ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆಶ್ರಮ ಶತಾಬ್ದಿ ಹಾಗೂ ಬೃಂದಾವನ ಪ್ರವೇಶ ರಜತೋತ್ಸವ ಪರ್ವ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಯೋಜಿಸಿದ್ದ ಜೀವ ಕರ್ತೃತ್ವ ವಾಕ್ಯಾರ್ಥ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥಶ್ರೀಪಾದರು ವಹಿಸಿದ್ದರು .
ಜೀವ ಕರ್ತೃತ್ವ ವಿಚಾರ ಕುರಿತು ಹಿರಿಯ ವಿದ್ವಾಂಸರಾದ ರಾಷ್ಟ್ರಪತಿ ಪುರಸ್ಕೃತ ವಿ. ಹರಿದಾಸ ಭಟ್ಟಾಚಾರ್ಯರ ನೇತೃತ್ವದಲ್ಲಿ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕರಾದ ವಿ.ಆಚಾರ್ಯ ವೀರನಾರಾಯಣ ಪಾಂಡುರಂಗಿ, ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯ, ವಿ. ಶಂಕರನಾರಾಯಣ ಅಡಿಗರು, ವಿ. ಸುಧೀಂದ್ರಾಚಾರ್, ವಿ. ಪ್ರದ್ಯುಮ್ನಾಚಾರ್, ವಿ. ಗುರುರಾಜಾಚಾರ್ ಕಲ್ಕೂರ, ವಿ. ಶ್ರೀನಿಧಿ ಆಚಾರ್ಯ ಪ್ಯಾಟಿ , ವಿ. ಮಧ್ವೇಶಾಚಾರ್, ವಿ. ಪ್ರಣವಾಚಾರ್, ವಿ. ಸುಘೋಷಾಚಾರ್, ಮುಂತಾದ ಅನೇಕ ವಿದ್ವಾಂಸರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪರ್ಯಾಯ ಸಂಸ್ಥಾನದಿಂದ ‘ಅಭಿನವ ಚಂದ್ರಿಕಾಚಾರ್ಯ’ ಎಂಬ ಉಪಾಧಿಯೊಡನೆ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀಪಾದರನ್ನು ಮುತ್ತಿನ ಅಭಿಷೇಕದೊಂದಿಗೆ ಪರ್ಯಾಯ ಮಠದ ಉಭಯ ಶ್ರೀಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಿರುಪತಿಯ SVBC ವಾಹಿನಿಯ ಅಧಿಕಾರಿಗಳಾದ ಡಿ.ಪಿ.ಅನಂತಾಚಾರ್ಯ , ಪರ್ಯಾಯ ಮಠದ ದಿವಾನರಾದ ಪಂ. ಪ್ರಸನ್ನ ಆಚಾರ್ಯ, ಡಾ.ಬಿ. ಗೋಪಾಲಾಚಾರ್ಯ ಮುಂತಾದವರು ಉಪಸ್ಥಿತರಿದ್ದರು.