ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುವಂತೆ ಶಿಕ್ಷಣ ಸಚಿವರಲ್ಲಿ-ಸಂಸದ ಈರಣ್ಣ ಕಡಾಡಿ ಮನವಿ
ಮೂಡಲಗಿ: ಕಲ್ಲೋಳಿ ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮನವಿ ಸಲ್ಲಿಸಿ ವಿನಂತಿಸಿದರು.
ಶನಿವಾರ ಸೆ.17 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಅಲ್ಲಮಪ್ರಭು ನಿವಾಸಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸೌಹಾರ್ದಯುತ ಭೇಟಿ ನೀಡಿದ ಸಂದರ್ಭದಲ್ಲಿ ಕಡಾಡಿ ಕುಟುಂಬ ನೀಡಿದ ಸನ್ಮಾನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ ಮಾತನಾಡಿ ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ಈ ಐದು ತಾಲೂಕುಗಳ ಮಧ್ಯವರ್ತಿ ಸ್ಥಳವಾಗಿರುವ ಕಲ್ಲೋಳಿ ಪಟ್ಟಣವು ಸುಮಾರು 63 ಎಕರೆ ಸರ್ಕಾರಿ ಜಮೀನು ಹೊಂದಿರುತ್ತದೆ ಮತ್ತು ಈ ಪ್ರದೇಶದ ಐದು ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಕಾರಣ ಈ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಅವಶ್ಯಕತೆ ಇರುತ್ತದೆ. ಈ ಹಿಂದೆ ಜೆ.ಎಚ್. ಪಟೇಲ ಅವರ ಸರ್ಕಾರದಲ್ಲಿ ಗೋಕಾಕ ಜಿಲ್ಲೆ ಎಂದು ಘೋಷಣೆಯಾಗಿತ್ತ್ತು. ಮುಂದೊಂದು ದಿನ ಗೋಕಾಕ ಜಿಲ್ಲಾ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಹೀಗಾಗಿ ಇಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದರು.
ಸಚಿವ ಬಿ.ಸಿ. ನಾಗೇಶ್ ಅವರು ಮನವಿ ಪತ್ರ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಎಸ್.ಎಸ್. ಬಿರಾದಾರ, ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ, ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ, ತಹಶೀಲ್ದಾರ ಡಿ.ಜಿ. ಮಹಾತ್, ಬಿಇಒ ಅಜೀತ ಮನ್ನಿಕೇರಿ, ಜಿ.ಬಿ ಬಳಿಗಾರ, ಮೊಹನ ದಂಡಿನ, ಚಿಕ್ಕೋಡಿ ಶಿಕ್ಷಣಾಧಿಕಾರಿ ಎನ್. ಗಂಗಾಧರ, ಮಹಾತೇಶ ತಾಂವಶಿ, ಬಸವರಾಜ ಹುಳ್ಳೇರ, ದಿಲಿಪ ಮಜಲಿಕರ, ದುಂಡಪ್ಪ ಬೆಂಡವಾಡೆ, ಹಣಮಂತ ಸಂಗಟಿ, ಧರೆಪ್ಪ ಖಾನಗೌಡ್ರ, ಶ್ರೀಶೈಲ ತುಪ್ಪದ, ಅಡಿವೆಪ್ಪ ಕುರಬೇಟ, ಶಿವಪ್ಪ ಬಿ.ಪಾಟೀಲ, ಪರಪ್ಪ ಕಡಾಡಿ, ಅಶೋಕ ಆಡಿನವರ, ಗುರುನಾಥ ಮದಭಾಂವಿ, ಶ್ರೀಶೈಲ ಕಡಾಡಿ, ತುಕಾರಾಮ ಪಾಲ್ಕಿ, ಬಸಗೊಂಡ ಪರಕನಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.