೆ ನಿಷೇಧ, ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ, ಜೀತ ಪದ್ದತಿ ನಿಷೇಧ ಕಾಯ್ದೆ, ವಿಶೇಷ ಚೇತನರ ಹಕ್ಕುಗಳ ಅಧಿನಿಯಮ ಮತ್ತು ಮಕ್ಕಳ ಸಹಾಯವಾಣಿ 1098 ಕುರಿತು ಮಾಹಿತಿ ನೀಡಿದರು.
ರಾಂಪೂರ ಸರ್ಕಾರಿ ಪ್ರೌಢಶಾಲೆಯ ಬೇಡಿಕೆಗಳು:
ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ, ಆಟದ ಸಾಮಗ್ರಿಗಳು, ಮೈದಾನ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕಂಪೌಂಡ್ ವ್ಯವಸ್ಥೆ ಹಾಗೂ ಮಳೆ ನೀರಿನ ಕೊಯ್ಲು ಹಾಗೂ ಬೊರ್ವೆಲ್.
ಸರಕಾರಿ ಪ್ರೌಡಶಾಲೆ ಗಣಿಹಾರ ಬೇಡಿಕೆಗಳು:
ಶಾಲಾ ಕೊಠಡಿಗಳು, ಶೌಚಾಲಯ, ನೀರಿನ ಟ್ಯಾಂಕ್, ಬೆಂಚ್ಗಳು, ಕಿಟಕಿಗಳು, ಕಟ್ಟಡದ ಮೇಲ್ಛಾವಣಿ ಸೋರುವುದು, ಮೈದಾನ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.
ಬೆನಕೂಟಗಿ ಬೇಡಿಕೆಗಳು:
ಶಿಕ್ಷಕರ ಕೊರತೆ, ಶೌಚಾಲಯ ಮತ್ತು ಕಂಪೌಂಡ್ ವ್ಯವಸ್ಥೆ.
ಗ್ರಾಮ ಪಂಚಾಯತಿಯ ಅಧ್ಯಕ್ಷ ನಿಂಗಣ್ಣ ಬಿಸಿನಾಳ ಮಾತನಾಡಿ, ಮಕ್ಕಳ ವಿಶೇಷ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪಂಚಾಯತಿಗೆ ಇರುವ ಅನುದಾನದಲ್ಲಿ ಅದಷ್ಟು ಮಟ್ಟಿಗೆ ಪ್ರಯತ್ನ ಪಡುತ್ತೇವೆ ಎಂದು ಹೇಳಿದರು.
ಎಸ್. ಐ ಅಂಕಲಗಿ ಸ್ವಾಗತಿಸಿ ನಿರೂಪಿಸಿದರು, ಗಣಿಹಾರ ಸರಕಾರಿ ಪ್ರೌಢಶಾಲೆ ಮುಲ್ಲಾ ವಂದಿಸಿದರು.
ಸಂಗಮ ಸಂಸ್ಥೆಯ ಬ್ರದರ್ ನೋಯಲ್, ರಾಜೀವ ಕುರಿಮನಿ, ಶರಣಗೌಡ ಪಾಟೀಲ ಎಸ್.ಡಿ.ಎಂ.ಸಿ ಅಧ್ಯಕ್ಷರು ಪ್ರೌಡಶಾಲೆ ರಾಂಪುರ ಎನ್ ಐ ಅತ್ತರ ಮುಖ್ಯೋಪಾಧ್ಯಾಯರು, ಸರಕಾರಿ ಪ್ರಾಥಮಿಕ ಶಾಲೆ ರಾಂಪುರ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.