ಆಹಾರ ಪದಾರ್ಥಗಳಲ್ಲಿ ಸತ್ವ ಹೆಚ್ಚಿಸಲು ಸಾವಯವ ಕೃಷಿಗೆ ಮಹತ್ವ ನೀಡಿ- ಸಂಸದ ಈರಣ್ಣ ಕಡಾಡಿ

Must Read

ಮೂಡಲಗಿ: ಹೆಚ್ಚು ಇಳುವರಿ ಪಡೆಯಲು ರೈತರು ಸತತವಾಗಿ ರಸಗೊಬ್ಬರ ಬಳಕೆ ಮಾಡುವುದರಿಂದ ನಿಧಾನವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಭೂಮಿ ಬರಡಾಗುವ ಅಪಾಯವಿದೆ ಹಾಗೂ ಆಹಾರ ಪದಾರ್ಥಗಳಲ್ಲಿ ಕೂಡ ಸತ್ವ ಕಳೆದುಕೊಳ್ಳುತ್ತಿರುವುದು ಆಂತಕಕಾರಿ ವಿಷಯ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಮಲ್ಲಿಕಾರ್ಜುನ ಖಾನಗೌಡ್ರ ತೋಟದಲ್ಲಿ ಬುಧವಾರ ಸೆ 15 ರಂದು ತೋಟಗಾರಿಕೆ ಇಲಾಖೆ, ಬರ್ಡ್ಸ ಸಂಸ್ಥೆ ನಾಗನೂರ, ಎಪಿಓಎಫ್ ಆರ್ಗ್ಯಾನಿಕ ಸರ್ಟಿಫಿಕೇಷನ್ಸ್ ಪುಣೆ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಪಿ.ಜಿ.ಎಸ್. ಗುಂಪಿನ ರೈತರಿಗೆ ಸಾವಯವ ಗೊಬ್ಬರ ವಿತರಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ಭಾರತೀಯ ರೈತ ಸಮುದಾಯ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಪೂರ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿ ಬಂದಿರುವ ಸಾವಯವ ಕೃಷಿಯತ್ತ ಗಮನಹರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ ಎಂದು ಹೇಳಿದರು.

ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಂಡು ಉತ್ತಮ ಬೇಸಾಯ ಮಾಡಬಹುದು. ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ, ಕೊಟ್ಟಿಗೆ ಗೊಬ್ಬರಗಳನ್ನು ಬೇಸಾಯಕ್ಕೆ ಬಳಸುವುದರಿಂದ ಪೌಷ್ಠಿಕ ಆಹಾರೋತ್ಪನಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ರೈತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಗುವ ಸೌಲಭ್ಯ ಪಟ್ಟಣ ಪಂಚಾಯತದಲ್ಲಿ ಸಿಗುವುದಿಲ್ಲ ಎಂದು ರೈತರು ಸಂಸದರ ಗಮನಕ್ಕೆ ತಂದಾಗ ಸಂಸದ ಈರಣ್ಣ ಕಡಾಡಿ ಅವರು ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರುತ್ತೇನೆ, ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತೇನೆ ಎಂದು ಭರವಸೆ ನೀಡಿದ ಅವರು ಪ್ರತಿಯೊಬ್ಬ ರೈತರು ಸಾವಯವ ಕೃಷಿಗೆ ಮಹತ್ವ ನೀಡಬೇಕು.

ಮುಂಬರುವ ದಿನಗಳಲ್ಲಿ ಸರ್ಕಾರಗಳು ಕೃಷಿಗೆ ಹೆಚ್ಚನ ಮಹತ್ವ ನೀಡುತ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರೇ ದೇಶದ ಬೆನ್ನಲುಬು ಎಂದು ತಿಳಿದು ರೈತರ ಆದಾಯ ದ್ವಿಗುಣ ಮಾಡಲು ಕೃಷಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ರೈತರು ಸ್ವಲ್ಪ ಭೂಮಿಯನ್ನು ಸಾವಯವ ಕೃಷಿಗೆ ಮೀಸಲಿಡಬೇಕೆಂದು ರೈತರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಪಶು ಪಾಲನೆ ಇಲಾಖೆ ವತಿಯಿಂದ ದನ ಕರುಗಳಿಗೆ ಜಂತು ನಿವಾರಕ ಔಷಧಿಗಳನ್ನು ರೈತರಿಗೆ ವಿತರಿಸಲಾಯಿತು.

ಗೋಕಾಕ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಜನಮಟ್ಟಿ, ಅರಭಾವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಂಕರ ಹಳ್ಳದಮನಿ, ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಪೂರ್ಣಿಮಾ ಓಡ್ರಾಳೆ, ಯೋಜನಾ ಸಂಯೋಜಕ ಬಸವರಾಜ ಗುಡದವರ, ಪಶು ವೈದ್ಯಾಧಿಕಾರಿ ಡಾ. ಸುರೇಶ ತಪಶೆಟ್ಟಿ, ವಿಶ್ವನಾಥ ಕಬ್ಬೂರ, ಮಲ್ಲಿಕಾರ್ಜುನ ಖಾನಗೌಡರ, ಅಡಿವೆಪ್ಪ ಕುರಬೇಟ, ಅಜ್ಜಯ್ಯಸ್ವಾಮಿ ಹಿರೇಮಠ, ಹಣಮಂತ ಪಾಟೀಲ, ರಾಜು ದಬಾಡಿ, ಮಹಾಂತೇಶ ಪಾಟೀಲ, ಧರೆಪ್ಪ ವ್ಯಾಪಾರಿ ಸೇರಿದಂತೆ ಅನೇಕ ಸಾವಯವ ಕೃಷಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest News

ಪೂ ಚಂ ತೇ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ : ಡಿ. ಕೆ.ಶಿವಕುಮಾರ

ಬೆಂಗಳೂರು ನಗರದ ಲಾಲ್ ಬಾಗ್ ನಲ್ಲಿ ಜನವರಿ 15 ರಿಂದ 26ರ ವರೆಗೆ ಏರ್ಪಡಿಸಲಾಗಿರುವ ಫಲ ಪುಷ್ಪ ಪ್ರದರ್ಶನವನ್ನು ಡಿ. ಕೆ. ಶಿವಕುಮಾರ್ ಅವರು ಬುಧವಾರ...

More Articles Like This

error: Content is protected !!
Join WhatsApp Group