ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರಿಗೆ ಮನವಿ
ಸಿಂದಗಿ: ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರ 21 ತಿಂಗಳ ಅಧಿಕಾರದ ಅವಧಿಯಲ್ಲಿ ಕೇವಲ ಎರಡು ಸಾಮಾನ್ಯ ಸಭೆ ನಡೆಸಿದ್ದು ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾರಣ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಭೆ ಕರೆಯುವಂತೆ ಪುರಸಭೆ ಸದಸ್ಯರು ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಹಿರಿಯ ಸದಸ್ಯ ರಾಜಣ್ಣಿ ನಾರಾಯಣಕರ ಮಾತನಾಡಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪುರಸಭೆಯಲ್ಲಿ ನಡೆಯಬೇಕಾದ ಸಭೆಗಳು ಅವರ ಆಸ್ಪತ್ರೆಯಲ್ಲಿ ನಡೆಸಿದ್ದರಿಂದ ಅವರ ಕಾರ್ಯ ವೈಖರಿ ನಮಗೆ ತೃಪ್ತಿಕರವೆನಿಸಿಲ್ಲ. ನಗರದ ಅಭಿವೃದ್ಧಿ ಮಾಡುತ್ತಾರೆಂಬ ವಿಶ್ವಾಸವನ್ನು ಅವರು ಹುಸಿಗೊಳಿಸಿದ್ದಾರೆ. ದುರಾಡಳಿತ ನೀತಿಯಿಂದ ಬೇಸತ್ತು ಈಗಾಗಲೇ 2 ಬಾರಿ ಅವಿಶ್ವಾಸ ಮಂಡಿಸಲು ಮನವಿ ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನೆ ಕಂಡಿಲ್ಲ. ಆದ್ದರಿಂದ ಈ ಕುರಿತು ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯಲು ಒತ್ತಾಯಿಸಿದ್ದರು.
ಪುರಸಭೆ ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದ್ದು ನಾವು ಕೂಡಾ 25 ವರ್ಷದಿಂದ ಪಕ್ಷದಲ್ಲಿ ದುಡಿದಿದ್ದೇವೆ ಆ ಕಾರಣಕ್ಕೆ ಎಲ್ಲ ಸದಸ್ಯರು ನಮ್ಮ ಅಭಿಮಾನವಿಟ್ಟು ಕಳೇದ 2 ಬಾರಿ ಅವಿಶ್ವಾಸ ಗೊತ್ತುವಳಿ ಹೊರಡಿಸಿ ಡಾ. ಶಾಂತವೀರ ಮನಗೂಳಿ ಅವರನ್ನು ಕೆಳಗಿಳಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಕುತಂತ್ರ ನಡೆಸಿ ತಮ್ಮ ಪರ ಮಾಡಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ ನೀಡಿದ ಮಾತಿನಂತೆ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಲ್ಲದೆ ಈಗಿನ ಅಧ್ಯಕ್ಷರಿಗೆ ರಾಜಿನಾಮೆ ನೀಡುವಂತೆ ನಿರ್ದೇಶನ ನೀಡಿದ್ದಾರೆ ಆ ಕಾರಣಕ್ಕೆ ಈ ಬಾರಿ ಹಿಂದಿನ ಪ್ರಮಾದ ನಡೆಯದು ಎಲ್ಲ ಸದಸ್ಯರ ಸಹಕಾರವಿದೆ ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನನಗಿದೆ ಎಂದರು.
ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಬಾಬುಸಾಬ ತಾಂಬೋಳಿ, ಹಾಸಿಂಪೀರ ಆಳಂದ, ರಾಜಣ್ಣಿ ನಾರಾಯಣಕರ, ಸಂದೀಪ ಚೌರ, ಖೈರುನಬಿ ನಾಟೀಕಾರ, ಶರಣಗೌಡ ಪಾಟೀಲ, ಉಮಾದೇವಿ ಸುಲ್ಪಿ, ಬಸವರಾಜ ಯರನಾಳ, ಕಲಾವತಿ ಕಡಕೋಳ, ಗೊಲ್ಲಾಳಪ್ಪ ಬಂಕಲಗಿ, ಬಾಗವ್ವ ಡೋಣೂರ, ಮಹಾಂತೇಶ ಬಿರಾದಾರ, ಮಹಾದೇವಿ ನಾಯ್ಕೋಡಿ, ತಹಸೀನ್ ಮುಲ್ಲಾ ಅವರುಗಳ ಸಹಿಯುಳ್ಳ ಪತ್ರದೊಂದಿಗೆ ಅವಿಶ್ವಾಸ ಗೊತ್ತುವಳಿಗೆ ಸಭೆ ನಡೆಸುವಂತೆ ಮನವಿ ಮಾಡಿದರು.
ನಂತರ ಉಪಾಧ್ಯಕ್ಷ ಹಾಸಿಂಪೀರ ಆಳಂದ ಅವರ ನೇತೃತ್ವದಲ್ಲಿ ಶರಣಗೌಡ ಪಾಟೀಲ, ಹಣಮಂತ ಸುಣಗಾರ, ಗೊಲ್ಲಾಳ ಬಂಕಲಗಿ ಅವರು ಅವಿಶ್ವಾಸ ಗೊತ್ತುವಳಿ ಕುರಿತು ವಿಶೇಷ ಸಾಮಾನ್ಯ ಸಭೆಯನ್ನು ನಡೆಸುವಂತೆ ಆಗ್ರಹಿಸಿ ಸದಸ್ಯರ ಸಹಿಯುಳ್ಳ ಮನವಿ ಪತ್ರವನ್ನು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೂ ಸಲ್ಲಿಸಿದರು.