ಮೂಡಲಗಿ: ಸ್ವತಂತ್ರ ನಂತರ ಭಾರತದ ಮೊದಲ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದರೂ ಕೂಡ ನೆಹರು ಅವರ ತುಷ್ಟೀಕರಣ ನೀತಿಯಿಂದಾಗಿ ಸಿಡಿದೆದ್ದು ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಕಾರ್ಯಕ್ರಮದ ರಾಜ್ಯ ಸಂಚಾಲಕ, ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಜು. 06 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮ ದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಡಾ.ಶ್ಯಾಮ ಪ್ರಸಾದ ಮುಖರ್ಜಿ ತಮ್ಮ 33 ನೇ ವಯಸ್ಸಿನಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ವಯಸ್ಸಿನ ಉಪ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ತಮ್ಮ ವೈಯಕ್ತಿಕ ಬದುಕಿಗೆ ತಿಲಾಜಂಲಿ ನೀಡಿ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಅಂದಿನ ಶೇಖ ಅಬ್ದುಲ್ಲಾ ಅವರ ಸರ್ಕಾರದಲ್ಲಿ ಬಂಧಿಸಲ್ಪಟ್ಟು 40 ದಿನಗಳ ಕಾಲ ಜೈಲಿನ ನರಕಯಾತನೆ ಅನುಭವಿಸಿ, ನಿಗೂಢ ಮತ್ತು ಸಂಶಯಾಸ್ಪದ ರೀತಿಯಲ್ಲಿ ಪ್ರಾಣತ್ಯಾಗ ಮಾಡಿದ ಧೀಮಂತ ನಾಯಕ ಡಾ.ಶ್ಯಾಮಪ್ರಸಾದ ಮುಖರ್ಜಿ ಎಂದು ಕೊಂಡಾಡಿದರು.
ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಕನಸನ್ನು ಇಂದಿನ ಪ್ರಧಾನಿ ಧೀಮಂತ ನಾಯಕ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮೂಲಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡಿದ್ದಾರೆ ಮತ್ತು ಕಾಶ್ಮೀರ ಭಯೋತ್ಪಾದನೆಗೆ ಅಂಕುಶ ಹಾಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಪಿ.ಜೆ.ಎನ್ ಪ್ರೌಢ ಶಾಲೆಯ ಆವರಣದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆಯ ಕರಪತ್ರಗಳನ್ನು ವಿತರಿಸಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಮಂಡಲ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶ್ರೀಶೈಲ ಪೂಜೇರಿ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಬಸವರಾಜ ಕಡಾಡಿ, ಅಡಿವೆಪ್ಪ ದಳವಾಯಿ, ಅಡಿವೆಪ್ಪ ಕುರಬೇಟ, ಪ್ರಭು ಕಡಾಡಿ, ಮಹಾದೇವ ಮಧಭಾಂವಿ, ಭಗವಂತ ಪತ್ತಾರ, ಪಾಂಡು ಮಹೇಂದ್ರಕರ, ಪುಂಡಲಿಕ ಅರಭಾವಿ, ಬಾಳೇಶ ಸಕ್ರೆಪ್ಪಗೋಳ, ಗೋಕಾಕ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕೆ. ಶಿವಕುಮಾರ, ಈರಪ್ಪ ಢವಳೇಶ್ವರ, ಬಸವರಾಜ ಗಾಡವಿ, ಭೀಮಶಿ ಬಂಗಾರಿ, ಸೇರಿದಂತೆ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.