ಸಿಂದಗಿ– ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾದ ರಕ್ತ ಸಂಗ್ರಹ ಘಟಕವನ್ನು ಇಲ್ಲಿ ಸ್ಥಾಪಿಸಿ ಜನತೆಗೆ ಅನುಕೂಲ ಮಾಡಿಕೊಟ್ಟ ಪಟ್ಟಣದ ಮನಗೂಳಿ ಆಸ್ಪತ್ರೆಯ ವೈದ್ಯರು ಮತ್ತು ಇದರ ನಿರ್ವಹಣೆ ಕಾರ್ಯ ಮಾಡುತ್ತಿರುವ ಗಂಗಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲ್ಯಾಘನೀಯ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಮನಗೂಳಿ ಆಸ್ಪತ್ರೆ, ವಿಜಯಪುರದ ಗಂಗಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಮನಗೂಳಿ ಆಸ್ಪತ್ರೆಯಲ್ಲಿ ಸ್ಥಾಪಿತಲಾಗಿರುವ ರಕ್ತ ಸಂಗ್ರಹ ಘಟಕವನ್ನು ಉದ್ಘಾಟಿಸಿ ಮಾತನಾಡಿ, ರಕ್ತ ಹೀನತೆಯಿಂದ ಈ ಭಾಗದ ಅನೇಕ ಮಹಿಳೆಯರು ಅಸುನೀಗುತ್ತಿದ್ದಾರೆ. ಈ ಭಾಗದ ಜನರು ವಿಜಯಪುರ, ಸೋಲಾಪೂರ, ಕಲಬುರಗಿಗಳಂತಹ ಮಹಾನಗರಗಳಿಂದ ರಕ್ತ ತಂದು ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನಗೂಳಿ ಆಸ್ಪತ್ರೆಯ ಡಾ.ಮನಗೂಳಿ ದಂಪತಿಗಳು ಅದಕ್ಕೆ ಪರಿಹಾರವನ್ನು ಒದಗಿಸಿದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಿಂದಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್.ಪಾಟೀಲ ಗಣಿಹಾರ ಮಾತನಾಡಿ, ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜಾತಿ ಮನೆ ಮಾಡಿದೆ ಆದರೆ ರಕ್ತ ದಾನಿಗಳಲ್ಲಿ ಹಾಗೂ ರಕ್ತ ಸಂಗ್ರಹ ಘಟಕದಲ್ಲಿ ಜಾತಿ ಇಲ್ಲ. ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯ ನಮ್ಮದಾಗಬೇಕು ಎಂದು ಸಲಹೆ ನೀಡಿದರು.
ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಿ.ಎನ್.ಪಾಟೀಲ ಮಾತನಾಡಿ, ಇದು ಅತಿ ಅವಶ್ಯಕವಾಗಿದೆ. ನಮ್ಮ ನಿತ್ಯ ಬದುಕಿನ ವೈಖರಿ ಹಾಗೂ ಆಹಾರ ಪದ್ದತಿಯಿಂದ ನಿತ್ಯ ಅನೇಕ ರೋಗಗಳಿಗೆ ರಕ್ತದ ಕೊರತೆ ಕಂಡು ಬರುತ್ತಲಿದೆ. ಇದರಿಂದ ಸಾವು ನೋವುಗಳ ಸಂಖ್ಯೆಯು ಹೆಚ್ಚಾಗುತ್ತಲಿದೆ ಪ್ರಸ್ತುತ ಅವಶ್ಯವಿರುವ ಕಾರ್ಯ ಮಾಡಿದ್ದು ಯೋಗ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನಗೂಳಿ ಆಸ್ಪತ್ರೆಯ ಡಾ ಸಂಧ್ಯಾ ಮನಗೂಳಿ ಮಾತನಾಡಿ, ಗರ್ಭಿಣಿ ಸ್ತ್ರೀಯರಿಗೆ, ರಸ್ತೆ ಅಪಘಾತದಲ್ಲಿ ಗಾಯಾಳುಗಳು ಹಾಗೂ ಮುಟ್ಟು ಬಂದ ಸಂಧರ್ಭ ಸೇರಿದಂತೆ ಮತ್ತಿತರರಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ಈ ಕಾರ್ಯವನ್ನು ಆಯೋಜಿಸಿಕೊಂಡಿದ್ದೇವೆ ಇದರ ಲಾಭವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.
ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಅಬು ಶಿಕ್ಷಣ ಸಂಸ್ಥೆಯ ಎಮ್.ಎ.ಖತೀಬ, ಸಂಗಮೇಶ ಛಾಯಾಗೋಳ, ಶರಣಪ್ಪ ವಾರದ, ಡಾ.ಶಾಂತವೀರ ಮನಗೂಳಿ, ಡಾ ಮಶ್ಯಾಕವಲಿ ವಲ್ಲಿಬಾಯಿ, ಗಂಗಾ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕ ಬಾಬುರಾವ ನಾಯಕ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಡಾ. ಸಂಜೀವ ಅವಟಿ, ಡಾ.ಆರತಿ ಚಿತವಾಡಗಿ, ಡಾ.ಎಸ್.ಎಲ್.ಪೂಜಾರಿ, ಡಾ.ಅಶ್ವಿನಿ ಆಲೂರ, ಡಾ.ಚೇತನ ಕುಲಕರ್ಣಿ, ಪೀರಾ ಮಗರಬಿ, ಡಾ.ಸತೀಶ ರಾಠೋಡ, ಡಾ ಅಶೋಕ ರಾಠೋಡ ಸೇರಿದಂತೆ ಮನಗೂಳಿ ಆರ್ಯವೇದಿಕ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರೊ. ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಡಾ.ಅಶ್ವಿನಿ ಆಲೂರ ಸ್ವಾಗತಿಸಿದರು, ಡಾ.ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು, ಡಾ. ಶಾಂತವೀರ ಮನಗೂಳಿ ವಂದಿಸಿದರು.