Homeಲೇಖನದಿನಕ್ಕೊಬ್ಬ ಶರಣ ಮಾಲಿಕೆ

ದಿನಕ್ಕೊಬ್ಬ ಶರಣ ಮಾಲಿಕೆ

ಗಂಗಾಂಬಿಕೆ

ಭಕ್ತಿ ಭಾಂಡಾರಿ ಜ್ಞಾನಜ್ಯೋತಿ ವಿಶ್ವ ವಿಭೂತಿಯಾಗಿ ಜಗಜ್ಯೋತಿ ಬಸವಣ್ಣನವರು ಪ್ರಾರಂಭಿಸಿದ ಸಾಮಾಜಿಕ ಧಾರ್ಮಿಕ ಆರ್ಥಿಕ ಪ್ರಗತಿಗೆ ಅವರ ಮನೆ ಕಾರ್ಯಕ್ಷೇತ್ರವಾಯಿತು. ಅವರ ಪತ್ನಿಯಾದ ಗಂಗಾಂಬಿಕೆ ಬಸವಣ್ಣನವರ ಕಾರ್ಯಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಬಸವಣ್ಣನವರು ಸಂಗಮದಲ್ಲಿದ್ದಾಗ ಅವರ ಕೀರ್ತಿ ಎಲ್ಲೆಡೆ ಹಬ್ಬಿತ್ತು. ಬಲ ದೇವರು ಅಲ್ಲಿಗೆ ಬಂದಾಗ ಬಸವಣ್ಣನವರು ತಮ್ಮ ತಂಗಿಯ ಮಗ ಎಂಬುದನ್ನು ತಿಳಿದು ಹರ್ಷಿತರಾಗಿ ಗುರುಗಳಲ್ಲಿ ಮದುವೆಯ ಪ್ರಸ್ತಾಪ ಮಾಡಿ ಕಲ್ಯಾಣಕ್ಕೆ ಕಳುಹಿಸಿ ಕೊಡುವಂತೆ ಕೇಳಿಕೊಳ್ಳುತ್ತಾರೆ. ಗುರುಗಳ ಸಲಹೆಯಂತೆ ಮದುವೆಯಾಗಲು ಒಪ್ಪಿರುವ ಬಸವಣ್ಣನವರಿಗೆ ತನ್ನ ಏಕ ಮಾತ್ರ ಪುತ್ರಿ ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡುತ್ತಾರೆ. ಬಲದೇವ ಮಂತ್ರಿಯ ಮರಣದ ನಂತರ ತೆರವಾಗಿದ್ದ ಮಂತ್ರಿ ಪದವಿಯನ್ನು ಬಿಜ್ಜಳನು ಬಸವಣ್ಣನವರಿಗೆ ವಹಿಸಿ ಕೊಡುವನು.
ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಗಂಗಾಂಬಿಕೆಗೆ ಧೈರ್ಯ ಸ್ಥೈರ್ಯ ಗಳು ಸ್ವಾಭಾವಿಕವಾಗಿ ಬಂದಿದ್ದವು ಕನ್ನಡ ಸಂಸ್ಕೃತ ಸಾಹಿತ್ಯ ಸಂಗೀತ ಕತ್ತೀ ವರಸೆ ಬಿಲ್ಲು ವಿದ್ಯೆಗಳಲ್ಲಿ ಗಂಗಾಂಬಿಕೆ ಬಲ್ಲಿದಳಾಗಿದ್ದಳು.

ಪ್ರಗತಿಪರ ವಿಚಾರದ ಬಸವಣ್ಣನವರು ಪ್ರಾರಂಭಿಸಿದ ಹೊಸ ಸಮಾಜ ರಚನೆಯ ಕಾರ್ಯದಲ್ಲಿ ಗಂಗಾಂಬಿಕೆ ಸಹಾಯಕಳಾಗಿ ಚೇತನ ರೂಪವಾಗಿ ನಿಂತಿದ್ದಳು. ಸ್ತ್ರೀ ಶೂದ್ರ ಸಮಾನವೆಂಬ ಭಾವನೆಯನ್ನು ಅಲ್ಲಗಳೆಯದೆ ಬಸವಣ್ಣನವರು ಗಂಗಾಂಬಿಕೆಗೆ ದೀಕ್ಷೆ ಮಾಡಿಸಿ ಆತ್ಮೋನ್ನತಿಯ ಮಾರ್ಗ ತೋರಿಸಿದರು. ಭಕ್ತಿ ಭಂಡಾರಿಯ ಕೈಹಿಡಿದು ಆತನ ಸಕಲ ಕಾರ್ಯಗಳಿಗೆ ಸ್ಪೂರ್ತಿಯ ಸೆಲೆಯಾದ ಗಂಗಾಂಬಿಕೆಯ ವ್ಯಕ್ತಿತ್ವವು ಉಜ್ವಲವಾಯಿತು.

ಬಲದೇವ ಮಂತ್ರಿಯ ವಾತ್ಸಲ್ಯದ ಪುತ್ರಿಯಾದ ಗಂಗಾಂಬಿಕೆಯಲ್ಲಿ ಸ್ವಾಭಿಮಾನಗಳು ಮೂಡಿಬಂದಿದ್ದವು ಗೆಳತಿಯ ರೊಂದಿಗೆ ಸಾಹಿತ್ಯ ಸಂಗೀತಗಳ ಸರಸ ಸಲ್ಲಾಪದಲ್ಲಿ ಬೆಳೆದು ಸು ಸಂಸ್ಕೃತರಾದ ಗಂಗಾಂಬಿಕೆ ಬಸವಣ್ಣನವರ ಕೈ ಹಿಡಿದು ಭಕ್ತಿಯ ತನಿರಸದ ಜ್ಯೋತಿಯಾದಳು.

ಮಹಾ ಮನೆಯ ದಾಸೋಹ ಕಾರ್ಯ ಅನುಭವ ಮಂಟಪದ ಜ್ಞಾನದಾಸೋಹದ ಕಾರ್ಯಗಳಲ್ಲಿ ಗಂಗಾಂಬಿಕೆ ತನು ಮನ ಧನವನ್ನು ಸವೆಸುತ್ತಲಿದ್ದಳು. ಮಹಾ ಮನೆಗೆ ಬರುವ ಅತಿಥಿಗಳ ಸತ್ಕಾರ ಅನುಭವ ಮಂಟಪದ ಕಾರ್ಯಕ್ರಮಗಳ ಸಿದ್ಧತೆ ಎಲ್ಲದರಲ್ಲೂ ಗಂಗಾಂಬಿಕೆ ಸಹಭಾಗಿ ಆಗಿರುತ್ತಿದ್ದಳು. ಪತಿಯ ಮನದಿಚ್ಛೆಯನ್ನು ಅರಿತು ಕಾರ್ಯಗೈವ ಮುತ್ಸದ್ದಿತನ ಗಂಗಾಂಬಿಕೆಯಲ್ಲಿತ್ತು.

ಗಂಗಾಂಬಿಕೆಯು ಘನಲಿಂಗಿ ರುದ್ರಮುನಿಗಳ ಶಿಷ್ಯಳಾಗಿದ್ದಳು ಗುರು ಸೇವೆ ಪತಿ ಭಕ್ತಿ ಲಿಂಗ ನಿಷ್ಠೆಗಳಿಂದ ಗಂಗಾಂಬಿಕೆಯು ಆತ್ಮಶಕ್ತಿಯನ್ನು ಬೆಳೆಸಿಕೊಂಡಳು. ಬಸವಣ್ಣನವರ ಸಮತಾಭಾವ ವಿಶಾಲ ಮನೋಭಾವಗಳ ಮೂಲಕ ಗಂಗಾಂಬಿಕೆಯ ವ್ಯಕ್ತಿತ್ವ ವಿಕಸಿಸಿತು. ಶರಣ ಸತಿ ಲಿಂಗಪತಿ ಎಂಬ ಭಾವವನ್ನು ಬೆಳೆಸಿಕೊಂಡ ಗಂಗಾಂಬಿಕೆಯ ಬಾಳಿನಲ್ಲಿ ಸರ್ವವೂ ಸುಖಮಯವಾಗಿತ್ತು. ಬಸವಣ್ಣನವರು ಮಂತ್ರಿ ಕಾರ್ಯದ ಹೊಣೆಯನ್ನು ಅನುಭವ ಮಂಟಪದ ಕಾರ್ಯಕ್ರಮಗಳನ್ನು ಮಹಾಮನೆಯದ ದಾಸೋಹವನ್ನು ಲಿಂಗಪೂಜೆಯನ್ನು ಏಕ ನಿಷ್ಠೆಯಿಂದ ಗೈಯುವುದನ್ನು ಕಂಡು ಗಂಗಾಂಬಿಕೆ ಬಹಳ ಸುಂದರವಾಗಿ ಹೃದಯಂಗಮವಾಗಿ ಒಂದು ವಚನವನ್ನು ಈ ರೀತಿಯಾಗಿ ಹೇಳಿದ್ದಾರೆ

ಸಾಂದ್ರವಾಗಿ ಹಗರಣ ಭಕ್ತಿಯ ಮಾಳ್ಪನೆಂತೋ!
ಮಾದಲಂಕ ನಂದನನು ಸಾಂದ್ರವಾಗಿ ಬಿಜ್ಜಳನ ಅರಮನೆಯ ನ್ಯಾಯ ಮಾರ್ಪಣೆಯಂತೊ l
ಮಾದರಸನ ಮೋಹದ ಮಗನು ಸಾಂದ್ರವಾಗಿ ಲಿಂಗಾರ್ಚನೆ
ಲಿಂಗ ತೃಪ್ತಿ ಅನುಗೈವನೆoತೋ l
ಗಂಗಾ ಪ್ರಿಯ ಕೂಡಲಸಂಗನ ಶರಣ ಚೆನ್ನ.

ತ್ರಿಕಾಲ ಲಿಂಗ ಪೂಜಾ ನಿಷ್ಠರಾದ ಗಂಗಾಂಬಿಕೆಗೆ ಶಿವ ಸಾಕ್ಷಾತ್ಕಾರವಾಗಿ ಆಕೆ ಸ್ವತಃ ಪರವಸ್ತು ಸ್ವರೂಪದ ಆಕೆಯ ವಚನದಿಂದಲೇ ವಿಧಿತವಾಗುವುದು. ಕಾಯಕ ನಿರತಳು ಜ್ಞಾನ ಸಂಪನ್ನಳು ಭಕ್ತಿ ಭಾವ ಭರಿತಳು ಆದ ಗಂಗಾಂಬಿಕೆಯ ಭಕ್ತಿ ನಿಷ್ಠೆಗಳಿಗೆ ಮೆಚ್ಚಿ ಪರಮಾತ್ಮನು ಆಕೆಯ ಕರೆದ ಇಷ್ಟಲಿಂಗದಲ್ಲಿಯೇ ಸಾಕ್ಷಾತ್ಕಾರವಾದುದನ್ನು ಆಕೆಯ ವಚನದಿಂದಲೇ ಅರಿತುಕೊಳ್ಳಬಹುದಾಗಿದೆ.

ಇದೇನು ಮೀರಿ ತೋರುವ ಮೂರುತಿ ಪುಷ್ಪ ಗುಂಪಿನಲ್ಲಿ ಕಾಣದೆ ಹೋಗಿದೆ
ಇದೇನು ಮೀರಿ ತೋರುವ ಮೂರುತಿ ಕರೆದಲ್ಲಿ ಲಿಂಗದಂತೆ
ಹುಲಿಹದ ನೆಲೆಯ ತೋರುತ್ತಿದೆ.
ಇನ್ತಪ್ಪ ಮೂರ್ತಿಯ ಕಂಡು ಗಂಗಾ ಪ್ರಿಯ ಕೂಡಲಸಂಗನ
ಶರಣಸತಿ ಧನ್ಯಳಾದಳು ಚನ್ನಬಸವಣ್ಣ.

ಜೀವನದಲ್ಲಿ ಸುಖಕ್ಕೆ ಹಿಗ್ಗದೆ ದುಃಖಕ್ಕೆ ಕೊರಗದೆ ಸದಾ ಲಿಂಗ ಜಂಗಮ ಸೇವೆಯಲ್ಲಿ ನಿರತಳಾಗಿರುತ್ತಿದ್ದ ಗಂಗಾಂಬಿಕೆ ತನ್ನ ಜೀವನದ ಗುರಿಯನ್ನು ತಲುಪಿ ಧನ್ಯತೆಯನ್ನು ಪಡೆದು ಮಹಾತಾಯಿಯಾದಳು. ಕಲ್ಯಾಣದಲ್ಲಿ ನಡೆದ ಅಂತರ್ಜಾತಿ ವಿವಾಹದಿಂದಾಗಿ ಜರುಗಿದ ಹಿಂಸಾಚಾರವನ್ನು ನೋಡಲಾರದೆ ಮೃದು ಹೃದಯದ ಬಸವಣ್ಣ ತನ್ನ ಇಷ್ಟ ದೈವ ವಾದ ಕೂಡಲಸಂಗಮನ ಕೂಡಲು ಸಂಗಮಕ್ಕೆ ಹೋದರು. ಆಗ ಗಂಗಾಂಬಿಕೆ ಉಭಯ ಸಂಕಟದಲ್ಲಿ ಸಿಲುಕಿದಳು. ಪತಿಯ ಇಚ್ಛೆಯಂತೆ ಸಂಗಮಕ್ಕೆ ಹೋಗಬೇಕಾದದು ಸತಿಯ ಕರ್ತವ್ಯ. ಆದರೆ ಬಿಜ್ಜಳನ ಸೈನಿಕರು ಕಂಡಲ್ಲಿ ಶರಣರ ಕೊಲೆಗೈಯುತ್ತ ವಚನ ಭಂಡಾರವನ್ನು ಸೂರ್ಯಗೊಳ್ಳುತ್ತಿರುವಾಗ ಶರಣರ ರಕ್ಷಣೆ ವಚನಾಮೃತದ ಶರಣ ಶರಣೆಗೈಯಲು ಚನ್ನಬಸವಣ್ಣನವರಿಗೆ ಸಹಾಯಕಳಾಗಿ ನಿಲ್ಲುವುದು ಸತಿಯ ಕರ್ತವ್ಯವಲ್ಲವೇ ಮನವನ್ನು ಕಾಡುತ್ತದೆ. ಈ ಸಮಸ್ಯೆಗಳ ತಾಕಲಾಟದಿಂದ ಮುಕ್ತವಾಗಲು ಗಂಗಾಂಬಿಕೆ ಗುರು ಸನ್ನಿಧಿಗೆ ಹೋಗುತ್ತಾಳೆ. ಗಂಗಾಂಬಿಕೆ ಘನಲಿಂಗ ರುದ್ರಮುನಿಗಳ ಬಳಿ ತನ್ನ ಮನದಲಳನ್ನು ಭಿನ್ನೈಸಿಕೊಳ್ಳುತ್ತಾಳೆ ಅವತ್ತಿಗೆ ರುದ್ರ ಮುನಿಗಳು ಶರಣರ ಆತ್ಮ ರಕ್ಷಣೆಗಾಗಿ ಒಂದು ಚಿಕ್ಕ ಪಡೆಯನ್ನು ಸಿದ್ಧಗೊಳಿಸುತ್ತಾರೆ ಅವರು ಗಂಗಾಂಬಿಕೆಯನ್ನು ಕುರಿತು ಹೀಗೆ ಹೇಳುತ್ತಾರೆ. ತಾಯಿ ನಾವೆಲ್ಲ ಈಗ ಮಡಿವಾಳ ಮಾಚಿದೇವ ಚನ್ನಬಸವನವರ ನೇತೃತ್ವದಲ್ಲಿ ಆದಷ್ಟು ಬೇಗ ಕಲ್ಯಾಣ ಬಿಟ್ಟು ಹೊರಟರೆ ಶರಣರ ರಕ್ಷಣೆ ಸಾಧ್ಯ ಈ ಕಾರ್ಯದಲ್ಲಿ ಧೀರರಾದ ನಿನ್ನ ನೆರವಿದ್ದರೆ ನಮ್ಮ ಮುಂದಿನ ಪಯಣ ಸುಲಭವಾಗಿ ನಿನ್ನ ನೆರವು ಚೆನ್ನ ಬಸವಣ್ಣನಿಗೆ ಅವಶ್ಯವಾಗಿದೆ.ಬಸವಣ್ಣ ಹೋಗಿ ಮಾರ್ಗದರ್ಶಕ ಇಲ್ಲದ ಕರ್ತವ್ಯ ಜಾಗೃತಿಯನ್ನು ಉಂಟು ಮಾಡಿತು.

ಗುರುವಾಣಿ ಗಂಗಾಂಬಿಕೆಯಲ್ಲಿ ಜಾಗೃತಿಯನ್ನು ಉಂಟು ಮಾಡಿತು. ಬಸವಣ್ಣನವರು ಪ್ರಾರಂಭಿಸಿದ ಕಾರ್ಯವನ್ನು ಪೂರೈಸುವ ಹೊಣೆ ಹೊತ್ತು ಶರಣದಳದ ರಕ್ಷಣಾ ಭಾರವನ್ನು ನಿರ್ವಹಿಸಲು ಚನ್ನಬಸವಣ್ಣನಿಗೆ ಹೀಗೆ ಸಹಾಯಕಳಾಗಿ ನಿಲ್ಲುವ ತನ್ನ ನಿರ್ಧಾರವನ್ನು ಗಂಗಾಂಬಿಕೆ ಹಡಪದ ಅಪ್ಪಣ್ಣನವರ ಮುಖಾಂತರ ಬಸವಣ್ಣನವರಿಗೆ ಹೇಳಿ ಕಳುಹಿಸಿದಳು.

ಇತ್ತ ಗಂಗಾಂಬಿಕೆ ಶರಣರ ಜೊತೆಗೆ ಕಲ್ಯಾಣದಿಂದ ಉಳುವೆಯತ್ತ ಹೊರಟಳು. ಆಗ ಶರಣ್ಯದ ಮುಂದಾಳು ವೀರ ಮಡಿವಾಳ ಮಾಚಿದೇವರನ್ನು ಕುರಿತು ರಚಿಸಿದ ವಚನ ಈ ರೀತಿ ಇದೆ.

ಮಡಿವಾಳಣ್ಣಂಗ್ಯಾಕೆ ಬಾರದವ್ವ ಕರುಣರಸ
ಮಡಿವಾಳಣ್ಣಂಗ್ಯಾಕೆ ಬಾರದವ್ವ ಶೌರ್ಯರಸ
ಮಡಿವಾಳಣ್ಣಂಗ್ಯಾಕೆ ಬಾರದವ್ವ ಅದ್ಭುತ ರಸ.
ಮಡಿವಾಳಣ್ಣಂಗ್ಯಾಕೆ ಬಾರದವ್ವ ಗಂಗಾಪ್ರಿಯ.
ಕೂಡಲಸಂಗನ ಶರಣ ಪ್ರಾಣ ದಾನರ ಸಿದ್ದರಾಮಯ್ಯ

ಶರಣ ದಳದೊಡನೆ ಹೊರಟ ಗಂಗಾಂಬಿಕೆ ಎಲ್ಲರ ಪ್ರಸಾದ ವ್ಯವಸ್ಥೆಗೆ ಗಾಯಾಳುಗಳ ಶುಶ್ರೂಷೆಗೆ ನೆರವಾಗುತ್ತಲಿದ್ದಳು ಪ್ರಸಂಗ ಬಂದಾಗ ವೀರಸೈನಿಕಳಾಗಿಯೂ ಕಾರ್ಯಗೈದಿದ್ದಾಳೆ. ಕಲ್ಯಾಣದಿಂದ ಹೊರಟ ಶರಣ ಸಮೂಹ ಮುರಗೋಡು ಮಾರ್ಗವಾಗಿ ಉಳುವಿಗೆ ಹೊರಟಾಗ ಮಲಪ್ರಭಾ ನದಿ ತೀರದಲ್ಲಿರುವ ಕಾದರವಳ್ಳಿಯ ಬಳಿ ಘನ ಘೋರ ಯುದ್ಧವಾಯಿತು.

ವಚನ ಸಾಹಿತ್ಯ ರಕ್ಷಣೆ ಮಾಡುತ್ತಾ ಅಮರತ್ವವನ್ನು ಪಡೆದಳು. ಅವಳ ಸಮಾಧಿ ಮುಗುಟುಖಾನ ಹುಬ್ಬಳ್ಳಿಯ ಬಳಿ ಮಲಪ್ರಭಾ ನದಿಯ ಮಧ್ಯದಲ್ಲಿದೆ. ಈ ನದಿ ಮುಂದೆ ಹರಿದು ಸಂಗಮದಲ್ಲಿ ಕೃಷ್ಣಯನ್ನು ಕೂಡಿದೆ ಗಂಗಾಂಬಿಕೆಯ ಆತ್ಮ ಬಸವೇಶ್ವರರಲ್ಲಿ ಐಕ್ಯವಾದ ಸಂಕೇತವನ್ನು ಸೂಚಿಸುತ್ತದೆ. ಕಾಯಕವೇ ಕೈಲಾಸ ವೆಂದು ಬಗೆದ ಗಂಗಾಂಬಿಕೆ ವಚನಕಾರ್ತಿಯಾಗಿ, ಅನುಭಾವಿಯಾಗಿ ಆದರ್ಶ ಸತಿಯಾಗಿ ಕರ್ತವ್ಯ ದಕ್ಷತೆ ಮಾತೆಯಾಗಿ ಬಾಳಿದಳು. ಗಂಗಾಂಬಿಕೆ ಬಸವಣ್ಣನವರ ಕಾರ್ಯ ಶಕ್ತಿಯಾಗಿದ್ದಳು ಅವಳ ಧೀರ ಗಂಭೀರ ವ್ಯಕ್ತಿತ್ವ ಅದ್ಬುತವಾಗಿದೆ ಉಜ್ವಲವಾಗಿದೆ.                                                               ( ಚಿತ್ರ ಕೃಪೆ : ಅಂತರ್ಜಾಲ )

ರತ್ನಕ್ಕ ಕಾದ್ರೊಳ್ಲಿ                                                      ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆ             ಬಸವಾದಿ ಶರಣರ ಚಿಂತನಕೂಟ

RELATED ARTICLES

Most Popular

error: Content is protected !!
Join WhatsApp Group