ಸಿಂದಗಿ: ಸೂರ್ಯ ಹುಟ್ಟುವ ಮುನ್ನ ತಮ್ಮ ಕಾಯಕದಲ್ಲಿ ತೊಡಗಿ ಊರನ್ನು ಸ್ವಚ್ಛ ಮಾಡುತ್ತ ಪರರ ಬದುಕಿಗಾಗಿ ನಿತ್ಯ ದುಡಿಯುವ ಪೌರ ಕಾರ್ಮಿಕರು ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಸ್ವಚ್ಚತೆ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಡುವ ಪೌರ ಕಾರ್ಮಿಕರು ನಿಜವಾದ ಶ್ರಮಿಜೀವಿಗಳು ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದ 23 ವಾರ್ಡಗಳು ಸ್ವಚ್ಚವಾಗಿರಲು ಪೌರಕಾರ್ಮಿಕರ ಕಾರ್ಯವೈಖರಿ ಅಲ್ಲದೆ ಇಡೀ ದೇಶಕ್ಕೆ ಅಂಟಿಕೊಂಡಿರುವ ಮಹಾಮಾರಿ ಕರೋನಾ ಸೋಂಕು ಹತೋಟಿಗೆ ತರಲು ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರ ಕಾರ್ಮಿಕರ ಕಾರ್ಯ ಅನ್ಯನ್ಯ ಎಂದರು.
ದಿನದಿಂದ ದಿನಕ್ಕೆ ನಗರದ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಸೇವೆ ದೊಡ್ಡದು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದಿಂದ ಪೌರ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಒದಗಿಸಲಾಗುವುದು. ಪ್ರತಿದಿನ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವುದರ ಜೊತೆಗೆ ಮನೆ ಮನೆಗೆ ತೆರಳಿ ವಾಹನಗಳ ಮೂಲಕ ಕಸ ಸಂಗ್ರಹಿಸುತ್ತಾರೆ. ನಗರ ಸ್ವಚ್ಚಗೊಂಡರೆ ಅದು ಪೌರಾಲ ಕಾರ್ಮಿಕರ ಶ್ರಮದಿಂದ ಎಂಬುದನ್ನು ಮರೆಯಬಾರದು. ಪೌರ ಕಾರ್ಮಿಕರು ಕೆಲಸದ ವೇಳೆ ಸರ್ಕಾರ ನೀಡಿರುವ ಹ್ಯಾಂಡ್ಗ್ಲೋಜ್, ಶೂಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಾಭಿವೃದ್ಧಿ ಕೋಶ ಯೋಜನಾ ನಿದೇರ್ಶಕ ರಾಜಶೇಖರ ಡಂಬಳ ಮಾತನಾಡಿ, ನಿಜವಾಗಿ ಜನರ ಬಗ್ಗೆ ಕಾಳಜಿ ವಹಿಸುವವರು ಪೌರಕಾರ್ಮಿಕರು ಅವರು ನಗರಗಳಲ್ಲಿ ಸ್ವಚ್ಛತೆ ಮಾಡಿದರಿಂದಲೇ ನಗರವು ಸುಂದರವಾಗಿರುತ್ತದೆ ವೈದ್ಯರು ರೋಗಿಗಳನ್ನು ಹೇಗೆ ಗುಣಪಡಿಸುತ್ತಾರೊ ಅದೇ ರೀತಿ ಪೌರಕಾರ್ಮಿಕರು ರೋಗ ಬರದಂತೆ ನಗರವನ್ನು ಸ್ವಚ್ಛ ಮಾಡಿ ರೋಗ ಬರದಂತೆ ನೋಡಿಕೊಳ್ಳುತ್ತಾರೆ. ಕೊರೋನಾ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವ ಪಣಕ್ಕಿಟ್ಟು ದುಡಿದಿದ್ದಾರೆ ಅದೇ ರೀತಿ ಪೌರಕಾರ್ಮಿಕರು ಕೂಡ ತಮ್ಮ ಜೀವ ಪಣಕ್ಕಿಟ್ಟು ದುಡಿದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಮಾತನಾಡಿ ನಾನು ಪೌರಾಕಾರ್ಮಿಕರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಇತರೆ ಇಲಾಖೆಗಳಲ್ಲಿ ಕೆಲವೇ ಕೆಲ ಸೇವೆಗಳು ಮಾತ್ರ ಸಿಗುತ್ತವೆ. ಆದರೆ ಪೌರ ಕಾರ್ಮಿಕ ಇಲಾಖೆ ಸುಮಾರು 63 ಸೇವೆಗಳನ್ನು ನೀಡುತ್ತದೆ. ಅಲ್ಲದೆ ಪುರಸಭೆಯಿಂದ ರೂ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಘನತ್ಯಾಜ್ಯ ಘಟಕವನ್ನು ಶೀಘ್ರ ಆರಂಭಿಸಬೇಕು ಮತ್ತು ಮೂರು ವರ್ಷಗಳಿಂದ ಪೌರಕಾರ್ಮಿಕರಿಗಾಗಿ ಗೃಹಭಾಗ್ಯ ಯೋಜನೆ ನೆನೆಗುದಿಗೆ ಬಿದ್ದಿದೆ ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು..
ಕಾರ್ಮಿಕ ಭೀಮಣ್ಣ ಕಟ್ಟಿಮನಿ ಅವರು ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಪೌರಾಕಾರ್ಮಿಕರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಬಾಬುಸಾಬ ತಾಂಬೋಳಿ ರಾಜಣ್ಣಿ ನಾರಾಯಣಕರ, ಸದಸ್ಯರ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ಸೈಪನ್ ನಾಟೀಕಾರ, ಅನೀಲ ಕಡಕೋಳ, ಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಮಹಿಬೂಬ ಸಿಂದಗಿಕರ, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಬಂದೇನವಾಜ ಶಹಾಪುರ, ಆರೋಗ್ಯ ಅಧಿಕಾರಿಗಳಾದ ನಬಿರಸೂಲ ಉಸ್ತಾದ, ಇಂದುಮತಿ ಮಣ್ಣೂರ, ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅಬ್ಬಾಸಲಿ ಕಾಖಂಡಕಿ ತಾಲೂಕು ಅಧ್ಯಕ್ಷ ಕಲ್ಲಪ್ಪ ಚೌರ, ಜೆಇ ಎ.ಜೆ.ನಾಟೀಕಾರ, ದಯಾನಂದ ಇವಣಿ, ಸಿಬ್ಬಂದಿಗಳಾದ ರೂಪಾ ಸಿಂಧೆ, ಅರ್ಷಾ, ಶಿವಾಜಿ ಕೊಡಗೆ, ಅ ಸೇರಿದಂತೆ ಹಲವರು ಇದ್ದರು.
ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಸ್ವಾಗತಿಸಿದರು. ಸಾಯಬಣ್ಣ ದೇವರಮನಿ ನಿರೂಪಿಸಿ ವಂದಿಸಿದರು.