spot_img
spot_img

ಗೋಕಾಕ-ಅರಭಾವಿ ಕ್ಷೇತ್ರಗಳಿಗಾಗಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ

Must Read

- Advertisement -

ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ – ಬಸವರಾಜ ಬೊಮ್ಮಾಯಿ

ಗೋಕಾಕ: ನಮ್ಮ ಸರಕಾರ ರೈತರು, ಮಹಿಳೆಯರು, ದುರ್ಬಲರ ಏಳ್ಗೆಗಾಗಿ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗಾಗಿ ೫೫೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು, ಮಂಗಳವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ಮತ್ತು ಅರಭಾಂವಿ ವಿಧಾನ ಸಭಾ ಮತಕ್ಷೇತ್ರದ ಸುಮಾರು ೨೭೫೩ ಕೋಟಿ ರೂ ಮೊತ್ತದ ವಿವಿಧ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

- Advertisement -

ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಕೆಲವರು ಇಂತಹ ಜೇನು ಗೂಡಿಗೆ ಕೈಹಾಕ ಬೇಡ ಎಂದು ಹೇಳಿದ್ದರೂ ಈ ಜನಾಂಗಕ್ಕೇ ಸಿಹಿ ನೀಡುವ ಉದ್ಧೇಶದಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಯಾರಿಂದಲೂ ಮಾಡದ ಕೆಲಸವನ್ನು ನಾವು ಸಾಧಿಸಿದ್ದೇವೆ.

ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕೇವಲ ಓಟ್ ಬ್ಯಾಂಕ್‌ಯನ್ನಾಗಿ ಈ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಆ ಪಕ್ಷದ ನಾಯಕರು ಈಗ ಕೇವಲ ಸುಳ್ಳು ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಕೋವಿಡ್ ಮತ್ತು ಪ್ರವಾಹದಂತಹ ಜಟಿಲ ಸಮಸ್ಯೆಗಳನ್ನು ಎದುರಿಸಿದ್ದೇವೆ. ಸರಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ರಾಜ್ಯದ ಎಲ್ಲ ಸಮುದಾಯಗಳ ಏಳ್ಗೆಗೆ ಸಮಗ್ರ ಪ್ರಗತಿಗಾಗಿ ದುಡಿಯುತ್ತಿರುವ ನಮ್ಮ ಪಕ್ಷ ಮತ್ತೇ ಅಧಿಕಾರಕ್ಕೆ ತರಬೇಕು. ಸ್ಪಷ್ಟ ಬಹುಮತದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಕ್ಕೆ ತಾವೆಲ್ಲರೂ ಆಶೀರ್ವದಿಸಲು ಕೋರಿದರು.

- Advertisement -

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ೫೦ ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿದರೆ ಮಾತ್ರ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿಗೆ ಕಾರ್ಯಗಳಿಗೆ ಬೆಲೆ ನೀಡಿದಂತಾಗುತ್ತದೆ.

ರಾಜ್ಯ ರಾಜಕೀಯವನ್ನು ಬೆಳಗಾವಿ ಜಿಲ್ಲೆಯ ರಾಜಕೀಯ ನಿರ್ಧರಿಸುತ್ತದೆ. ಇಲ್ಲಿ ಬರುವ ಚುನಾವಣೆಯಲ್ಲಿ ೧೮ಕ್ಕೆ ೧೮ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಿಎಮ್ ವಿಶ್ವಾಸ ವ್ಯಕ್ತಪಡಿಸಿದರು.

ಗೋಕಾಕದಲ್ಲಿ ನೆರೆದ ಜನ ನೋಡಿ ೨೦೨೩ರ ಚುನಾವಣೆಯ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಸವಾಗುತ್ತಿದೆ. ರಮೇಶ್ ಜಾರಕಿಹೊಳಿ ಬೇರೆ ಪಕ್ಷದಲ್ಲಿ ಇದ್ದರೂ ಸಹ ನನ್ನ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಜಾರಕಿಹೊಳಿ ಮನೆತನದ ಜೊತೆಗೆ ನನ್ನ ಆತ್ಮೀಯ ಸಂಬಂಧ ವಿದೆ ಎಂದು ಜಾರಕಿಹೊಳಿ ಕುಟುಂಬದ ಜೊತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಇಂದು ಘಟ್ಟಿ ಬಸವಣ್ಣ ಡ್ಯಾಂ ನಿರ್ಮಿಸಿ ೪ ಟಿಎಂಸಿ ನೀರು ನಿಲ್ಲಿಸುವ ಕಾರ್ಯ ಪ್ರಾರಂಭವಾಗಿದೆ.

ಎಂಥಾ ಬರಗಾಲ ಬಂದರು ಗೋಕಾಕ ಮತ್ತು ಅರಭಾವಿ ಶಾಶ್ವತವಾಗಿ ನೀರು ದೊರಕಲಿದೆ. ರಮೇಶ ಜಾರಕಿಹೊಳಿ ಅವರು ಉಡ ಇದ್ದಂತೆ ಒಂದು ಕೆಲಸ ಹಿಡಿದರೆ ಛಲ ಬಿಡದೆ ನಿಮ್ಮೆಲ್ಲರಿಗೋಸ್ಕರ ಕಾರ್ಯ ಮಾಡಿದ್ದಾರೆ. ಜನರ ಬಗ್ಗೆ ಕಾಳಜಿ ಹೊತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೇಳಲು ನನ್ನ ಬಳಿ ಬಂದಿದ್ದಾರೆ ಹೊರತು ವೈಯಕ್ತಿಕ ಕೆಲಸಕ್ಕಲ್ಲ ಎಂದರು.

ಗೋಕಾಕದಲ್ಲಿ ಪ್ರವಾಹ ನೀರು ನಗರದಲ್ಲಿ ಬರಬಾರದು ಎಂದು ತಡೆಗೋಡೆ ನಿರ್ಮಾಣ, ಒಳ್ಳೆಯ ಆರೋಗ್ಯ ನೀಡುವ ನಿಟ್ಟಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ, ಕಲ್ಮಡಿ ಏತ ನೀರಾವರಿ, ಜಲಸಂಪನ್ಮೂಲ ಇಲಾಖೆಯಿಂದ ಘಟಪ್ರಭಾ ನದಿಯಿಂದ ನೀರು ತುಂಬಿಸುವ ಕಾರ್ಯ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ಬಿಜೆಪಿ ಸರಕಾರ ನೀಡಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸರಕಾರ ಚಾಲನೆ ನೀಡಿ. ಆರೋಗ್ಯ, ಶಿಕ್ಷಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ, ಗೋಕಾಕ ಮತಕ್ಷೇತ್ರದಲ್ಲಿಯ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಹಂತಹಂತವಾಗಿ ಮಂಜೂರಾತಿ ನೀಡಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದು ಸಂತೋಷ ನೀಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಮ್ಮದೆ ಆದ ಸಿದ್ದಾಂತ ಹೊಂದಿದೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮತ್ತು ದೇವೆಗೌಡ ಇದ್ದರೆ. ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಷ್ಟೆ ಅಧಿಕಾರ ಅನುಭವಿಸಬೇಕು. ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರು ಸದಾಶಿವ ವರದಿ ಜಾರಿಗೆ ತರಲಿಲ್ಲ ಈಗ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ಪಕ್ಷ ಬರಿ ಸುಳ್ಳು ಹೇಳುತ್ತಿದೆ. ಇಂದು ಜಗತ್ತೆ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿದೆ. ೨೦೨೩ರಲ್ಲಿ ಪೂರ್ಣ ಪ್ರಮಾಣದ ಅಧಿಕಾರ ನಡೆಸುತ್ತದೆ ಎಂದು ಹೇಳಿದರು.

ಕೆಎಮ್‌ಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಅರಭಾವಿ ಮತ್ತು ಗೋಕಾಕ ಮತಕ್ಷೇತ್ರಗಳಿಗೆ ೨೭೦೦ ಕೋಟಿ ರೂಪಾಯಿ ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಸಮಸ್ತ ನಾಗರಿಕರಿಂದ ಅಭಿನಂದನೆ ಸಲ್ಲಿಸುತ್ತೇನೆ. ಗೋಕಾಕದಲ್ಲಿ ನಡೆದ ಸಮಾವೇಶ ಇತಿಹಾಸವನ್ನು ನಿರ್ಮಿಸಿದೆ. ಘಟ್ಟಿಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನದಿಂದ ನಮ್ಮ ಉಭಯ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವದಿಲ್ಲ. ಜೊತೆಗೆ ಕೌಜಲಗಿ ಭಾಗದ ಬಹುವರ್ಷಗಳ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಾರಗೊಳಿಸಿದ್ದಾರೆ.

ಇದರಿಂದ ಕೌಜಲಗಿ ಭಾಗದ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಿದ್ದು ಕೌಜಲಗಿ ಭಾಗ ಸಂಪೂರ್ಣ ಹಸಿರುಮಯವಾಗಿದೆ ಎಂದು ಹೇಳಿದರು.

ಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕನಿಷ್ಠ ೧೨೫ ಸ್ಥಾನಗಳಲ್ಲಿ ಪಕ್ಷ ಜಯಬೇರಿ ಬಾರಿಸಿದರೆ ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರೊಬ್ಬರು ಮುಖ್ಯಮಂತ್ರಿಯಾಗುವ ಭಾಗ್ಯ ಪ್ರಾಪ್ತಿಯಾಗಲಿದೆ. ಆದ್ದರಿಂದ ಪ್ರಬಲ ಲಿಂಗಾಯತ ಜನಾಂಗದ ಮತಗಳು ವಿಭಜನೆಯಾಗದೇ ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಕಾರ್ಯಗಳು ಬೇರೆ ಯಾರು ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಿರೀಕ್ಷೆಗೂ ಮೀರಿ ಅನುದಾನವನ್ನು ನೀಡಿದ್ದಾರೆ. ಎಸ್‌ಸಿ ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಸಾಮಾಜಿಕ ನ್ಯಾಯದ ಪರಿಪಾಲನೆಯನ್ನು ಮಾಡುತ್ತಿದ್ದಾರೆ. ಮಾಳಿ ಸಮಾಜದ ಪ್ರತ್ಯೇಕ ನಿಗಮ, ಕ್ಷತ್ರೀಯ ಸಮಾಜದ ನಿಗಮ ರಚಿಸಲು ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಜೊತೆಗೆ ಇಷ್ಟರಲ್ಲಿಯೇ ಹಾಲುಮತದ ಸಮಾಜ ಬಾಂಧವರಿಗೆ ಶುಭಸುದ್ದಿಯನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬರಲಿದ್ದು, ಬಾಕಿ ಉಳಿದಿರುವ ನೆರೆಸಂತ್ರಸ್ತರಿಗೆ ಅಗತ್ಯವಿರುವ ಸೂರುಗಳನ್ನು ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅಥಣಿ ಮತಕ್ಷೇತ್ರದಲ್ಲಿ ಬರುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಸಾಕಾರಗೊಂಡಿದೆ. ಅಥಣಿ ಭಾಗದ ಜನರಿಗೆ ನೀಡಿರುವ ಆಶ್ವಾಸನೆಯನ್ನು ಈ ಮೂಲಕ ರಮೇಶ ಜಾರಕಿಹೊಳಿ ಅವರು ಈಡೇರಿಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಾರಕಿಹೊಳಿ ಸಹೋದರರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.

ವೇದಿಕೆಯ ಮೇಲೆ ಸಚಿವ ಸಿ ಸಿ ಪಾಟೀಲ, ಬೆಳಗಾವಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಧುರೀಣರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಮತಕ್ಷೇತ್ರ ಚುನಾವಣಾ ಉಸ್ತುವಾರಿ ಗುರುಪಾದ ಕಳ್ಳಿ, ಅರಭಾವಿ ಮಂಡಲ ವಿಸ್ತಾರಕ ವೆಂಕಟೇಶ ಲಾಳೆ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸೇರಿದಂತೆ ಬಿಜೆಪಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group