spot_img
spot_img

ಮೂಡಲಗಿ ಪುರಸಭೆಯಲ್ಲಿ ನಾಗರಿಕರ ಪರದಾಟ; ಶಾಸಕರು ಇತ್ತ ಗಮನ ಹರಿಸುವರೆ ?

Must Read

- Advertisement -

ಮೂಡಲಗಿ – ಇತ್ತೀಚೆಗೆ ತಾಲೂಕಾಗಿ ಹೊರಹೊಮ್ಮಿದ ಮೂಡಲಗಿ ಪಟ್ಟಣದ ಪುರಸಭೆಯಲ್ಲಿ ತಾಲೂಕಿನ ಘನತೆಗೆ ತಕ್ಕಂಥ ಆಡಳಿತ ಸಿಗದೇ ಇರುವುದು ವಿಪರ್ಯಾಸ. ಇಲ್ಲಿ ಒಂದು ಮನೆಯ ಅಥವಾ ಜಾಗದ ಉತಾರ ಪಡೆಯಬೇಕಾದರೆ ನಾಲ್ಕೈದು ದಿನ ಎಡತಾಕಬೇಕು. ಇಲ್ಲಿನ ಸಿಬ್ಬಂದಿಗಳಿಗೆ ಅಂಗಲಾಚಬೇಕು.

ಏನೇ ಅಂಗಲಾಚಿದರೂ ದುಡ್ಡು ಕೊಟ್ಟರೆ ಮಾತ್ರ ಉತಾರ ಸಿಗುವುದು. ಇನ್ನು ಉಳಿದ ದಾಖಲೆಗಳನ್ನು ಪಡೆಯಬೇಕಾದರೆ ಹರಸಾಹಸ ಪಡಬೇಕೆಂಬ ವಾತಾವರಣ ಇದೆಯೆಂದರೆ ತಪ್ಪಲ್ಲ.

ಮೊದಲನೆಯದಾಗಿ ಯಾವಾಗ ನೋಡಿದರೂ ಇಲ್ಲಿನ ಉತಾರ ಇಲಾಖೆ ಖಾಲಿ ಹೊಡೆಯುತ್ತಿರುತ್ತದೆ. ಮನೆ ಪಾಳಿ ನೀರಿನ ಪಾಳಿ ತುಂಬಿಸಿಕೊಳ್ಳಲು ಮಾತ್ರ ಒಬ್ಬ ಸಿಬ್ಬಂದಿ ಹಾಜರಿದ್ದು ಅದಕ್ಕೆ ತಕ್ಕ ನಾಗರಿಕ ಸೇವೆಗಳು ಜನರಿಗೆ ಸಿಗುವುದು ದುಸ್ತರವಾಗಿದೆ. ಈ ಮನೆ ಪಾಳಿ ಪಡೆಯುವಾಗ ಜನರನ್ನು ಯಾವ ರೀತಿ ಶೋಷಣೆ ಮಾಡುತ್ತಾರೆ ಎಂಬುದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು.

- Advertisement -

ಪಾಳಿ ತುಂಬಿಸಿಕೊಳ್ಳುವ ಸಿಬ್ಬಂದಿ ಚಲನ್ ತಯಾರು ಮಾಡಿ ಬ್ಯಾಂಕಿಗೆ ತುಂಬಿ ಬರಲು ಒಂದು ಮನೆಗೆ ಅಂದಾಜು ೧೦೦- ೨೦೦ ರೂ. ಪಡೆಯುತ್ತಾನೆ. ಮೂಡಲಗಿ ನಗರದಲ್ಲಿ ಎಷ್ಟು ಮನೆ, ಅಂಗಡಿ, ನಿವೇಶನಗಳಿವೆ. ಎಷ್ಟು ಪ್ರಮಾಣದಲ್ಲಿ ‘ ಕಲೆಕ್ಷನ್ ‘ ಆಗುತ್ತದೆ ಎಂಬುದನ್ನು ಅಂದಾಜು ಮಾಡಬಹುದು.

ಇನ್ನು ಕಚೇರಿಯಲ್ಲಿ ಒಬ್ಬ ವ್ಯಕ್ತಿ ಇದ್ದರೆ ಆತ ಇನ್ನೊಬ್ಬರ ಕೆಲಸ ಮಾಡುವುದಿಲ್ಲ ಅವರು ಬಂದ ಮೇಲೆ ಬನ್ನಿ ಎನ್ನುತ್ತಾನೆ. ಅವನು ಬಂದಾಗ ಇವನು ಇರುವುದಿಲ್ಲ. ಏನಾದರೂ ಕೇಳಬೇಕಾದರೆ ಕಂದಾಯ ಅಧಿಕಾರಿಯ ಕಡೆ ಬೆರಳು ತೋರುತ್ತಾರೆ. ಕಂದಾಯ ಅಧಿಕಾರಿಯಂತೂ ತಮಗೆ ಇದಾವುದೂ ಸಂಬಂಧವೇ ಇಲ್ಲವೆನ್ನುವಂತೆ ಇರುತ್ತಾರೆ.

- Advertisement -

ಉತಾರ ಪಡೆಯಲು ಹೋದ ಈ ಪತ್ರಕರ್ತನ ಅನುಭವವನ್ನೇ ಕೇಳಿ. ನೀವೇನಾದರೂ ಪುರಸಭೆಯ ಪರ್ಮಿಶನ್ ಇಲ್ಲದೆ ಶೆಡ್ ಹಾಕಿದರೆ ಅಥವಾ ಮನೆ ಕಟ್ಟಿದರೆ ಅದಕ್ಕೆ ದಂಡ ಕಟ್ಟಬೇಕಾದುದು ಸಹಜ. ಆದರೆ ನಂತರ ಉತಾರ ಕೊಡಬೇಕಾದರೆ ಅಲ್ಲಿರುವವರು ಒಬ್ಬರ ಮೇಲೆ ಒಬ್ಬರು ಹಾಕುತ್ತಾರೆ.

ಖಾಲಿ ಜಾಗಕ್ಕೆ ಕೇವಲ ೭೦ ರೂ ಪಾಳಿ ತುಂಬುತ್ತಿದ್ದ ನಾನು ಕೇಳದೆ ಪತ್ರಾಸ್ ಶೆಡ್ ಹಾಕಿದ್ದಕ್ಕೆ ರೂ. ೩೯೦೦/- ತುಂಬಬೇಕಾಯಿತು. ಆದರೂ ಅದರ ಉತಾರ ಕೇಳಲು ಹೋದರೆ ಪರ್ಮಿಶನ್ ಕಾಪಿ ಬೇಕೆಂಬ ನೆಪ ಹೇಳಿದ. ದಂಡ ಕಟ್ಟಿಸಿಕೊಂಡ ನಂತರ ಉತಾರ ಕೊಡಬೇಕು. ಆದರೆ ಕೊಡುತ್ತಿಲ್ಲ. ದುಡ್ಡು ಬಿಚ್ಚಬೇಕಾ ?

ಈ ಬಗ್ಗೆ ಮುಖ್ಯಾಧಿಕಾರಿಯವರನ್ನು ಕೇಳಬೇಕೆಂದರೆ ಅವರು ಕೆಲವು ದಿನಗಳಿಂದ ಆಫೀಸಿಗೆ ಬಂದಿಲ್ಲ. ಕಾಲ್ ಮಾಡಿದರೆ ತೆಗೆಯುತ್ತಿಲ್ಲ. ಬೇರೆ ಯಾರಾದರೂ ಇನ್ ಚಾರ್ಜ್ ಇಲ್ಲ. ಹೀಗಾದರೆ ಉತಾರ ಹೇಗೆ ಪಡೆಯುವುದು ? ಕೊರೋನಾ ಸಂದರ್ಭದಲ್ಲಿ ಹೊರಗಡೆ ತಿರುಗಾಡಬೇಡಿ ಎಂದು ಪೊಲೀಸರು, ಪುರಸಭೆಯವರು, ತಹಸೀಲ್ದಾರರು ಹೇಳುತ್ತಾರೆ ಆದರೆ ಇಲ್ಲಿ ಕೇವಲ ಉತಾರ ಸಲುವಾಗಿ ಎಡತಾಕಿಸುತ್ತಾರೆ.
ಮೂಡಲಗಿ ತಾಲೂಕಾಗಿದೆ ನಿಜ ಆದರೆ ಅದರ ಘನತೆಗೆ ತಕ್ಕ ಸೇವೆ ನಾಗರಿಕರಿಗೆ ಸಿಗುತ್ತಿದೆಯೇ ? ಇಲ್ಲ. ಕೇವಲ ಸುಲಿಗೆಯೊಂದೇ ಇಲ್ಲಿ ಪ್ರಮುಖವಾಗಿದೆ.

ಲೇ ಔಟ್ ಇಲ್ಲದ ನಿವೇಶನ ; ಚಿನ್ನದ ತತ್ತಿ ನೀಡುವ ಕೋಳಿ !
ಪುರಸಭೆಯಲ್ಲಿ ಭ್ರಷ್ಟಾಚಾರ ಎಷ್ಟು ಇದೆ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ಮೂಡಲಗಿಯಲ್ಲಿನ ಲೇಔಟ್ ಇಲ್ಲದ ನಿವೇಶನದಲ್ಲಿ ಮನೆ ಕಟ್ಟಲು ಹೋದರೆ ಪರ್ಮಿಶನ್ ಸಿಗುವುದಿಲ್ಲ. ದುಡ್ಡು ಕೊಟ್ಟರೆ ತಕ್ಷಣ ಸಿಗುತ್ತದೆ ! ಹೌದು. ಲೇಔಟ್ ಇಲ್ಲದ ನಿವೇಶನಗಳು ಇಲ್ಲಿನ ಸಿಬ್ಬಂದಿಗೆ ಚಿನ್ನದ ತತ್ತಿ ಇಡುವ ಕೋಳಿ ಎಂದರೆ ತಪ್ಪಲ್ಲ.

ನಾಗಲಿಂಗ ನಗರದ ಏರಿಯಾ ಆಗಲಿ, ೧೭ ನೇ ವಾರ್ಡಿನ ಟಿಎಂಸಿ ನಂ. ೧೧೮೧ ರ ನಿವೇಶನಗಳಾಗಲಿ ಲೇ ಔಟ್ ಆಗಿಲ್ಲ.ಇಲ್ಲಿ ಮನೆ ಕಟ್ಟಿದರೆ ಕರೆಂಟ್ ಸಂಪರ್ಕ ಪಡೆಯಲು ಪುರಸಭೆಯಿಂದ NOC ಬೇಕು. ಆದರೆ ಮನೆಗೆ ಪರ್ಮಿಶನ್ ಇಲ್ಲದ ಕಾರಣ NOC ಸಿಗುವುದಿಲ್ಲ. ಆದರೆ ಒಳ ಒಪ್ಪಂದ ಮಾಡಿಕೊಂಡರೆ ಆಗಲೇ ಸಿಗುತ್ತದೆ ! ಸಾವಿರಾರು ರೂ.ಗಟ್ಟಲೇ ಇವರ ಜೇಬು ತುಂಬಿಸಬೇಕು.

ಮನೆ ಕಟ್ಟಿಯೇ ಹೈರಾಣ ಆಗಿರುವ ನಾಗರಿಕ ಮತ್ತಷ್ಟು ಹೈರಾಣ ಆಗುವುದು ಗ್ಯಾರಂಟಿ. ಇಂಥ ನಿವೇಶನಗಳು ನಗರದಲ್ಲಿ ಎಷ್ಟಿವೆಯೋ ಯಾರು ಬಲ್ಲರು ? ಇದನ್ನು ಯಾರು ತಡೆಯಬೇಕು. ಶಾಸಕರು ಇತ್ತ ಗಮನ ಹರಿಸುವರೇ ಎಂಬುದು ನಮ್ಮ ಪ್ರಶ್ನೆ.

ಕೊರೋನಾ ಕಾಲದಲ್ಲಿ ಊರಲ್ಲಿ ಸ್ವಚ್ಛತೆ ಇರಬೇಕು. ಆದರೆ ಎಳ್ಳಷ್ಟೂ ಅದರ ಬಗ್ಗೆ ಕಾಳಜಿ ವಹಿಸುವವರಿಲ್ಲ. ಎಲ್ಲೆಂದರಲ್ಲಿ ಕಸ ತುಂಬಿಕೊಂಡಿದ್ದು ಗಟಾರುಗಳು ಕೂಡ ಮುಂದೆ ನೀರು ಹೋಗದೆ ಹಂದಿಗಳಿಗೆ ಆವಾಸ ಸ್ಥಾನವಾಗಿ ರೋಗ ಹರಡಲು ಕಾರಣವಾಗಿದೆ. ವಿಚಿತ್ರ ಎಂದರೆ ಘನ ತ್ಯಾಜ್ಯ ವಿಲೇವಾರಿಗಾಗಿ ಸಾಕಷ್ಟು ಹಣವನ್ನು ಪುರಸಭೆಯಿಂದ ವಸೂಲು ಮಾಡಲಾಗುತ್ತಿದೆ ! ಆದರೆ ಕಸ ಮಾತ್ರ ಊರಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿದೆ ! ರೋಗ ಹರಡಲು ಕಾರಣವಾಗುತ್ತಿದೆ.

ಅರಭಾವಿ ಶಾಸಕರು ತಮ್ಮ ಒಳ್ಳೆಯ ಕೆಲಸಗಳಿಂದಾಗಿ ಜನಪ್ರಿಯತೆ ಗಳಿಸಿದ್ದಾರೆ. ಆದರೆ ಅವರ ಆಡಳಿತದಲ್ಲಿ ಪುರಸಭೆಯ ಭ್ರಷ್ಟ ಅಧಿಕಾರಿಗಳು ಅವರ ಹೆಸರು ಕೆಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಯಾಕೆಂದರೆ ಕೇವಲ ಉತಾರ ಪಡೆಯಲು ದಿನಗಟ್ಟಲೆ ಎಡತಾಕುವಾಗ ನಾನು ಮೇಲಾಧಿಕಾರಿಯ ಹತ್ತಿರ ಹೋಗುವೆ ಎಂದರೆ ನೀವು ಎಲ್ಲಿ ಬೇಕಾದರೂ ಹೋಗಿ, ಬೇಕಾದರೆ ಶಾಸಕರ ತನಕವೂ ಹೋಗಿ ಎಂಬ ದುರಹಂಕಾರದ ಮಾತುಗಳನ್ನು ಕೇಳಬೇಕಾಗಿ ಬಂದಿದೆ.

ಪತ್ರಕರ್ತನಾದ ನಮ್ಮಂಥವರಿಗೆ ಯಾವುದೇ ಗೌರವ ಕೂಡ ಈ ಪುರಸಭೆಯಲ್ಲಿ ಇಲ್ಲದಾಗಿದೆ. ಕೊರೋನಾ ಸಂಕಷ್ಟದಲ್ಲಿ ಶಾಸಕರು ಅನೇಕ ರೀತಿಯಲ್ಲಿ ಜನತೆಗೆ ಸಹಾಯ ಮಾಡುತ್ತಿದ್ದಾರೆ ಅದರ ಜೊತೆಗೆ ಪುರಸಭೆಗೆ ಬರುವ ನಾಗರಿಕರಿಗೆ ಉತ್ತಮ ಸೇವೆ, ಭ್ರಷ್ಟಾಚಾರ ರಹಿತ ಸೇವೆ ನೀಡಲು ಇಲ್ಲಿನ ಅಧಿಕಾರಿಗಳಿಗೆ ಸಿಬ್ಬಂದಿಗೆ ಆದೇಶ ನೀಡಿದರೆ ಅದೂ ಒಂದು ರೀತಿಯ ಸಹಾಯವೇ ಆದೀತು ಎಂಬ ಆಶಾ ಭಾವನೆಯಿದೆ. ಶಾಸಕರು ಇತ್ತ ಗಮನ ಹರಿಸಲಿ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group