ಬೀದರ – ಮುಖ್ಯಮಂತ್ರಿ ಬೊಮ್ಮಾಯಿಯವರು ಭಾಷಣ ಮಾಡುತ್ತಿದ್ದ ವೇಳೆ ಪಿಸುಮಾತಿನಲ್ಲಿ ತೊಡಗಿದ್ದ ಪಿಎಸ್ಐ ಹಾಗೂ ಪೊಲೀಸರ ಮೇಲೆ ಕೋಪಗೊಂಡ ಘಟನೆ ನಡೆಯಿತು.
ಇಲ್ಲಿನ ಘಾಳೆ ಸಭಾಭವನದಲ್ಲಿ ಪರಿಷತ್ ಚುನಾವಣಾ ಭಾಷಣದ ಸಮಯದಲ್ಲಿ ವೇದಿಕೆಯ ಪಕ್ಕದಲ್ಲೇ ನಿಂತಿದ್ದ ನ್ಯೂ ಟೌನ್ ಮಹಿಳಾ ಪಿಎಸ್ಐ ಹಾಗೂ ಪೊಲೀಸರು ಸಣ್ಣದಾಗಿ ಮಾತಿನಲ್ಲಿ ತೊಡಗಿದ್ದನ್ನು ಕಂಡು ಸಿಎಂ ಸಿಡಿಮಿಡಿಗೊಂಡರು.
ತಕ್ಷಣವೇ ಕೋಪದಿಂದ, ನಿಮ್ಮಗಳ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಎಲ್ಲಾ ನೋಡ್ಕೊಳ್ತಾರೆ. ನೀವು ಹೊರಗೆ ಹೋಗಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಪತ್ರಕರ್ತರೊಡನೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು. ಕೋವಿಡ್ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಸ್ಪೀಕರ್ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ದಿ.೧೩ರಿಂದ ೨೪ ರವರೆಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಅಧಿವೇಶನ ನಡೆಸುವುದಾಗಿ ಹೇಳಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ