ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವನ್ಯಜೀವಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ತಾಪಮಾನ ತುಂಬಾ ಹೆಚ್ಚಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.ಮಾನವನಿಗೆ ಕುಡಿಯುವ ನೀರಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರದ ವತಿಯಿಂದ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಮಾಡಲಾಗುತ್ತದೆ.ಆದರೆ ವನ್ಯಜೀವಿಗಳು, ಪಕ್ಷಿಗಳು ಕುಡಿವ ನೀರು ಸಿಗದೆ ಇರುವಾಗ ಯಾರ ಮುಂದೆ ಹೇಳಬಹುದು. ಅರಣ್ಯ ಇಲಾಖೆ ಕುಡಿಯುವ ನೀರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ..ಇದನ್ನು ಅರಿತ ಸ್ವಾಭಿಮಾನಿ ಗೆಳೆಯರ ಬಳಗದ ತಂಡ ವನ್ಯಜೀವಿಗಳಿಗೆ ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದಾರೆ. ಬೀದರ್ ಜಿಲ್ಲೆಯ ಹಲವು ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ ಶಹಾಪುರ ಅರಣ್ಯ ಪ್ರದೇಶ ಹಾಗೂ ಚಿಟ್ಟಾ ಕಾಯ್ದಿಟ್ಟ ಅರಣ್ಯ ಪ್ರದೇಶ ಮತ್ತು ನಿರ್ಣ ಅರಣ್ಯ ಪ್ರದೇಶದಲ್ಲಿ ನೀರಿನ ಕಾಂಕ್ರೀಟ್ ತೊಟ್ಟಿಗಳನ್ನು ನಿರ್ಮಾಣ ಮಾಡಿ ಪ್ರತಿದಿನ ನೀರು ತುಂಬುತ್ತಾರೆ.
ಬಿಸಿಲಿನ ಝಳಕ್ಕೆ ಸೋತುಹೋದ ವನ್ಯ ಜೀವಿಗಳಾದ ಜಿಂಕೆ, ಮಂಗಗಳು, ನವಿಲುಗಳು ಇದೆ ಹೊಂಡದಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತವೆ.
ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಹೊಂಡಗಳನ್ನು ನಿರ್ಮಿಸಿದ್ದಾರೆ. ಒಂದು ಹೊಂಡದಲ್ಲಿ 120 ಲೀ ನೀರು ಸಂಗ್ರಹವಾಗುತ್ತದೆ. ಈ ಗೆಳೆಯರ ಬಳಗದ ಕಾರ್ಯದಿಂದ ಸ್ಫೂರ್ತಿ ಪಡೆದಾದರೂ ಬಿಸಿಲಿನ ತಾಪಕ್ಕೆ ಬಸವಳಿದಿರುವ ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಜಿಲ್ಲಾಡಳಿತ ಹೆಚ್ಚಿನ ವ್ಯವಸ್ಥೆ ಮಾಡಬಹುದಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ