spot_img
spot_img

ಸಾಹಿತ್ಯ ಪರಿಚಾರಕ ಡಾ. ಯ.ಮಾ.ಯಾಕೊಳ್ಳಿ

Must Read

- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಯ.ಮಾ.ಯಾಕೊಳ್ಳಿಯವರಿಗೆ ಮೊಟ್ಟ ಮೊದಲು ಅಭಿನಂದನೆ ಸಲ್ಲಿಸುವೆ. ಈ ಹಿಂದಿನ ಅವಧಿಯಲ್ಲಿ ಕಾರ್ಯದರ್ಶಿಗಳಾಗಿ ತಮ್ಮದೇ ಛಾಪನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಟುವಟಿಕೆಗಳ ಮೂಲಕ ಅಚ್ಚೊತ್ತಿದ್ದರು.ಈಗ ಅಧ್ಯಕ್ಷ ಗಾದಿ ಒಲಿದು ಬಂದಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ಪ್ರತಿಭೆಗಳು ಗುಡಿಸಲಲ್ಲಿ ಹುಟ್ಟುತ್ತವೆ. ಅರಮನೆಯಲ್ಲಿ ಬೆಳಗುತ್ತವೆ ಎಂಬುದೊಂದು ಪ್ರಸಿದ್ಧ ಮಾತು. ಡಾ ಯ.ಮಾ.ಯಾಕೊಳ್ಳಿ ಅವರು ಇಂದು ಅರಮನೆಯಲ್ಲಿ ಇರದಿದ್ದರೂ ಬದುಕಿನಲ್ಲಿ ಸುಸ್ಥಿತಿಯಲ್ಲಿದ್ದಾರೆ. ಪದವಿ ಪೂರ್ವ ಕಾಲೇಜಿನ ಉಪನ್ಯಸಕರಾಗಿ ಮೂರು ದಶಕಗಳ ಕಾಲ ದುಡಿದ ಅವರು ಈಚೆಗೆ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ್ದಾರೆ. ಉಪನ್ಯಾಸಕರಾಗಿ ಮೂವತ್ತು ವರುಷ ಕಾಲ ಅವರು ಗಳಿಸಿದ್ದು ಅಸಂಖ್ಯ ವಿದ್ಯಾರ್ಥಿಗಳನ್ನು.

ಕಿರು ಪರಿಚಯ:

ಡಾ.ಯಾಕೊಳ್ಳಿಯವರು ಮೂಲತಃ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಜನಿಸಿದವರಾದರೂ ಅವರ ಕರ್ಮಭೂಮಿಯನ್ನ ಸವದತ್ತಿಯನ್ನಾಗಿ ಮಾಡಿಕೊಂಡು ಈಗ ಸವದತ್ತಿ ಯವರೇ ಆಗಿದ್ದಾರೆ. ೧೨-೧೧-೧೯೬೪ ರಲ್ಲಿ ತಾಯಿಯ ತವರುಮನೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಜನ್ಮ ತಾಳಿದರು. ತಂದೆ ದಿ.ಮಾಳಪ್ಪನವರು ತಾಯಿ ಶ್ರೀಮತಿ ಯಲ್ಲವ್ವ. ಮನೆಗೆ ಹಿರಿಯ ಮಗನಾಗಿ ಜನಿಸಿದ ಇವರ ಬಾಲ್ಯದ ಜೀವನ, ವಿದ್ಯೆ ಕಲಿಯಲು ಪೂರಕವಲ್ಲದ ವಾತಾವರಣದಿದ ಕೂಡಿತ್ತು. ಕಾರಣ ಅವರ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ತಮ್ಮ ಛಲ ಬಿಡದ ತ್ರಿವಿಕ್ರಮಗುಣದಿಂದಾಗಿ ವಿದ್ಯೆಯಂಬ ಅದ್ಭುತ ಅಲ್ಲಾವುದ್ದೀನನ ದೀಪದಂತೆ ಜ್ಞಾನವನ್ನು ದೊರಕಿಸಿಕೊಂಡವರು.

- Advertisement -

ಬಡತನ ಸಾಧಕರಿಗೆ ಅಡ್ಡಿಯೇನೂ ಆಗಲಾರದು ಎಂದು ಹೇಳಲು ಡಾ.ಯಾಕೊಳ್ಳಿಯವರ ಜೀವನವೂ ಒಂದು ಉದಾಹರಣೆಯೇ. ವಿದ್ಯೆಯನ್ನು ಕಲಿಯಲು ದೇವರು ಯಾರನ್ನಾದರೂ ನಮ್ಮ ಬದುಕಿನಲ್ಲಿ ಕಳಿಸಿರುತ್ತಾನೆ ಎಂಬಂತೆ “ನೀರಬೂದಿಹಾಳದ ದೇಸಾಯರ ಮನೆತನದ ಶ್ರೀಮಂತ ಆನಂದರಾವ ದೇಸಾಯಿವರ ಆಸರೆಯಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಹೊಂದುವದು ಇವರಿಗೆ ಸಾಧ್ಯ ವಾಯಿತು” ಎಂದು ನೆನೆಯುವ ಡಾ. ಯಾಕೊಳ್ಳಿಯವರು ತಂದೆಗೆ ಹೆಚ್ಚಿಗೆ ಕಲಿಸುವ ಶಕ್ತಿ ಇಲ್ಲದವರಾದರೂ ತನ್ನ ಮಗ ಕಲಿಯಲಿ ಎಂಬ ಸದಿಚ್ಛೆಯುಳ್ಳವರಾಗಿದ್ದರು ಎಂಬುದನ್ನು ತಂದೆ-ತಾಯಿಯರ ಮಾತೃವಾತ್ಸಲ್ಯವನ್ನು ನೆನೆಯುತ್ತಾರೆ. ಇವರು ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಸ್ವಂತ ಊರಲ್ಲಿಯೇ ಪಡೆದರು. ಹೈಸ್ಕೂಲಿಗೇ ಹತ್ತನೆಯ ವರ್ಗಕ್ಕೆ ಪ್ರಥಮಿಗರಾಗಿ ಪಾಸಾದÀರು. ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಶ್ರೀ ಗ.ರಾ.ಗೋರಯ್ಯನವರ, ಶ್ರೀ ಪಿ ಎಫ್ ಕುಂದರಗಿ ಮೊದಲಾದ ಶಿಕ್ಷಕರು ಇವರಿಗೆ ಮಾಡಿದ ಸಹಾಯ ಅಷ್ಟಿಷ್ಟಲ್ಲ, ಶ್ರೀಮಂತ ಆನಂದರಾವ ದೇಸಾಯರಂತೂ ತಮ್ಮ ಮನೆ ಮಗನಂತೆಯೇ ನೋಡಿಕೊಂಡು ವಿದ್ಯೆಗೆ ಆಸರೆಯಾದರು. ಹತ್ತನೆಯ ತರಗತಿ ಮುಗಿಸಿದಾಗ ಕಾಲೇಜಿಗೆ ಹಚ್ಚಲು ತಂದೆ ಯವರಿಗೆ ಆರ್ಥಿಕವಾಗಿ ಸಾಧ್ಯವಿರಲಿಲ್ಲ ಆದರೆ ದೇಸಾಯಿಯವರ ಸಹಾಯದಿಂದಾಗಿ ಗುಳೇದಗುಡ್ಡದಲ್ಲಿ ಶ್ರೀ ರೇವಡಿಯವರ ಉಚಿತ ಪ್ರಸಾದ ನಿಲಯ ದೊರಕಿದ ಕಾರಣ ವಿದ್ಯೆ ಮುಂದುವರಿಯುವದು ಸಾಧ್ಯವಾ ಯಿತು. ಪಿಯುಸಿ ಮತ್ತು ಇಂರ‍್ನ್ ಶಿಪ್ ಎಂಬ ಪ್ರಾಥಮಿಕ ಶಾಲಾ ಶಿಕ್ಷಕರಾಗುವ ತರಬೇತಿಯನ್ನು ಮುಗಿಸಿದ ಡಾ. ಯಾಕೊಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕನಾಗುವ ಅವಕಾಶ ಬಂದರೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೆಕೆಂಬ ಆಸೆಯ ಕಾರಣ ಅದಕ್ಕೆ ಸೇರದೇ ಶಿಕ್ಷಣ ಮುಂದುವರೆಸಿದರು. ಬಿ.ಎ ಪದವಿಯಲ್ಲಿ ಕನ್ನಡ ಪ್ರಧಾನ ವಿಷಯವಾಗಿ ತಗೆದುಕೊಂಡು ವಿಶ್ವವಿದ್ಯಾಲಯಕ್ಕೆ ಒಂಬತ್ತನೆಯ ರ‍್ಯಾಂಕ್‌ನೊಂದಿಗೆ ಉತ್ತೀರ್ಣ ರಾಗಿದ್ದು ಬಹುದೊಡ್ಡ ಸಂಗತಿಯಾಗಿತ್ತು . ಗ್ರಾಮೀಣ ವಲಯದ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಬರುವದು ಆಗ ಬಹು ದೊಡ್ಡ ಸಾಧನೆಯಾಗಿತ್ತು. ಅಂಥದ್ದರಲ್ಲಿ ಇವರ ಈ ರ‍್ಯಾಂಕ್ ಇವರ ಬದುಕಿನ ದಿಕ್ಕನ್ನು ಬದಲಿಸಿತು. ಎಂ ಎ (ಸ್ನಾತಕೋತ್ತರ ಕನ್ನಡ ಪದವಿ) ಕನ್ನಡ ಮಾಡಬೇಕೆಂಬ ಅವರ ಕನಸಿಗೆ ವಿದ್ಯಾಗುರುಗಳಾದ ಡಾ.ಎಂ.ಬಿ ಕಣವಿ ಡಾ. ಎಂ.ಬಿ. ಹೂಗಾರವರು, ಆರ್ ಎಚ್ ಕುಲರ‍್ಣಿಯವರು (ಇತಿಹಾಸ ಪ್ರಾಧ್ಯಾಪಕರು) ಇಡೀ ಕಾಲೇಜಿನ ಗುರುಬಳಗ , ಗೆಳೆಯರಾದ ಈರಣ್ಣ ಪಟ್ಟಣಸೆಟ್ಟಿಯವರು ಬಲ ತುಂಬಿದರು. ಧಾರವಾಡ ಸೇರಿದ ಯಾಕೊಳ್ಳಿಯವರು ಯರಗಟ್ಟಿಯ ಧಣಿಗಳ ಮನೆಯ ಆಸರೆ ಪಡೆದು ಗೆಳೆಯ ಯಲ್ಲಾಪೂರದ ನಾಗರಾಜ ನಾಯಕ ಹಿರಿಯರಾದ ಡಾ ಗುಂಡಣ್ಣ ಕಲಬುರ್ಗಿಯವರ ಸಹಾಯದಿಂದ ಸ್ನಾತಕೋತ್ತರ ಪದವಿ ಪಡೆಯುವಂತಾಯಿತು. ಡಾ ಬಿ.ಆರ್ ಹಿರೇಮಠರವರ ಅಂತರಂಗದ ಶಿಷ್ಯರಾದದ್ದು ಅವರ ಬದುಕಿನ ಭಾಗ್ಯವೆಂದೇ ನೆನೆಯುತ್ತಾರೆ. ನಾಡಿನ ಬಹುದೊಡ್ಡ ಸಂಶೋಧಕರಾಗಿದ್ದ ಡಾ.ಎಂ ಎಂ ಕಲಬುರ್ಗಿ ಯವರ ಮಾರ್ಗದರ್ಶನದಲ್ಲಿ ಸಮಗ್ರ ಶರಣರ ಸಮಗ್ರ ವಚನ ಪ್ರಕಟಣಾ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ದುಡಿದರು. ಎಂ ಎ ಪದವಿಯ ನಂತರ ಅನ್ನ ಹುಡುಕಿ ಯರಗಟ್ಟಿಯ ಶ್ರೀ ಬೋಗರಾಜ ದೇಸಾಯಿ ಪದವಿ ಪೂರ್ವ ಕಾಲೇಜು ಅರಸಿ ಬಂದರು. ಆದರೆ ಕೆಲವೇ ವರ್ಷಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕವಾಗಿ ಗುಲ್ಬರ್ಗಾ ಜಿಲ್ಲೆಯ ಮಾದನ ಹಿಪ್ಪರಗಿಗೆ ಹೋದರು. ಅಲ್ಲಿ ನಾಲಕು ವರ್ಷಗಳ ಕಾಲ ದುಡಿತದ ನಂತರ ಸವದತ್ತಿ ತಲೂಕಿನ ಹೂಲಿಕಟ್ಟಿ, ಯರಗಟ್ಟಿ , ಸವದತ್ತಿಗಳಲ್ಲಿ ಉಪನ್ಯಾಸಕ ವೃತ್ತಿ ಪೂರೈಸಿ ಈಗ ಕಳೆದ ಆರು ತಿಂಗಳಿಂದ ಪ್ರಾಚಾರ‍್ಯರಾಗಿ ಪದೋನ್ನತಿ ಹೊಂದಿ ಯಕ್ಕುಂಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಯರಗಟ್ಟಿಯ ನಂಟು:

ಇಂದಿಗೂ ಅವರ ವೃತ್ತಿ ಬದುಕಿನ ಸುವರ್ಣಯುಗ ಎಂದು ಅವರು ನೆನೆಯುವದು ಯರಗಟ್ಟಿಯ ಖಾಸಗಿ ಕಾಲೇಜಿನಲ್ಲಿದ್ದ ಕಾಲವನ್ನೇ. ಅಲ್ಲಿನ ಗೆಳೆಯರು, ಶಿಷ್ಯ ಬಳಗ ಇಂದಿಗೂ ಅವರನ್ನು ಮರೆತಿಲ್ಲ. ಅವರೂ ಅದನ್ನು ಮರೆತಿಲ್ಲ. ಈ ನಡುವೆ ಡಾ. ಬಿ.ಆರ್ ಹಿರೇಮಠರವರ ಮಾರ್ಗದರ್ಶನದಲ್ಲಿ “ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು” ವಿಷಯದಲ್ಲಿ ಸಂಶೋಧನೆ ಮಾಡಿ ಪಿ. ಎಚ್ ಡಿ ಪದವಿ ಪಡೆದರು.

- Advertisement -

ಈಗ ಅವರು ಸರಕಾರಿ ಕಾಲೇಜು ಸೇರಿ ೨೭ಕ್ಕೂ ಹೆಚ್ಚು ವರ್ಷಗಳಾಗಿವೆ. ಹೂಲಿಕಟ್ಟಿ ಯರಗಟ್ಟಿ, ಸತ್ತೀಗೇರಿ,ಸವದತ್ತಿ ನಾನಾ ಕಡೆ ಸೇವೆ ಮಾಡಿ ಈಗ ಸಧ್ಯಕ್ಕೆ ಸವದತ್ತಿ ತಾಲೂಕಿನ ಯಕ್ಕುಂಡಿ ಪದವಿ ಪೂರ್ವ ಕಾಲೇಜಿನಲ್ಲಿ (ಕೆ.ಪಿಎಸ್ ಶಾಲೆ)ಪ್ರಾಚರ‍್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶ್ರೀಮತಿ ಡಾ ಪ್ರೇಮಾ ಯಾಕೊಳ್ಳಿಯವರು ಸವದತ್ತಿಯ ಕುಮಾರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರು. ಮಕ್ಕಳು ಡಾ.ನಿರಂಜನ ಎಂಬಿಬಿಎಸ್ ಪೂರ್ಣಗೊಳಿಸಿ ಹೆಚ್ಚಿನ ವ್ಯಾಸಂಗ (ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ) ಕ್ಕಾಗಿ ತಯಾರಿ ನಡೆಸಿದ್ದರೆ, , ಎರಡನೆಯ ಪುತ್ರ ನಿವೇದನ ಎಂ.ಟೆಕ್ ವ್ಯಾಸಂಗ ಮಾಡುತಿದ್ದಾರೆ. ಅವರ ಬದುಕು ಬರಹಗಳ ಬೆಳವಣಿಗೆಗೆ ಅವರ ಶ್ರೀಮತಿ ಡಾ. ಪ್ರೇಮಾ ಯಾಕೊಳ್ಳಿಯವರ ಬೆಂಬಲ ಮಾವನವರಾದ ಶ್ರೀ ಎ.ಎಚ್ ಹೊಸಟ್ಟಿಯವರು ಅವರ ಕುಟುಂಬ ವರ್ಗದ ಶ್ರೀ ರಕ್ಷೆ ಇದೆ ಎಂದು ಯಾಕೊಳ್ಳಿಯವರು ಕೃತಜ್ಞತೆಯಿಂದ ನೆನೆಯುತ್ತಾರೆ

ಡಾ .ಯಾಕೊಳ್ಳಿ ಒಳ್ಳೆಯ ಉಪನ್ಯಾಸಕರಾಗಿ ನೂರಾರು ಉತ್ತಮ ವಿದ್ಯಾರ್ಥಿಗಳನ್ನು ನೀಡಿದ್ದಾರೆ. ಪದವಿ ಕಾಲೇಜುಗಳ ಪ್ರಾಧ್ಯಾಪಕರಿಂದ ಹಿಡಿದು ಪೋಲಿಸ್ ಅಧಿಕಾರಿಗಳು, ವಕೀಲರು, ಶಿಕ್ಷಕರು, ಕೃಷಿಕರು ಆಗಿ ಬೇರೆ ಬೇರೆ ಕ್ಷೇತ್ರದಲಿ ನಾಡಿನ ಎಲ್ಲ ಕಡೆ ಅವರು ಹಬ್ಬಿದ್ದಾರೆ. ಇಂದಿಗೂ ಆ ಎಲ್ಲ ವಿದ್ಯಾರ್ಥಿಗಳ ಪ್ರೀತಿ ಯಾಕೊಳ್ಳಿವರೊಂದಿಗಿರುವದಕ್ಕೆ ಅನೇಕ ಸಾಕ್ಷಿಗಳಿವೆ.

ಸಾಹಿತ್ಯ ಕ್ಷೇತ್ರ:

ಸಾಹಿತಿಯಾಗಿ ಯಾಕೊಳ್ಳಿಯವರ ಸಾಧನೆ ಸಣ್ಣದಲ್ಲ. ಕವಿಯಾಗಿ ವಿಮರ್ಶಕರಾಗಿ, ಸಂಶೋಧಕ, ಸಂಪಾದಕ ಎಲ್ಲವೂ ಅಗಿ ನಲವತ್ತರಷ್ಟು ಕೃತಿಗಳನ್ನು ತಂದಿದ್ದಾರೆ. ಅವರ ಬರಹ ವ್ಯಾಪಕವಾದುದು.

ಬರಹ:

ಕಾವ್ಯ:

  1. ನಿಟ್ಟುಸಿರು ಬಿಡುತ್ತಿದೆ ಕವಿತೆ (೧೯೯೨)
  2. ಚಿಂದಿ ಅಯುವ ಹುಡುಗಿ (೨೦೦೯)
  3. ತಪ್ಪಿತಸ್ಥನ ಅಫಿಡವಿಟ್ಟು (೨೦೧೩)
  4. ನಿಂತು ಹೋದ ನದಿಗಳು (೨೦೧೪)
  5. ಹಂಗಿನರಮನೆಯೊಳಗೆ
  6. ಹೆಸರೊಲ್ಲದ ಚಿತ್ರಗಳು (ಚುಟುಕು ಕಾವ್ಯ)
  7. ನಮ್ಮೊಳಗಿನ ನಾವು (ಕವನ ಸಂಕಲನ ಡಾ ಮೈನುದ್ದೀನ ರೇವಡಿಗಾರ ಅವರೊಂದಿಗೆ)

ಕಥಾ ಸಂಕಲನ:

  1. ನಾದದ ನದಿಯೊಂದು ಹರಿದಾಂಗ(೨೦೧೭)

ಮುನ್ನುಡಿ ಸಂಕಲನ:

  1. ಮೊದಲ ಸೊಲ್ಲು (೨೦೧೯)

ವಿಮರ್ಶೆ:

  1. ಒರತೆ (೨೦೧೦) (೨೦೧೩)
  2. ಸಮಚಿತ್ತ (೨೦೧೩)
  3. ಸಮಕಟ್ಟು (೨೦೧೩)
  4. ಅನುಶೋಧ (೨೦೧೫)
  5. ಹೃದಯ ಸಾಕ್ಷಿ (೨೦೧೫)
  6. ಕಾವ್ಯಯೋಗ (೨೦೧೮)
  7. ಪ್ರತಿಸ್ಪಂದನ (೨೦೧೮)
  8. ಕಾವ್ಯ ಸಂಗಾತ (೨೦೧೭)
  9. ಕನಕಸ್ಮೃತಿ (೨೦೧೭)

ವಚನ ಸಾಹಿತ್ಯ ಚಿಂತನ:

  1. ಹೃದಯ ಕೃಷಿ (೨೦೧೪)
  2. ಬೆಳಕಿನ ಬೀಜಗಳು (೨೦೧೫)
  3. ಉರದ ಮುಳ್ಳು (೨೦೧೫)
  4. ವಚನ ಶೋಧ (೨೦೧೬)

ಸಮಗ್ರ ಸಾಹಿತ್ಯ ವಿಮರ್ಶೆ:

  1. ಸುವೃತಾನುಸಂಧಾನ (೨೦೧೪)
  2. ಬೀಗಿ ಬೆಳೆದ ಗೊನೆ ಬಾಳೆ (೨೦೧೬)
  3. ದೇಶಿ ಪ್ರಜ್ಞೆ: ಡಾ ಶ್ರೀರಾಮ ಇಟ್ಟಣ್ಣವರ

ವ್ಯಕ್ತಿ ಚಿತ್ರ:

  1. ಆದರಣೀಯರು-ಸಹೃದಯರು (೨೦೧೪)
  2. ಉದ್ಯಮಶೀಲ (೨೦೧೬)
  3. ಚನ್ನಪ್ಪ ಯರಗಣವಿ

ಮಕ್ಕಳ ಸಾಹಿತ್ಯ:

  1. ಸುಗಂಧ ವರ್ತಿ

ಸಂಶೋಧನೆ:

  1. ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು (೨೦೦೯)

ಸಂಪಾದನೆ:

  1. ಬೆಳ್ಳಿ ಬೆಳಕು (೧೯೯೭)
  2. ಚಂದ್ರಪ್ರಭಾ (೨೦೦೨)
  3. ಮರೆಯಲಾಗದ ಚೇತನ (೨೦೧೩)
  4. ವೆಂಕಟಾತನಯ ನಂದಿ (೨೦೧೩)
  5. ರಜತ ಸೌರಭ (೨೦೧೫)
  6. ಉದಾತ್ತ ಚರಿತ (೨೦೧೬)
  7. ಶರಣರ ದಾಂಪತ್ಯ ಧರ್ಮ (೨೦೧೭) (ಡಾ ಶಶಿಕಾಂತ ಪಟ್ಟಣರೊಂದಿಗೆ ಸೇರಿ ಸಂಪಾದನೆ)
  8. ಯುರೂಪು ಕಥನ : ಅವಲೋಕನ (೨೦೨೦)
    (ಡಾ.ಅಶೋಕ ನರೋಡೆಯವರ ಪ್ರವಾಸ ಕೃತಿ ಅವಲೋಕನ)

ಪ್ರಶಸ್ತಿ ಗೌರವಗಳು:

ಪ್ರಶಸ್ತಿ:

  • ಸವದತ್ತಿ ತಾಲೂಕಾ ಆಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿ
  • ಸ್ವಾತಂತ್ರö್ಯ ದಿನೋತ್ಸವ ಪ್ರಶಸ್ತಿ
  • ಉತ್ತರ ಕರ್ನಾಟಕ ಶ್ರೇಷ್ಠ ಯುವ ಲೇಖಕ ಪ್ರಶಸ್ತಿ
  • ಕಾವ್ಯಕ್ಕಾಗಿ ಸಂಚಯ, ಸಂಕ್ರಮಣ ಪ್ರಶಸ್ತಿ
  • ‘ಹೃದಯ ಕೃಷಿ’ ಕೃತಿಗೆ ಅಖಿಲಭಾರತ ದಲಿತ ಸಾಹಿತ್ಯ
  • ಸಮ್ಮೇಳನನೀಡುವ ೨೦೧೪ ನೆಯ ಸಾಲಿನ ಪ್ರಶಸ್ತಿ
  • ೨೦೧೬ ನೆಯ ಸಾಲಿನ ಕರ್ನಾಟಕ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ – ೨೦೧೬
  • ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ೨೦೧೭ ನೆಯ ಸಾಲಿನ ‘ಮುರುಘಶ್ರೀ’ ಪ್ರಶಸ್ತಿ
  • ಹುಕ್ಕೇರಿ ಹಿರೇಮಠದಿಂದ ದಸರಾ ಮಹೋತ್ಸವದ ಸಾಹಿತ್ಯ ಸನ್ಮಾನ =೨೦೧೭
  • ಚಿಕ್ಕುಂಬಿ ಶ್ರೀ ಅಜಾತ ನಾಗಲಿಂಗ ಮಠದಿಂದ ನೀಡುವ ಪ್ರಪ್ರಥಮ ‘ಅಜಾತ ಶ್ರೀ’ ಪ್ರಶಸ್ತಿ-೨೦೧೮
  • ಶಿಗ್ಗಾವಿ ಉತ್ತರ ಸಾಹಿತ್ಯ ವೇದಿಕೆ ನೀಡುವ ಡಾ ಹಿರೇಮಲ್ಲೇಶ್ವರನ್ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ -೨೦೧೯
  • ಅವರ ಸಾಹಿತ್ಯ ಕೃತಿಗಳು ನಾಡಿನ ವಿದ್ವಾಂಸರ ಗಮನ ಸೆಳೆದಿವೆ ಕೃತಿಗಳು ಪ್ರಶಸ್ತಿ ಪಡೆದಿವೆ. ಕವಿತೆಗಳಿಗೆ ಸಂಚಯ, ಸಂಕ್ರಮಣ ಪ್ರಶಸ್ತಿ ಬಂದಿದೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಉಪನ್ಯಾಸಕ ಪ್ರಶಸ್ತಿಯ ಗರಿ ಅವರ ಮುಕುಟವೇರಿದೆ. ಮುನವಳ್ಳಿಯ ಸೋಮಶೇಖರ ಮಠದಿಂದ ಕೊಡ ಮಾಡುವ “ಮುರುಘಶ್ರೀ” ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಉತ್ತಮ ವಾಗ್ಮಿ:

ಇಂದು ನಾಡಿನ ಶ್ರೇಷ್ಠ ವಾಗ್ಮಿಗಳಾಗಿ ಡಾ.ಯಾಕೊಳ್ಳಿ ರೂಪಗೊಂಡಿದ್ದಾರೆ. ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂದರ್ಭಗಳಲ್ಲಿ ನೂರಾರು ವೇದಿಕೆ ಹಂಚಿಕೊಂಡಿದ್ದಾರೆ. ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ನಾನಾ ಹಂತದಲ್ಲಿ ಸೇವೆ ಮಾಡಿದ್ದಾರೆ.

ವಿಶ್ವ ವಿದ್ಯಾಲಯಗಳು, ಸಾಹಿತ್ಯ ಅಕಾಡೆಮಿಗಳು, ಸಾಹಿತ್ಯ ಸಮ್ಮೇಳನಗಳು ನಡೆಸುವ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ, ಲೇಖನ, ಕವನ ರಚಿಸುತ್ತಿದ್ದಾರೆ. ಉಪನ್ಯಾಸ ನೀಡಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆ ವಾಚಿಸಿದ್ದಾರೆ. ೨೦೦೧, ೨೦೧೧ ರಲ್ಲಿ ಜನಗಣತಿ ಕಾರ್ಯದಲ್ಲಿ ಬೆಳಗಾವಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಮಾಡಿದ್ದಲ್ಲದೇ ವೃತ್ತಿಯ ಜೊತೆಗೆ ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣ ಸಮೀತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಲವು ವರ್ಷಗಳ ಸೇವೆ ಹಾಗೂ ೨೦೧೫ ರ ಕರ್ನಾಟಕ ರಾಜ್ಯ ಶೈಕ್ಷಣಿಕ ಸಾಮಾಜಿಕ ಗಣತಿಯಲ್ಲಿ ಸವದತ್ತಿ ತಾಲೂಕಾ ಸಂಪನ್ಮೂಲ ವ್ಯಕ್ತಿಯಾಗಿಯೂ,ಕಾರ್ಯ ನಿರ್ವಹಿಸಿರುವರು.

ಕಳೆದ ೨೭ ವರ್ಷಗಳಿಂದ ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ನಾಡಿನ ನಾನಾ ಜಿಲ್ಲೆಗಳಲ್ಲಿ ೧೦೦೦ ಕ್ಕೂ ಹೆಚ್ಚು ಉಪನ್ಯಾಸ ನೀಡಿರುವರು. ಅಷ್ಟೇ ಅಲ್ಲ, ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳು ಯೋಜಿಸಿದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಕೂಡ ಮಾಡಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಮೈಸೂರ ದಸರಾ ಕವಿಗೋಷ್ಠಿ (೨೦೧೫)ಗಳಲ್ಲಿ ಭಾಗವಹಿಸಿ ಕವಿತಾ ವಾಚನ ಮಾಡಿರುವರು

ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿತ್ವ:

ವೃತ್ತಿಯ ಜೊತೆಜೊತೆಯಲ್ಲಿಯೇ ಸಾಹಿತ್ಯದ ಪರಿಚಾರಕರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಯಾಗಿರುವರಲ್ಲದೇ ಕಳೆದ ೧೫ ವರ್ಷಗಳಿಂದ ಸವದತ್ತಿ ತಾಲೂಕಾ ಸಾಂಸ್ಕೃತಿಕ ಸಂಪದದ ಅಧ್ಯಕ್ಷನಾಗಿ ಹಲವು ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆ, ಸವದತ್ತಿಯಲ್ಲಿ ಅಖಿಲ ಕರ್ನಾಟಕ ಜಾನಪದ ಯಕ್ಷಗಾನ ಸಮ್ಮೇಳನ ಆಯೋಜನೆ ಮಾಡಿದ್ದು ಇತಿಹಾಸ.

ಕಳೆದ ಎರಡು ಅವಧಿಗಳಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾ ಘಟಕ ಸವದತ್ತಿಯ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದು, ಸಧ್ಯಕ್ಕೆ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವರು ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಸವದತ್ತಿಯ ಕಾರ್ಯದರ್ಶಿಯಾಗಿ ಎರಡು ಅವಧಿ ಕಾರ್ಯನಿರ್ವಹಿಸಿರುವರು.

ಕುಟುಂಬ ವತ್ಸಲರು:

ಡಾ.ಯ.ಮಾ.ಯಾಕೊಳ್ಳಿಯವರ ಪತ್ನಿ ಡಾ.ಪ್ರೇಮಾ ಯಾಕೊಳ್ಳಿಯವರ ಕುರಿತು ಎರಡು ಮಾತು ಹೇಳಲೇಬೇಕು. ಸಾಧಕರಲ್ಲಿ ಎರಡು ವಿಧ. ಸದಾ ಸುದ್ದಿಯಲ್ಲಿರುವವರು ಒಂದು ವರ್ಗವಾದರೆ ತಮ್ಮ ಪಾಡಿಗೆ ತಾವು ಸಾಧನೆ ಮಾಡುತ್ತ , ತಾವು ಮಾಡುವ ಸಾಧನೆಗಿಂತ ಬದುಕು ಮುಖ್ಯ ಎಂದು ಭಾವಿಸುತ್ತ ಎಲೆ ಮರೆಯ ಕಾಯಿಯಂತೆ ಇರುವವರದು ಎರಡನೆಯ ವರ್ಗ , ಆ ಎರಡನೆಯ ವರ್ಗಕ್ಕೆ ಸೇರಿದವರು ಡಾ. ಪ್ರೇಮಾ ಯಾಕೋಳ್ಳಿ. ಉಪನ್ಯಾಸಕ ವೃತ್ತಿ, ಓದಿದ್ದು ಕನ್ನಡ ಎಂ.ಎ.ಪಿಎಚ್ ಡಿ , ಮನೆಯಲ್ಲಿ ಸಾಕಷ್ಟು ಸಾಹಿತ್ಯ ಪರಿಸರ , ಪತಿ ಬೆಳಿಗ್ಗೆದ್ದು ತನ್ನ ಕಾರ್ಯಕ್ಕೆ ಅಣಿಯಾಗತೊಡಗಿದರೆ ಅವರ ಬೆನ್ನೆಲುಬಾಗಿ ಪತ್ನಿ ತನ್ನ ಕಾರ್ಯ ಮಾಡುವಳು.ಅವರ ವಿದ್ಯೆಯನ್ನು ಮುಚ್ಚಿಡದ ಪತಿ ಅವರನ್ನೂ ಕೂಡ ಓದಿನತ್ತ ಅವಕಾಶ ಒದಗಿಸಿದರು.ಪತಿ ಪತ್ನಿ ಇಬ್ಬರೂ ಡಾಕ್ಟರೇಟ್ ಇದ್ದದ್ದು ಬಹುತೇಕ ಯಾಕೊಳ್ಳಿಯಂತವರ ಕುಟುಂಬದ ಸತಿಪತಿಯರಲ್ಲಿ ಮಾತ್ರ ಸಾಧ್ಯವೇನೋ.? ಅನಿಸುತ್ತದೆ.

ಸವದತ್ತಿ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕನ್ನಡ ಉಪನ್ಯಾಸಕಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರೇಮಾ ಯಾಕೊಳ್ಳಿಯವರು ಕವಯಿತ್ರಿ, ಸಂಶೋಧಕಿ, ಬರಹಗಾರ್ತಿ. ಅಲಲ್ಲಿ ಬಿಡಿಲೇಖನಗಳು, ಬಿಡಿಕವಿತೆಗಳನ್ನು ಪ್ರಕಟಿಸಿರುವ ಇವರು ತಮ್ಮ ಒಂದೆ ಒಂದು ಸಂಶೋಧನ ಮಹಾಪ್ರಬಂಧವನ್ನು ಪ್ರಕಟ ಮಾಡಿದ್ದಾರೆ. ಸವದತ್ತಿ ತಾಲೂಕಾ ಸಾಹಿತ್ಯ ಸಮ್ಮೇಳನ ,ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಇನ್ನೂ ಅನೇಕ ಕಡೆ ತಮ್ಮ ಕವಿತೆಗಳನ್ನು ವಾಚನ ಮಾಡಿದ್ದಾರೆ.

ಸಾಹಿತ್ಯ ರಚನೆ ಇವರಿಗೆ ಪೂರ್ಣ ಪ್ರಮಾಣದ ಕಾರ‍್ಯವಲ್ಲ. ಸುಮ್ಮನೆ ಸಮಯವಿದ್ದಾಗ ಪ್ರೀತಿಯಿಂದ ಬರೆಯುವ ಹವ್ಯಾಸ. ಎಲ್ಲದಕ್ಕಿಂತ ಮೊದಲು ತನ್ನ ಮನೆ, ತನ್ನ ನೌಕರಿ ಎಂದು ನಂಬುವ ಅವರು ಹೊರಗೆ ಬರುವದೇ ಕಡಿಮೆ. ವೇದಿಕೆ ಹತ್ತುವದು ಅನಿವರ‍್ಯವಾದಾಗ ಮಾತ್ರ ವೇದಿಕೆಯೇರುತ್ತಾರೆ.

ಸಾಹಿತ್ಯ ಪರಿಸರದ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಮಕ್ಕಳಿಗೂ ಕೂಡ ಉತ್ತಮ ವಿದ್ಯಾಭ್ಯಾಸವನ್ನು ಮಾಡಿಸಿದ ಪ್ರತಿಫಲ ಹಿರಿಯ ಮಗ ನೀರಜ್ ಈಗ ಎಂ.ಬಿ.ಬಿ.ಎಸ್ ಮುಗಿಸಿ ವೈದ್ಯನಾಗುವ ಕನಸು ಹೊತ್ತು ಮುಂದೆ ಎಂ.ಡಿ. ಮಾಡಲು ತಯಾರಿಯೊಂದಿಗೆ ತನ್ನ ವ್ಯಾಸಾಂಗಕ್ಕೆ ಮತ್ತೆ ಏನು ಅವಶ್ಯವೋ ಅದರ ಅರಸುವಿಕೆಯಲ್ಲಿ ಮೈಸೂರಿನಲ್ಲಿ ಇರುವನು. ಇನ್ನೊಬ್ಬ ಮಗ ಎಂ.ಟೆಕ್ ಎರಡನೇ ಸೆಮಿಸ್ಟರ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಓದುತ್ತಿದ್ದು.ಎರಡು ಮುತ್ತುಗಳೊಂದಿಗೆ ದಂಪತಿಯ ಸಖಿಗೀತ ಸಾಗಿರುವುದು.

ಈಗ ಯಾಕೊಳ್ಳಿಯವರಿಗೆ ೫೭ ವರ್ಷ. ಹಾಗೆಂದು ಅವರು ಮಾಡಬೇಕಾದ ಕೆಲಸ ಮುಗಿದಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅವರು ಇನ್ನೂ ಹೆಚ್ಚಿನ ಸಾಹಿತ್ಯ ಸಾದನೆ ಮಾಡಿ ಸವದತ್ತಿ ನಾಡಿಗೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ. ಡಾ.ಯಾಕೊಳ್ಳಿ ಯವರನ್ನು ಅಭಿನಂದಿಸಲು ಈ ಜಂಗಮವಾಣಿಗೆ ಕರೆ ಮಾಡಬಹುದು. ಮೊ- ೯೭೩೧೯೭೦೮೫೭


ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು

- Advertisement -

1 COMMENT

  1. ಡಾ.ಯಾಕೊಳ್ಳಿ ಗುರುಗಳ ಬಾಲ್ಯ,ಬದುಕು,ಸಂಸಾರ,ಸಾಧನೆಗಳನ್ನು ಬಹಳ ಚೆನ್ನಾಗಿ ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದೀರಿ ಸರ್ ಧನ್ಯವಾದಗಳು.

Comments are closed.

- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group