ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಈಗ ನಾಯಕರು ಪರಸ್ಪರ ಹಿಂಬಾಲಿಸುವ ರಾಜಕೀಯ ಜೋರಾಗಿದೆ. ಸಚಿವರ ತವರೂರು ಔರಾದ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವರ ಕಾರು ಹಿಂಬಾಲಿಸಿದ ಘಟನೆ ನಡೆದಿದೆ.ಇನ್ನೊಂದು ಕಡೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭಾಲ್ಕಿಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಾರು ಹಿಂಬಾಲಿಸಿದರು ಈ ಎಲ್ಲಾ ಬೆಳವಣಿಗೆ ನೋಡಿದರೆ ವಿಧಾನ ಪರಿಷತ್ ಚುನಾವಣೆ ಅಖಾಡ ತೀರಾ ವೈಯಕ್ತಿಕ ಮಟ್ಟದಲ್ಲಿ ಬಿರುಸುಗೊಳ್ಳುವ ಸಕಲ ಸೂಚನೆಗಳು ಕಂಡುಬರುತ್ತಿವೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಬಿಜೆಪಿ- ಕಾಂಗ್ರೆಸ್ ನಾಯಕರ ಹೈಡ್ರಾಮಾ ಆರಂಭವಾಗಿದೆ. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರ ಕಾರನ್ನು ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಬೆಳಿಗ್ಗೆಯಿಂದ ಹಿಂಬಾಲಿಸುತ್ತಿದ್ದಾರೆ !
ಸಚಿವ ಪ್ರಭು ಚವ್ಹಾಣ ಅವರ ತಂಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತಂಡ ಒಂದೇ ದಾರಿಯಲ್ಲಿ ಸಂಚರಿಸುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ದಾಬಕಾ, ಹೊಕ್ರಾಣ, ಭಂಡಾರ ಕುಮಠಾ, ಎಕಂಬಾ ಭಾಗದಲ್ಲಿ ತಿರುಗಾಡುತ್ತಿದ್ದಾರೆ.
ಸಚಿವರನ್ನು ಮತಗಟ್ಟೆಗಳಲ್ಲಿ ಹೋಗದಂತೆ ಅಭ್ಯರ್ಥಿ ಕಾವಲು ಮಾಡುತ್ತಿದ್ದಾರೆ ಎನ್ನಲಾಗಿದ್ದು ಸಚಿವ ಪ್ರಭು ಚವ್ಹಾಣ ಕೂಡ ಶಾಂತಿಯುತ ಮತದಾನಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ಈ ಬೆಳಿಗ್ಗೆ ಬಿಜೆಪಿಯ ಪ್ರಕಾಶ ಖಂಡ್ರೆಯವರು ತಮ್ಮ ಸಹೋದರ ಕಾಂಗ್ರೆಸ್ ನ ಈಶ್ವರ ಖಂಡ್ರೆಯವರನ್ನು ಬೆನ್ನತ್ತಿದ್ದು ಎರಡೂ ಪಕ್ಷಗಳಲ್ಲಿ ತೀವ್ರ ಪೈಪೋಟಿ ಶುರುವಾಗಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ