ವಕೀಲರು ನೊಂದ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು – ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅರವಿಂದ ಕುಮಾರ
ಮೂಡಲಗಿ – ಸರ್ಕಾರ ನೀಡುತ್ತಿರುವ ಕೋರ್ಟ್ ಕಟ್ಟಡದ ಸದುಪಯೋಗ ಮಾಡಿಕೊಂಡು ನೊಂದ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಕೆಲಸ ವಕೀಲರು ಮಾಡಬೇಕು. ರಾಜ್ಯದಲ್ಲಿ ೬.೧೩ ಲಕ್ಷ ಸಿವಿಲ್ ಕೇಸುಗಳು, ೭.೨೦ ಲಕ್ಷ ಕ್ರಿಮಿನಲ್ ಕೇಸುಗಳು ಪೆಂಡಿಂಗ್ ಇವೆ. ಇವು ಬೇಗ ಮುಗಿಯಬೇಕು. ವಕೀಲರು ಕೇವಲ ಕೇಸು ನಡೆಸಿದರೆ ಸಾಲದು ಹಳ್ಳಿಗಳಿಗೆ ಹೋಗಿ ಕಾನೂನು ತಿಳಿವಳಿಕೆ ನೀಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಕುಮಾರ ಹೇಳಿದರು.
ರವಿವಾರದಂದು ಜಿಲ್ಲಾ ನ್ಯಾಯಾಂಗ ಇಲಾಖೆ ಬೆಳಗಾವಿ, ಲೋಕೋಪಯೋಗಿ ಇಲಾಖೆ, ಚಿಕ್ಕೋಡಿ ವಿಭಾಗ ಹಾಗೂ ನ್ಯಾಯವಾದಿಗಳ ಸಂಘ, ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಚನ್ನಮ್ಮ ನಗರದಲ್ಲಿರುವ ಎಪಿಎಂಸಿ ನಿವೇಶನದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಹಾಗೂ ನ್ಯಾಯಾಧೀಶರ ವಸತಿ ಗೃಹ ಇವುಗಳ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ವಕೀಲರು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಕೇಸುಗಳು ಬೇಗನೆ ಇತ್ಯರ್ಥವಾದರೆ ತಮಗೆ ಕೆಲಸವೇ ಇರುವುದಿಲ್ಲ ಎಂಬ ಭಾವನೆ ವಕೀಲರಲ್ಲಿ ಇರಬಾರದು ಎಂದು ಅವರು ಹೇಳಿದರು.
ಸಮಾಜ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು. ಕೇಸುಗಳಲ್ಲಿ ಕ್ರಿಮಿನಲ್ ಕೇಸುಗಳು ಹೆಚ್ಚಾಗಿದ್ದರೆ ಅದು ನಮ್ಮ ಸಮಾಜ ಹೋಗುತ್ತಿರುವ ದಾರಿಯನ್ನು ಸೂಚಿಸುತ್ತದೆ. ನ್ಯಾಯಾಂಗದ ಮೇಲೆ ಗೌರವ ಹೆಚ್ಚಾಗಬೇಕಾದರೆ ಐದು ವರ್ಷ, ಹತ್ತು ವರ್ಷಗಳ ಹಿಂದಿನ ಕೇಸುಗಳನ್ನು ಮೊದಲು ಮುಗಿಸಬೇಕು ಇಲ್ಲದಿದ್ದರೆ ನಾವು ಸಮಾಜಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಜೋಶಿ ಹೇಳಿದರು.
ನ್ಯಾಯಾಲಯಕ್ಕೆ ಹೊಸ ಕಟ್ಟಡ ಬಂದರೆ ವಕೀಲರ ಹೊಣೆಗಾರಿಕೆ ಜಾಸ್ತಿಯಾದಂತೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇಲ್ಲಿ ಎಲ್ಲರಿಗೂ ನ್ಯಾಯ ಸಿಗಲಿ. ಈ ಕಟ್ಟಡ ನ್ಯಾಯ ದೇಗುಲವಾಗಲಿ ಎಂದು ಹಾರೈಸಿದರು.
ನ್ಯಾಯಾಲಯ ಸಂಕೀರ್ಣ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಸಚಿನ್ ಮಗದುಮ್ ಅವರು, ವಕೀಲ ವೃತ್ತಿ ಪ್ರಥಮ ಆದ್ಯತೆಯಾಗಬೇಕು. ಹೆಣ್ಣು ಮಕ್ಕಳು ವಕೀಲರಾಗಲು ಮುಂದೆ ಬರಬೇಕು
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನ್ಯಾಯಾಂಗಕ್ಕೆ ಸರ್ಕಾರದ ಸಹಕಾರವಿದೆ. ಹಾಗಂತ ನೂತನ ಕಟ್ಟಡವಾದರೆ ಕೇಸುಗಳು ಹೆಚ್ಚಾಗಬಾರದು. ಕೇಸು ಹಾಕಲು ಬಂದವರಿಗೆ ಕೌನ್ಸೆಲಿಂಗ್ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ವ್ಯವಸ್ಥೆ ಬಲಿಷ್ಠವಾದಾಗ ಅದರ ವಿರುದ್ಧ ಮಾತನಾಡಲು ಸಾಮಾನ್ಯರು ನ್ಯಾಯಾಲಯಕ್ಕೇ ಬರಬೇಕಾಗುತ್ತದೆ. ಅತ್ಯಂತ ವಿಶ್ವಾಸಾರ್ಹ ಕ್ಷೇತ್ರವಾಗಿ ಉಳಿದಿರುವ ಅಂಗವೆಂದರೆ ಅದು ನ್ಯಾಯಾಂಗ. ಈ ಕಟ್ಟಡವು ಎಲ್ಲರಿಗೂ ನ್ಯಾಯ ಒದಗಿಸುವ ಪವಿತ್ರ ಸ್ಥಾನವಾಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿ, ಸಂಸದರ ನಿಧಿಯಿಂದ ನೂತನ ನ್ಯಾಯಾಲಯದಲ್ಲಿ ಡಿಜಿಟಲ್ ಲೈಬ್ರರಿ ಮಾಡಲು ೧೦ ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಘೋಷಣೆ ಮಾಡಿದರಲ್ಲದೆ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಳೀಯ ಭಾಷೆಯಲ್ಲಿ ನಡೆಯಬೇಕೆಂಬುದು ನನ್ನ ಆಶಯ ಎಂದರು.
ನ್ಯಾಯವಾದಿ ಕೆ ಎಲ್ ಹುಣಶಾಳ ಪ್ರಾಸ್ತಾವಿಕ ಮಾತನಾಡಿ, ೨೦೦೭ ರಲ್ಲಿ ಮೂಡಲಗಿ ನ್ಯಾಯಾಲಯಕ್ಕಾಗಿ ಹೋರಾಟ ಆರಂಭವಾಯಿತು. ಈ ಹೋರಾಟದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ನ್ಯಾಯಾಧೀಶರುಗಳು, ವಕೀಲರುಗಳು, ಅಧಿಕಾರಿಗಳು ಮೂಡಲಗಿ ಸುತ್ತಮುತ್ತಲಿನ ಗ್ರಾಮಗಳ ಜನರೂ ಸಹಕಾರ ನೀಡಿದರು. ಹೋರಾಟವನ್ನು ಪ್ರಚುರ ಪಡಿಸಿದ ಮಾಧ್ಯಮಗಳ ಕಾರ್ಯ ಕೂಡ ಅಭಿನಂದನೀಯ. ನ್ಯಾಯಾಲಯಕ್ಕೆ ಜಾಗ ನೀಡಲು ಎಪಿಎಂಸಿ ಕೂಡ ಮುಂದೆ ಬಂದು ಹಲವಾರು ಪ್ರಯತ್ನಗಳ ನಂತರ ಕೋರ್ಟ್ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗೃಹ ಕಟ್ಟಡಗಳಿಗೆ ಇ ಶಂಕುಸ್ಥಾಪನೆ ನೆರವೇರಿದೆ ಎಂದರು.
ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಚಿನ್ ಮಗದುಮ್ ದೀಪ ಬೆಳಗಿಸಿದರು ಸಮಾರಂಭ ಉದ್ಘಾಟಿಸಿದರು.
ನ್ಯಾಯವಾದಿಗಳಾದ ಎಲ್ ವೈ ಅಡಿಹುಡಿ, ಬೆಳಗಾವಿ ಸತ್ರ ನ್ಯಾಯಾಧೀಶ ವಿಜಯಕುಮಾರ ಆನಂದ ಶೆಟ್ಟಿ, ರಾಜ್ಯ ವಕೀಲ ಪರಿಷತ್ ಕಲ್ಮೇಶ ಕಿವಡ, ಸದಸ್ಯ ಕೆ ಬಿ ನಾಯಕ, ಮಾಜಿ ಅಧ್ಯಕ್ಷ, ಸದಸ್ಯ ವಿನೋದ ಮಾಂಗಳೇಕರ, ಲೋಕೋಪಯೋಗಿ ಅಧಿಕಾರಿ ವಿ ಎನ್ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಂಕರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮೂಡಲಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ ಪಿ ಮಗದುಮ್ ಸ್ವಾಗತಿಸಿದರು
ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ನಿರೂಪಿಸಿದರು.
ದಿವಾಣಿ ನ್ಯಾಯಾಧೀಶ ಸುರೇಶ ಎಸ್ ಎನ್ ವಂದಿಸಿದರು.