ಬನವಾಸಿ: ಜನ ಸಂಘದ ಸಂಸ್ಥಾಪಕ ಶ್ಯಾಮ್ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ 14 ದಿನಗಳ ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಬನವಾಸಿ ಗ್ರಾಮ ಪಂಚಾಯತಿ ಆವರಣದಲ್ಲಿ ಬುಧವಾರದಂದು ಉತ್ತರ ಕನ್ನಡ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ. ನಮಗೆ ಉಪಯೋಗವಾಗುವ ಪ್ರತಿ ವಸ್ತುಗಳನ್ನು ನಾವು ಗೌರವಿಸಬೇಕು. ಗಿಡ ಮರಗಳನ್ನು ನಾವು ಗೌರವಿಸಿ, ರಕ್ಷಿಸಿದರೇ ಅವುಗಳು ನಮ್ಮ ಜೀವ ರಕ್ಷಣೆ ಮಾಡುತ್ತದೆ. ವೃಕ್ಷಾರೋಹಣ ಕಾರ್ಯಕ್ರಮವೂ ಗ್ರಾಮ ಪಂಚಾಯತ್ಗೆ ಮಾತ್ರ ಸೀಮಿತವಾಗದೇ ಪ್ರತಿ ಮನೆ ಮನೆಯಲ್ಲಿಯೂ ನಡೆಯಬೇಕು ಎಂದರು.
ನಿವೃತ್ತ ಅರಣ್ಯ ಅಧಿಕಾರಿ ನಾಗರಾಜ ನಾಯ್ಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಗೀಲ್ಡ್ ಅವೆರನೆಸ್ ರೂರಲ್ ಡೆವಲಪಮೆಂಟ್ ಎಕನಾಮಿಕ & ಎಜ್ಯುಕೇಶನಲ್ ನೊಬೆಲ್(ಗಾರ್ಡನ್) ಸೊಸೈಟಿಯ ಅಧ್ಯಕ್ಷ ಸುಧೀರ ನಾಯರ್ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಆರೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಓ ಪರಶುರಾಮ್, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರೇಮ್ಕುಮಾರ್ ನಾಯ್ಕ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿದ್ದವಿರೇಶ ನೆರೆಗಲ್, ಭೋಜಪ್ಪ ನಾಯ್ಕ್, ಕಾರ್ಯದರ್ಶಿ ಚಂದ್ರಶೇಖರ ಗೌಡ ಕಡಗೋಡು, ಮಮತಾ ನಾಯ್ಕ್, ಗಣೇಶ ಲಮಾಣಿ, ಗ್ರಾಪಂ ಸದಸ್ಯರು, ಸಿಬ್ಬಂದಿ ಹಾಗೂ ಬಿಜೆಪಿ ಮುಖಂಡರು ಇದ್ದರು.