ಅದು 1984 ರ ದಿನಗಳು. ನಾನು ಕನ್ನಡರತ್ನ ರಾಜಕುಮಾರ ಎಂಬ ಪುಸ್ತಕ ಹೊರತರಲು ಯತ್ನ ನಡೆಸಿದ್ದೆ. ಅಂದು ಲಕ್ಷಾಂತರ ಅಭಿಮಾನಿಗಳ ಮನ ಹಾಗೂ ಮನೆ ದೇವರೇ ಆಗಿದ್ದ ಡಾ.ರಾಜಕುಮಾರ್ಅ ವರನ್ನು ಕುರಿತಂತೆ ಬೇರೆ ಬೇರೆ ಕವಿಗಳು ಬರೆದಿದ್ದ ಕವನ ಸಂಕಲನ ಹೊರ ತರಲು ಎಲ್ಲ ಸಿದ್ಧತೆ ನಡೆಸಿದ್ದೆ. ಯಾರೋ ಲೇಖಕರು ನನ್ನ ತಲೆಗೆ ಅನುಮಾನದ ಹುಳು ಬಿಟ್ಟರು.ಈ ಪುಸ್ತಕ ಪ್ರಕಟಿಸಲು ರಾಜ್ ಅವರ ಅನುಮತಿ ಬೇಕು ಅಂತ ಹೇಳಿಬಿಟ್ಟರು.
ನಾನು ಆಗಿನ್ನೂ ಪದವಿ ವಿದ್ಯಾರ್ಥಿ. ನಾನು ವರನಟ ರಾಜ್ ಕುಮಾರರನ್ನು ಭೇಟಿ ಮಾಡಿ ನಾನು ತರಲಿರುವ ಪುಸ್ತಕಕ್ಕೆ ಅನುಮತಿ ಪಡೆಯಲು ಬೆಂಗಳೂರಿಗೆ ಹೊರಟೆ. ರಾಜ್ ಕುಟುಂಬದವರು ಅಂದು ಬಿಡದಿ ಸಮೀಪ ಇರುವ ಲೋಹಿತ್ ಫಾರಂ ನಲ್ಲಿ ಸಿಗುತ್ತಾರೆ ಅಂತ ಪತ್ರಿಕೆಗಳನ್ನು ನೋಡಿ ತಿಳಿದುಕೊಂಡಿದ್ದೆ.ಸ್ನೇಹಿತನೊಬ್ಬನ ಜೊತೆ ಬಿಡದಿಗೆ ಹೋಗಿ ಇಳಿದೆ.
ಲೋಹಿತ ಫಾರಂ ಮುಂಬಾಗ ಸೆಕ್ಯುರಿಟಿ ಒಬ್ಬ ಕಾಯುತ್ತಿದ್ದ.ರಾಜ್ ಅಭಿಮಾನಿಗಳು, ಚಿತ್ರ ನಿರ್ಮಾಪಕರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಹೋಗುತ್ತಿದ್ದರು.ಇಡೀ ದಿನ ಕಾದರೂ ನಮಗೆ ಒಳಗೆ ಹೋಗಲಾಗಲಿಲ್ಲ.
ಲೋಹಿತ್ ಫಾರಂ ಗೆ ಹೋಗಲಾಗದೆ ಅಂದು ಬೆಂಗಳೂರಿನ ಸ್ನೇಹಿತರೊಬ್ಬರ ಮನೆಗೆ ಹೋಗಿ ಉಳಿದುಕೊಂಡೆವು.
ಮರುದಿನ ಮತ್ತೆ ಲೋಹಿತ್ ಫಾರಂ ಗೆ ಬಂದೆವು.ಈ ಬಾರಿ ನಾನು ಸ್ವಲ್ಪ ಬುದ್ಧಿ ಉಪಯೋಗಿಸಿದೆ.ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗೆ 20 ರು. ನೋಟ್ ಕೊಟ್ಟೆ..ನಾನು ಪಾರ್ವತಮ್ಮ ಮೇಡಂ ಅವರ ತವರೂರು ಸಾಲಿಗ್ರಾಮದ ಪಕ್ಕ ಇರುವ ಭೇರ್ಯ ಗ್ರಾಮದವನು ಅವರನ್ನು ನೋಡಲು ಬಂದಿದ್ದೇವೆ. ದಯವಿಟ್ಟು ಒಳಗೆ ಬಿಡಿ ಎಂದು ಕೇಳಿಕೊಂಡೆ.
ಸೆಕ್ಯುರಿಟಿ ವ್ಯಕ್ತಿ ಒಳಗೆ ಹೋಗಿ ಕೆಲವೇ ನಿಮಿಷದಲ್ಲಿ ವಾಪಸ್ಸು ಬಂದನು.ಬನ್ನಿ ಒಳಗೆ ಅಂತ ಒಳಗೆ ಕರೆದು ಕೊಂಡು ಹೋದ. ಲೋಹಿತ್ ಫಾರಂ ಒಳಗೆ ಒಂದು ಸುಂದರ ಮನೆ. ರಾಜ್ ಅವರ ವ್ಯಕ್ತಿತ್ವ, ಸರಳ ವ್ಯಕ್ತಿ ತ್ವಕ್ಕೆ ಪೂರಕವಾದ ಮನಸೆಳೆವ ಮನೆ.
ಪಾರ್ವತಮ್ಮ ಅವರು ಬಂದರು.ನಾನು ಪರಿಚಯ ಮಾಡಿಕೊಂಡೆ. ನಾನು ನಿಮ್ಮೂರಿನ ಪಕ್ಕದ ಭೇರ್ಯ ಗ್ರಾಮದವನು.ಚಿಕ್ಕಂದಿನಿಂದ ರಾಜ್ ಕುಮಾರ್ ಅವರ ಚಿತ್ರಗಳನ್ನೇ ನೋಡುತ್ತಾ ಬೆಳೆದವನು.ಮಯೂರ,ಬಂಗಾರದ ಮನುಷ್ಯ,ಸಂಪತ್ತಿಗೆ ಸವಾಲ್, ರಾಜ ನನ್ನ ರಾಜ…ಹೀಗೆ ನೂರಾರು ಚಿತ್ರಗಳನ್ನು ನೋಡಿದ್ದೇನೆ.ನನ್ನ ಆದರ್ಶ ರಾಜಣ್ಣ ಅಂತ ಒಂದೇ ಸಮನೆ ಒದರಿದೆ. ಪಾರ್ವತಕ್ಕ ಅಣ್ಣಾವರಿಗೆ ಹೇಳುತ್ತೇನೆ ಎಂದು ಒಳಕ್ಕೆ ಹೋದರು.
ಕೆಲವೇ ನಿಮಿಷದಲ್ಲಿ ರಾಜಣ್ಣ ಅವರು ನಾವು ಕುಳಿತಿದ್ದ ಅವರಣಕ್ಕೆ ಬಂದರು. ಶುಭ್ರ ಶ್ವೇತ ವಸ್ತ್ರ ಧರಿಸಿದ್ದರು. ಮಡಿಯಾದ ಅಚ್ಚ ಬಿಳಿ ಪಂಚೆ ಹಾಗೂ ಬನಿಯನ್ ಧರಿಸಿದ್ದರು. ದೇವರೇ ಪ್ರತ್ಯಕ್ಷ ಆದಂತಾಯ್ತು. ನನಗೆ ಬುದ್ಧಿ ಬಂದಾಗಿನಿಂದ ನಾನು ಚಲನ ಚಿತ್ರಗಳಲ್ಲಿ ನೋಡಿ ಮೆಚ್ಚಿದ್ದ ಆದರ್ಶ ಪುರುಷ ನನಗೆ ಅತಿ ಸನಿಹದಲ್ಲೇ ನಿಂತಿದ್ದರು.ನನಗೆ ಒಂದೆಡೆ ಸಂತೋಷ, ಮತ್ತೊಂದೆಡೆ ಭಯ,ಭಕ್ತಿ,ಗಾಬರಿ ಎಲ್ಲವೂ ಉಂಟಾಯ್ತು.
ಮರಿ, ಏನು ಓದುತಿದ್ದೆಯಾ ,ನನ್ನ ಬಗ್ಗೆ ಪುಸ್ತಕ ಬರೆದಿದ್ದೆಯಂತೆ ,ತುಂಬಾ ಸಂತೋಷ. ನಿನ್ನ ಹೆಸರೇನು ಅಂತ ರಾಜಣ್ಣ ಕೇಳಿದರು. ಡಾ.ರಾಜ್ ಅವರನ್ನು ನೋಡುತ್ತಿದ್ದಂತೆ ನನ್ನ ಕೈ ಕಾಲುಗಳು ನಡುಗಲು ಆರಂಭಿಸಿದವು.ಮಾತು ಬರಲಾರದಾಯ್ತು.
ನಿನ್ನ ಮೂಗು ನನ್ನ ಮೂಗಿನ ರೀತಿಯೇ ಇದೆ.ಉದ್ದನೆಯ ಚೂಪು ಮೂಗು ಇರುವವರು ಮೇಧಾವಿಗಳು. ವಿಶ್ವೇಶ್ವರಯ್ಯ, ರಾಧಾಕೃಷ್ಣನ್, ಶ್ರೀಮತಿ ಇಂದಿರಾ ಗಾಂಧಿ ಅವರ ಮೂಗೂ ಸಹ ಹೀಗೆ ಇದೆ ಅಂತ ರಾಜಣ್ಣ ಮಾತನಾಡಿದರು. ಆಗ ಸ್ವಲ್ಪ ಧೈರ್ಯ ಬಂತು.ನನ್ನ ಹೆಸರು ರಾಮ ಕುಮಾರ್ ಅಂತ ತೊದಲುತ್ತ ನುಡಿದೆ. ನೀನೂ ರಾಜ ಕುಮಾರೆೇ ಬಿಡು. ನಿನಗೆ ಒಳ್ಳೆಯದಾಗಲಿ ಎಂದು ರಾಜಣ್ಣ ಮನದುಂಬಿ ಹಾರೈಸಿದರು.ನನ್ನ ಜೀವನದಲ್ಲಿ ಅದೊಂದು ಅಮೃತ ಘಳಿಗೆ.
ನಂತರ ಪಾರ್ವತಮ್ಮ ಅವರನ್ನು ಕರೆದ ರಾಜಣ್ಣ ಅವರು ಪಾಪ ಇನ್ನು ವಿದ್ಯಾರ್ಥಿ. ನನ್ನ ಮೇಲಿನ ಪ್ರೀತಿಗಾಗಿ, ಅಭಿಮಾನಕ್ಕಾಗಿ ಪುಸ್ತಕ ಹೊರತರುತ್ತಿದ್ದಾರೆ. ಮೈಸೂರಿನ ಸದಾನಂದ್ (ಚಿತ್ರ ನಿರ್ಮಾಪಕರು)
ಅವರಿಗೆ ಇವರ ಪುಸ್ತಕ ಮುದ್ರಣದ ಜವಾಬ್ದಾರಿ ವಹಿಸಿಕೊಳ್ಳುವ ಂತೆ ತಿಳಿಸು.ಅವರು ಮೈಸೂರಿನಿಂದ ಬೆಂಗಳೂರಿಗೆ ಬಂದಿರುವ ವೆಚ್ಚ ಕೊಟ್ಟು ಕಳಿಸು ಎಂದು ರಾಜಣ್ಣ ತಿಳಿಸಿದರು.ಅಷ್ಟು ಚಿಕ್ಕ ವಯಸ್ಸಿನ ನಮಗೆ ಜ್ಯೂಸ್ ಕುಡಿಸಿ, ಮನೆ ಬಾಗಿಲಿನವರೆಗೂ ಬಂದು ರಾಜಣ್ಣ ಬೀಳ್ಕೊಟ್ಟರು. ನಾಲ್ಕು ಕೋಟಿ ಕನ್ನಡಿಗರ ಹೃದಯ ಸಿಂಹಾಸನದ ಅಧಿಪತಿ ರಾಜ ಕುಮಾರ್ ಅವರ ಭೇಟಿ ನನ್ನ ಬದುಕಿನ ಅಮೃತ ಗಳಿಗೆ.ಅವರ ಸರಳತೆ ,ಮುಗ್ಧತೆ, ಮಗುವಿನಂಥ ಮನಸ್ಸು ನನ್ನ ಬದುಕಿನ ಮೇಲೆ ಪ್ರಭಾವ ಬೀರಿದೆ.
ರಾಜಣ್ಣ ನಂಜನಗೂಡಿನ ಚಿಕ್ಕ ಜಾತ್ರೆಯಲ್ಲಿ ಸನ್ಮಾನಿಸಿ ಆಶೀರ್ವದಿಸಿದ ಕ್ಷಣ
ನಿರ್ಮಾಪಕ ಸದಾನಂದ ಅವರ ಒತ್ತಾಸೆಯಿಂದ ,ರಾಜಣ್ಣ ಅವರ ಶುಭ ಹಾರೈಕೆ ಇಂದ ಕನ್ನಡ ದೊರೆ ರಾಜಕುಮಾರ ಪುಸ್ತಕ ಪ್ರಕಟ ಆಯ್ತು. ಆ ಪುಸ್ತಕ ಬಿಡುಗಡೆ ಆಗಬೇಕಲ್ಲವೇ. ಮತ್ತೆ ರಾಜ್ ಅವರನ್ನು ನೋಡಲು ಬೆಂಗಳೂರಿಗೆ ಹೊರಟೆ. ರಾಜ್ ಕುಮಾರ್ ಅವರು ಚಲನಚಿತ್ರ ವೊಂದರ ಚಿತ್ರೀಕರಣಕ್ಕಾಗಿ ತೆರಳಿದ್ದರು. ಇಂದಿನಂತೆ ದೂರವಾಣಿ ಹೆಚ್ಚು ಬಳಕೆಯಲ್ಲಿ ಇಲ್ಲದ ದಿನಗಳು. ಲೋಹಿತ್ ಫಾರಂ ಕಾಯುತ್ತಿದ್ದ ಸೆಕ್ಯುರಿಟಿ ರಾಜಣ್ಣ ಸಿಗುವುದು ಎರಡು ದಿನ ತಡವಾಗುತ್ತದೆ ಎಂದು ತಿಳಿಸಿದ. ಮತ್ತೆ ಮೈಸೂರಿಗೆ ವಾಪಾಸಾದೆ. ಒಂದು ವಾರ ಬಿಟ್ಟು ಮತ್ತೆ ಬೆಂಗಳೂರಿನ ಬಳಿ ಇರುವ ಬೀಡದಿಗೆ ತೆರಳಿದೆ.ರಾಜಣ್ಣ ಮನೆಯಲ್ಲೇ ಇದ್ದರು. ಮನೆಯ ತುಂಬಾ ಅಭಿಮಾನಿಗಳ ಸೈನ್ಯವೇ ತುಂಬಿತ್ತು.
ಅಣ್ಣಾವ್ರು ಜನರ ಮಧ್ಯದಲ್ಲಿ ನನ್ನನ್ನು ನೋಡುತ್ತಿದ್ದಂತೆ ವದ್ದರರಕೊಪ್ಪಲು ನಾಗರಾಜು ಅವರಿಗೆ ಹೇಳಿ ನನ್ನನ್ನು ಹತ್ತಿರಕ್ಕೆ ಕರೆಸಿಕೊಂಡರು. ನಾನು ಕನ್ನಡದ ದೊರೆ ರಾಜಕುಮಾರ ಪುಸ್ತಕದ ಮೊದಲ ಪ್ರತಿಯನ್ನು ಅವರಿಗೆ ಕೊಟ್ಟೆ. ಪುಸ್ತಕಕ್ಕೆ ಕೈ ಮುಗಿದು ನಮಿಸಿ ಪುಸ್ತಕದ ಮುಖ ಪುಟ ನೋಡಿದರು. ನಿಮ್ಮ ಪ್ರೀತಿ,ಅಭಿಮಾನ ಬಹಳ ದೊಡ್ಡದು. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಪುಸ್ತಕವನ್ನು ನೀವೇ ಬಿಡುಗಡೆ ಮಾಡಬೇಕು.ನೀವು ಮೈಸೂರಿಗೆ ಬರಬೇಕು ಎಂದು ಮನವಿ ಮಾಡಿದೆ. ಏನಪ್ಪಾ ನೀವು. ನಾನು ಮೈಸೂರಿಗೆ ಬಂದರೆ ಸಾವಿರಾರು ಅಭಿಮಾನಿಗಳು ಸೇರುತ್ತಾರೆ. ಅವರಿಗೆಲ್ಲ ಸೂಕ್ತ ರಕ್ಷಣೆ ವ್ಯವಸ್ಥೆ,ಊಟದ ವ್ಯವಸ್ಥೆ ಎಲ್ಲ ಮಾಡುವುದು ನಿಮಗೆ ಕಷ್ಟ. ನಾನು ಮೈಸೂರಿನ ಅಭಿಮಾನಿ ಗಳಿಗೆ ಹೇಳುತ್ತೇನೆ.ಈ ಪುಸ್ತಕವನ್ನು ಸರಳ ಸಮಾರಂಭ ಮಾಡಿ, ಹಿರಿಯ ನಟರಾದ ಎಂ.ಪಿ.ಶಂಕರ್ ಹಾಗೂ ಕೆ.ಎಸ್.ಅಶ್ವತ್ಥ್ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಿ ಎಂದು ತಿಳಿಸಿದರು.ಕನ್ನಡದ ದೊರೆ ರಾಜಕುಮಾರ ಕೃತಿ ಹಿರಿಯ ನಟರಿಂದ ಬಿಡುಗಡೆ ಆಯಿತು..
ನಂಜನಗೂಡಿನ ಜಾತ್ರೆಯ ಸಂದರ್ಭ ನಾನು ಬೆಳ್ಳಿಗೆ ಬಹುಬೇಗ ಅಲ್ಲಿಗೆ ಹೋಗಿ ರಾಜ್ ಕುಮಾರರ ನ್ನು ಕುರಿತ ಪುಸ್ತಕವನ್ನು ಸುಮಾರು ಒಂದು ನೂರು ಅಭಿಮಾನಿಗಳಿಗೆ ವಿತರಿಸಿದ್ದೆ. ರಥೋತ್ಸವದ ಸಂದರ್ಭಕ್ಕೆ ಅಲ್ಲಿಗೆ ಬಂದ ರಾಜ್ ಕುಟುಂಬದವರಿಗೆ ಈ ವಿಷಯ ತಿಳಿಯಿತು.
ಈ ವೇಳೆಗೆ ದೇವಸ್ಥಾನದ ಸ್ವಲ್ಪ ದೂರದಲ್ಲಿ ರಾಜ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮವೂ ಏರ್ಪಟ್ಟಿತ್ತು. ಆ ಕಾರ್ಯಕ್ರಮದ ಸ್ಥಳಕ್ಕೆ ನಾನು ಹೋದೆ.ಸಾವಿರಾರು ಅಭಿಮಾನಿಗಳು. ನೂಕು ನುಗ್ಗಲು ನಿಯಂತ್ರಿಸುತ್ತಿರುವ ಪೊಲೀಸರು.ಅಂಥ ಸಂದರ್ಭದಲ್ಲೂ ಮೈಕ್ ನಲ್ಲಿ ಭೇರ್ಯ ರಾಮಕುಮಾರ್ ವೇದಿಕೆಗೆ ಬರಬೇಕು ಎಂದು ಕಾರ್ಯಕ್ರಮ ಆಯೋಜಕರು ಆಹ್ವಾನಿಸಿದರು.ನಾನು ವೇದಿಕೆಯ ಹತ್ತಿರಕ್ಕೆ ಹೋಗಲು ಪೊಲೀಸರು ಬಿಡುತ್ತಿಲ್ಲ.ಕೊನೆಗೆ ರಾಜಣ್ಣ ಅವರ ಸೂಚನೆಯ ಮೇರೆಗೆ ಕಾರ್ಯಕ್ರಮ ಆಯೋಜಕರೆ ಬಂದು ನನ್ನನ್ನು ವೇದಿಕೆಯ ಮೇಲೆ ಕರೆದು ಕೊಂಡು ಹೋದರು. ಕಾರ್ಯಕ್ರಮದಲ್ಲಿ ರಾಜ್ ಕುಮಾರ್ ಅವರು ವಿವಿಧ ಸಾಧಕರ ಜೊತೆಯಲ್ಲಿ ನನಗೂ ಸನ್ಮಾನ ಮಾಡಿದರು.
ನಾನಿನ್ನೂ ಪದವಿ ವಿದ್ಯಾರ್ಥಿ.ಸನ್ಮಾನ ಮಾಡಿಸಿಕೊಂಡ ಭಾವಚಿತ್ರ ಹುಡುಕಿ ಪಡೆಯಬೇಕು ಎಂಬ ಚಿಂತನೆಯಿಲ್ಲದ ವಯಸ್ಸು.ನನಗೆ ಆ ಭಾವಚಿತ್ರ ಬೇಕೆಂಬ ಹಂಬಲದಿಂದ ಇಂದಿಗೂ ಸಾಕಷ್ಟು ಪ್ರಯತ್ನ ನಡೆಸಿದ್ದೇನೆ.ಈ ಅಪರೂಪದ ಸನ್ಮಾನದ ಭಾವಚಿತ್ರ ಇಂದಿಗೂ ಕನಸಾಗಿಯೇ ಉಳಿದಿದೆ.ಇದೊಂದು ನೋವಿನ ಸಂಗತಿ.
ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು ,ಪತ್ರಕರ್ತರು
ಮೈಸೂರು
ಮೊಬೈಲ್ 6363172368