ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಲಿಂಗೈಕ್ಯ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯಸ್ಮರಣೆ ನಿಮಿತ್ತ ದಾಸೋಹ ದಿನ ಆಚರಣೆ ಮಾಡಲಾಯಿತು.
ಭಾವಚಿತ್ರ ಪೂಜೆ ಮಾಡುವುದರ ಮೂಲಕ ಶತಾಯುಷಿ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದು ಜೀವನ ಪರ್ಯಂತ ಜ್ಞಾನ ದಾಸೋಹ, ಅನ್ನ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು ಅದಕ್ಕಾಗಿಯೇ ಸರಕಾರ ಈ ದಿನವನ್ನು ‘ದಾಸೋಹ ದಿನ’ವನ್ನಾಗಿ ಆಚರಣೆ ಮಾಡುತ್ತಿದೆ. ಇಡೀ ಜಗತ್ತಿಗೆ ಸ್ವಾಮೀಜಿ ಮಾದರಿಯಾಗಿದ್ದಾರೆ.
ಸ್ವಾಮೀಜಿಯವರು ನಡೆದಾಡಿದ ನಮ್ಮ ಭರತ ಭೂಮಿ ನಿಜಕ್ಕೂ ಪುಣ್ಯಭೂಮಿ. ಶಿವಕುಮಾರ ಸ್ವಾಮೀಜಿಯವರು ಜಾತಿ-ಮತ-ಪಂಥ ರಹಿತವಾಗಿ ಎಲ್ಲರಿಗೂ ಆಶ್ರಯದಾತರಾಗಿದ್ದರು ಎಂದು ಮಕ್ಕಳಿಗೆ ಸ್ವಾಮೀಜಿಯವರ ಜೀವನಗಾಥೆಯನ್ನು ಶಿಕ್ಷಕರಾದ ಶಿವಾನಂದ ತಲ್ಲೂರ ವಿವರಿಸಿದರು. ಶಿಕ್ಷಕರಾದ ರಾಜು ಸುತಾರ ರವರು ಮಾತನಾಡಿ ತುಮಕೂರು ಒಂದು ಪುಣ್ಯ ಭೂಮಿ. ಅಲ್ಲಿಯ ನೆಲ ಸ್ಪರ್ಶಿಸಿ ಅಲ್ಲಿ ಜ್ಞಾನ ಪಡೆದ ಪ್ರತಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಒಂದಿಲ್ಲ ಒಂದು ಮೇರು ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಅಲ್ಲಿಯ ಸಂಸ್ಕೃತಿ ಆಚರಣೆ ಅಂತಹವು. ಈಗಲೂ ಅವರ ಸಂಪ್ರದಾಯ ಮುಂದುವರೆದುಕೊಂಡು ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕಿ ಕೆ.ಎಫ್ ಭಾವಿಹಾಳ ಸೇರಿದಂತೆ ಶಾಲಾ ಇತರೆ ಶಿಕ್ಷಕ ವರ್ಗ ಮತ್ತು ಶಾಲಾ ಮಕ್ಕಳು ಭಾಗಿಯಾಗಿದ್ದರು. ಆರಂಭದಲ್ಲಿ ಮಕ್ಕಳಿಂದ ಸ್ವಾಮೀಜಿಯವರ ಕುರಿತಾದ ಪ್ರಾರ್ಥನೆ ಮಾಡಲಾಯಿತು.