ಮೂಡಲಗಿ: ಶಿಕ್ಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಬೇಕಾದದ್ದು ಪುಸ್ತಕ ಕೃತಿಗಳ ಸಂಪಾದನೆ, ಪುಸ್ತಕಗಳ ಜ್ಞಾನವನ್ನು ಅರಿತವನು ಇವತ್ತು ಸಮಾಜದಲ್ಲಿ ಎಲ್ಲಾ ಜನರೊಂದಿಗೆ ಬೆರೆಯುತ್ತಾನೆ, ಆದರೆ ಇಂದಿನ ಯುವಕರು ಇಂತಹ ಸದುದ್ಧೇಶದಿಂದ ವಿಮುಖವಾಗುತಿರುವುದು ಕಳವಳಕಾರಿ ಸಂಗತಿ. ಸಾಹಿತಿ ದುರ್ಗಪ್ಪ ದಾಸಣ್ಣವರಂತಹ ಯುವ ಸಾಹಿತಿಗಳಿಗೆ ತಮ್ಮ ಅನುಭವವನ್ನು ಧಾರೆಯೆರೆದು ಅವರನ್ನು ಮುಂಚೂಣಿಗೆ ತಂದು ಯುವಕರಿಗೆ ಪ್ರೇರಣೆ ಆಗುವಂತೆ ಮಾಡಬೇಕು ಎಂದು ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಹೇಳಿದರು.
ಪಟ್ಟಣದ ಚೈತನ್ಯ ಸೊಸಾಯಿಟಿಯ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮೂಡಲಗಿ ಹಾಗೂ ಸೃಜನ ಪ್ರಕಾಶನ ಹೊಸಟ್ಟಿ ಇವುಗಳ ಸಹಯೋಗದಲ್ಲಿ ದುರ್ಗಪ್ಪ ದಾಸಣ್ಣವರ ಅವರು ರಚಿಸಿದ “ಕನಸು ಕ್ಯಾನ್ವಾಸಿನ ಮೇಲೆ” ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಸಹೃದಯಿಗಳಾದ ನಾವೆಲ್ಲರೂ ಕವಿಗಳ, ಸಾಹಿತಿಗಳ ಜೊತೆ ಮಧುರ ಬಾಂಧವ್ಯವನ್ನು ಹೊಂದಿ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಬದ್ಧರಾಗಬೇಕು. ಈ ನಿಟ್ಟಿನಲ್ಲಿ ಮೂಡಲಗಿ ಕಸಾಪ ಘಟಕವು ಬಹಳಷ್ಟು ಯುವಕರಿಗೆ ವೇದಿಕೆಯನ್ನು ನೀಡುತ್ತದೆ ಎಂದರು.
ಶಿಕ್ಷಣಾಧಿಕಾರಿ ರೇವತಿ ಮಠದ ಮಾತನಾಡಿ, ದುರ್ಗಪ್ಪ ದಾಸಣ್ಣವರ ಇಂದಿನ ಯುವ ಪೀಳಿಗೆ ಆದರ್ಶವೆನಿಸಿದ್ದಾರೆ, ಇನ್ನೂ ಸಾಕಷ್ಟು ಯುವಕರಿಂದ ಮೂಡಲಗಿ ತಾಲೂಕಿನಲ್ಲಿ ಸಾಕಷ್ಟು ಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.
ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಅಧ್ಯಕ್ಷತೆ ವಹಿಸಿ “ದುರ್ಗಪ್ಪ ಅವರ ಕವಿತೆಗಳು ಜೀವಪರ ಪ್ರಕೃತಿಪರವಾಗಿದ್ದು ಕ್ಯಾನ್ವಾಸಿನ ತುಂಬಾ ಮುಗ್ದತೆಯಿಂದ ಅನಾವರಣಗೊಂಡಿವೆ ಕವಿಗಳಿಗೆ ಆ ಕಾಳಜಿ ಅವಶ್ಯಕ” ಎಂದರು.
ಕೃತಿ ಪರಿಚಯ ಮಾಡಿದ ಸಾಹಿತಿ, ಸಂಶೋಧಕ ಡಾ.ಮಹಾದೇವ ಜಿಡ್ಡಿಮನಿ ಅವರು “ಪ್ರಕೃತಿ, ಸ್ತ್ರೀ ಸಂವೇದನೆ, ಮನುಷ್ಯ ಪ್ರೇಮಗಳ ವಾಸ್ತವತೆಯನ್ನು, ಗ್ರಾಮೀಣ ಭಾಷಾ ಸೊಗಡಿನೊಂದಿಗೆ ಕಟ್ಟಿಕೊಡುವಲ್ಲಿ ಕವಿತೆಗಳು ಯಶಸ್ವಿಯಾಗಿವೆ” ಎಂದರು
ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿ, “ಅಂತರಂಗದ ನೋವು, ವಿಚಾರವನ್ನು ಹೊರಹೊಮ್ಮಿಸುವ ದಲಿತ ಸಂವೇದನೆ ಕಾವ್ಯದಲ್ಲಿ ಅಲ್ಲಲ್ಲಿ ವಿಭಿನ್ನವಾಗಿ ಕವಿತೆಗಳಲ್ಲಿ ಒಡಮೂಡಿದೆ” ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಚೈತನ್ಯ ಸೊಸಾಯಿಟಿಯ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ, ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಸಾಹಿತಿ ಮತ್ತು ಕವನ ಸಂಕಲನಕಾರ ದುರ್ಗಪ್ಪ ದಾಸಣ್ಣವರ, ಸಾಹಿತಿಗಳಾದ ಬಾಲಶೇಖರ ಬಂದಿ, ಶಿವಾನಂದ ಬೆಳಕೂಡ, ಪ್ರಕಾಶ ಕೋಟಿನತೋಟ, ನಿವೃತ್ತ ಪ್ರಾಚಾರ್ಯ ಎಸ್.ಎಂ.ಕಮದಾಳ, ಬಿ.ವಾಯ್.ಶಿವಾಪೂರ, ಎ.ಎಚ್.ಒಂಟಗೋಡಿ, ಬಿ.ಆರ್.ತರಕಾರ ಹಾಗೂ ಕಸಾಪ ಪದಾಧಿಕಾರಿಗಳು ಮತ್ತು ಹೊಸಟ್ಟಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಮಾರುತಿ ದಾಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಸುರೇಶ ಲಂಕೆಪ್ಪನವರ ಸ್ವಾಗತಿಸಿದರು. ವಾಯ್ ಬಿ ಕಳ್ಳಿಗುದ್ದಿ ನಿರೂಪಿಸಿದರು. ಪ್ರಕಾಶ ಮೇತ್ರಿ ವಂದಿಸಿದರು.