ಸಿಂದಗಿ: ಡಿ.30 ನಡೆಯುವ ಆಲಮೇಲ ಪಟ್ಟಣ ಪಂಚಾಯತ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 17 ಜನ ಅಭ್ಯರ್ಥಿಗಳು ಸ್ಪರ್ಧೆಯ ಕಣದಲ್ಲಿದ್ದು ಇದರಲ್ಲಿ 15 ಕ್ಕೂ ಹೆಚ್ಚು ಜನ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಸಿಂದಗಿ ಕಾಂಗ್ರೆಸ್ ಬ್ಲಾಕ್ ಎಸ್ಸಿ ಘಟದ ಅಧ್ಯಕ್ಷ ಪರಶುರಾಮ ಕಾಂಬಳೆ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಟಿಕೇಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿಲ್ಲ, ಹಣವಂತರಿಗೆ ಮಾತ್ರ ಟಿಕೇಟ್ ನೀಡಿದ್ದಾರೆ, ಪಕ್ಷದ ಪಧಾಧಿಕಾರಿಗಳಿಗೆ ಟಿಕೇಟ್ ನೀಡದೇ ಪಕ್ಷೇತ್ರರವಾಗಿ ಸ್ಪರ್ಧೆ ಮಾಡಿದ್ದಾರೆ, ಅಲ್ಲದೆ ಕೋಳಿ ಹಾಗೂ ಜಂಗಮ ಸಮಾಜದ ಮುಖಂಡರಿಗೆ ಟಿಕೆಟ್ ನೀಡಿಲ್ಲ, ಕಳೆದ ಚುನಾವಣೆಯಲ್ಲಿ ಕೋಳಿ ಸಮಾಜಕ್ಕೆ ಎಸ್ಟಿ ಕೊಡಿಸುವದಾಗಿ ಹೇಳಿದ ಬಿಜೆಪಿಯ ನಾಯಕರು ಆಲಮೇಲ ಪಟ್ಟಣದಲ್ಲಿ ಅವರ ಮತ ಪಡೆದುಕೊಂಡು ಟಿಕೇಟ್ ನೀಡುವಲ್ಲಿ ಮಲತಾಯಿ ಧೋರಣೆ ತಾಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿಯಲ್ಲಿ ಎಲ್ಲಾ ಸಮಾಜದ ಮುಖಂಡರಿಗೆ ಟಿಕೇಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ, ಉಪಚುನಾವಣೆಯಲ್ಲಿ ತಳವಾರ, ಕೋಳಿ, ಕಬ್ಬಲಿಗ ಸಮಾಜದ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿ ಮತ ಪಡೆದುಕೊಂಡವರು ಸಿಂದಗಿ ಶಾಸಕ ರಮೇಶ ಭೂಸನುರ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಒಂದು ಪ್ರಶ್ನೆ ಎತ್ತಲಿಲ್ಲ ಯಾಕೆ? ಎನ್ನುವದು ಜನರು ಅರ್ಥ ಮಾಡಿಕೊಳ್ಳಬೇಕು ಚುನಾವಣೆ ಸಂದರ್ಭದಲ್ಲಿ ಮಾತ್ರ ಸುಳ್ಳು ಹೇಳಿ ಮತ ಗಿಟ್ಟಿಸಿಕೊಳ್ಳಬೇಕಿತ್ತು ಅದರೆ ಅವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಇಡೀ ಮಂತ್ರಿ ಮಂಡಲವೇ ವಿಫಲವಾಗಿದೆ ಇದನ್ನೆಲ್ಲ ನೋಡಿದರೆ ಉಪ ಚುನಾವಣೆಯಲ್ಲಿ ನೀಡಿದ ಭರವಸೆಗಳೆಲ್ಲ ಸುಳ್ಳು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಇದರಿಂದ ಬಿಜೆಪಿ ಪಕ್ಷ ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ಸಾಬೀತುಪಡಿಸಿದಂತಾಗಿದೆ ಎಂದು ಗುಡುಗಿದರು.
ಈ ವೇಳೆ ರಮೇಶ ನಡುವಿನಕೇರಿ, ಪರಶುರಾಮ ಕುಚಬಾಳ,ನಿಂಗಪ್ಪ ಬಡಿಗೇರ, ಕಾಳು, ಭೀಮಾಶಂಕರ ಕೋಟಾರಗಸ್ತಿ ಮತ್ತು ಚಂದ್ರಶೇಖರ ಕರೋಟಿ ಸೇರಿದಂತೆ ಅನೇಕರಿದ್ದರು.