ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಶೀಘ್ರವಾಗಿ ನೀಡುವಂತೆ ಆಗ್ರಹಿಸಿ, ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಅ.7ರಂದು ತಾಲೂಕಾ ಮಟ್ಟದ ಬೃಹತ್ ಪಂಚಮಸಾಲಿ ಸಮಾಜದ ಸಮಾವೇಶವನ್ನು ಆಯೋಜಿಸುವ ಮೂಲಕ ಪಂಚಮಸಾಲಿಗಳ ಶಕ್ತಿ ಪ್ರದರ್ಶನದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನರು ಸೇರುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಆವರಣದ ರಂಗಮಂಟಪದಲ್ಲಿ ಆಯೋಜಿಸಲಾದ, ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಪಂಚ ಹಂತದ ಚಳವಳಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಮಸಾಲಿ ಸಂಘಟನೆಯ ಮೊದಲು ಹುಟ್ಟಿದ್ದು ಹಳ್ಳೂರ ಗ್ರಾಮದಲ್ಲಿ 72 ಇಸ್ವಿಯಲ್ಲಿ ಪಂಚಮಸಾಲಿ ದೈವದಮನೆ ಸ್ಥಾಪನೆಯಾಗಿದೆ ಎನ್ನವುದು ಒಂದು ವಿಶೇಷವಾದರೇ ಇದೊಂದು ಪವಿತ್ರವಾದ ಸ್ಥಳವಾಗಿರುವುದರಿಂದ ಮೊದಲು ಈ ಕಾರ್ಯಕ್ರಮವನ್ನು ಇದೇ ಗ್ರಾಮದಲ್ಲಿ ಉದ್ಘಾಟನೆ ಮಾಡುವ ಮೂಲಕ ಇಡೀ ಅರಭಾವಿ ಮತಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ 2ಎ ಮೀಸಲಾತಿ ಬಗ್ಗೆ ಅರಿವು ಮೂಡಿಸುವಂಥ ಕಾಯಕವನ್ನು ನಾವೆಲ್ಲರೂ ಒಗ್ಗಟ್ಟಾಗಿ ಮಾಡೋಣ ಎಂದರು.
ಸ್ವಾಭಿಮಾನದಿಂದ ಬದುಕಿ ಬ್ರಿಟೀಷರ ವಿರುದ್ದ ಹೋರಾಡಿದ ದೇಶದ ಮೊದಲ ಮಹಿಳೆ ನಮ್ಮ ಪಂಚಮಸಾಲಿ ಸಮಾಜದ ಕಿತ್ತೂರ ರಾಣಿ ಚೆನ್ನಮ್ಮ ಎಂಬುವುದು ನಮ್ಮಲರಿಗೂ ಹೆಮ್ಮೆಯ ಸಂಗತಿಯಾದರೇ ಚೆನ್ನಮ್ಮನ ಕಾಲದಿಂದಲೂ ನಮ್ಮ ಸಮಾಜವನ್ನು ತುಳಿಯವ ಮೂಲಕ ಪಂಚಮಸಾಲಿ ಸಮಾಜವನ್ನು ಕುಗ್ಗುವಂತೆ ಮಾಡುತ್ತಿದ್ದಾರೆ. ಆದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಕಲ್ಲೋಳಿ ಸಮಾವೇಶ ಮುಗಿದ ನಂತರ ಜಿಲ್ಲಾ ಮಟ್ಟದ ಸಮಾವೇಶವನ್ನು ಹುಕ್ಕೇರಿಯಲ್ಲಿ ಮಾಡಿ ನಂತರ ದಿನಗಳಲ್ಲಿ ಬೆಂಗಳೂರಿನ 25 ಲಕ್ಷಕ್ಕೂ ಅಧಿಕ ಜನರೊಂದಿಗೆ ಅಂತಿಮವಾದ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಮಾಜ ವಿಷಯ ಬಂದಾಗ ರಾಜಕೀಯ ಚಟುವಟಿಕೆಗಳನ್ನು ದೂರವಿಟ್ಟು ಸಮಾಜದ ಏಳಿಗೆಗಾಗಿ ಎಲ್ಲರೂ ಒಂದೇ ಎನ್ನುವ ಭಾವದಿಂದ ಹೋರಾಟ ಮಾಡಬೇಕಾಗುತ್ತದೆ. ಎಸ್ ಆರ್ ಕಾಶಪ್ಪನ್ನವರ ಹೋರಾಟ ಮಾಡುವ ಸಂದರ್ಭದಲ್ಲಿ ಸಹ ಸಮಾಜದ ಪರವಾಗಿ ಕೆಲಸಗಳನ್ನು ಮಾಡಿದ್ದೇನೆ ಹಾಗಾಗಿ ಇನ್ನು ಮುಂದೆಯೂ ಸಹ 2ಎ ಮೀಸಲಾತಿಗಾಗಿ ಶ್ರೀಗಳ ಜೊತೆಗೆ ನಿಂತು ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೋರಾಟ ಮಾಡಿ ಮೀಸಲಾತಿಯನ್ನು ಪಡೆದುಕೊಳ್ಳೋಣ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನಮ್ಮ ಪಂಚಮಸಾಲಿ ಸಮಾಜದ ಜನರನ್ನು ಒಂದುಗೂಡಿಸುವ ಕಾರ್ಯ ಹಾಗೂ ಸಮಾಜದ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಮಾಡುತ್ತಿರುವ ಶ್ರೀಗಳ ಕಾರ್ಯಕ್ಕೆ ನಾವೆಲ್ಲರು ಅವರೊಂದಿಗೆ ಕೈ ಜೋಡಿಸುವ ಮೂಲಕ ಮತ್ತಷ್ಟು ಅವರ ಕೈ ಬಲ ಪಡಿಸಬೇಕಾಗಿದ್ದು ಎಲ್ಲ ಪಂಚಮಸಾಲಿಗಳ ಜವಾಬ್ದಾರಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಆರ್ ಕೆ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಎಂದು ನಿಂಗಪ್ಪ ಪಿರೋಜಿ, ಬೆಳಗಾವಿ ಗ್ರಾಮೀಣ ಅಧ್ಯಕ್ಷ ರಾಮನಗೌಡ ಪಾಟೀಲ, ಸಂಕೇಶ್ವರದ ಬಸನಗೌಡ ಪಾಟೀಲ, ಹುಕ್ಕೇರಿ ತಾಲೂಕಾಧ್ಯಕ್ಷ ಗುಂಡು ಪಾಟೀಲ, ಮೂಡಲಗಿ ತಾಲೂಕಿನ ಯುವ ಘಟಕಾಧ್ಯಕ್ಷ ಸಂಗಮೇಶ ಕೌಲಜಗಿ, ಮೀಸಲಾತಿ ಹಕ್ಕೊತ್ತಾಯ ಸಮಿತಿಯ ಅಧ್ಯಕ್ಷ ಮಲ್ಲು ಗೋಡಿಗೌಡರ, ದೀಪಕ್ ಜುಂಜರವಾಡ, ಹಣಮಂತ ಕೊಂಗಾಲಿ, ಬಾಳೇಶ ಶಿವಾಪೂರ, ಅಶೋಕ ತೇರದಾಳ ಹಾಗೂ ಹಳ್ಳೂರ ಗ್ರಾಮದ ಪಂಚಮಸಾಲಿ ಸಮಾಜದ ಬಂಧುಗಳು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪಂಚಮಸಾಲಿಗಳು ಉಪಸ್ಥಿತರಿದ್ದರು.