ಬೈಲಹೊಂಗಲ : ಕನ್ನಡ ಸಾರಸ್ವತ ಲೋಕದ ಹಿರಿಯ ಕವಿ ಜನಾನುರಾಗಿ, ಎರಡು ಸಾರಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ “ದಲಿತ ಕವಿ” ಎಂದೇ ಹೆಸರುವಾಸಿಯಾಗಿದ್ದ, ನೊಂದವರ ಧ್ವನಿಯಾಗಿದ್ದ, ನಾಡು ಕಂಡ ಒಳ್ಳೆಯ ಸಾಹಿತಿ ಡಾ.ಸಿದ್ದಲಿಂಗಯ್ಯನವರು ನಮ್ಮೆಲ್ಲರನ್ನು ಅಗಲಿದ್ದು ನಿಜಕ್ಕೂ ಸಾಹಿತ್ಯ ಲೋಕದ ಕಣ್ಮಣಿಯೊಂದು ಕಳಚಿದಂತಾಗಿದೆ.
ಸಾಹಿತಿಯಾಗಿ, ಲೇಖಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಇದ್ದಾಗಲೂ ಸಹ ಅನೇಕ ಪ್ರಗತಿಪರ ಚಿಂತನೆಗಳಿಗೆ ಮತ್ತು ನಾಡು ನುಡಿ ಸೇವೆಗಾಗಿ ಸದಾ ಕಂಕಣಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಹಾಸ್ಯವಾಗಿ ಮಾತನಾಡುತ್ತಿದ್ದರೂ ಆ ಧ್ವನಿಯಲ್ಲಿ ನೊಂದವರ ನೋವಿತ್ತು, ಕಳಕಳಿಯಿತ್ತು ಕನ್ನಡದ ಬಗ್ಗೆ ಅನಂತ ಅಭಿಮಾನವಿತ್ತು. ಅವರ ಸಾಹಿತ್ಯವು ಪ್ರಪಂಚದ ವಾಸ್ತವತೆಯ ಇನ್ನೊಂದು ಮುಖವನ್ನು ತೋರಿಸುತ್ತಿತ್ತು. ಇವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಅಲ್ಲದೇ, ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
ದೇವರು ಇವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಕ.ಸಾ.ಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಕಸಾಪ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.