spot_img
spot_img

ಈ ನಾಡಿನ ಪ್ರತಿಯೊಬ್ಬರೂ ಪ್ರೀತಿಯಿಂದ ಕನ್ನಡ ಉಳಿಸಿ, ಬೆಳೆಸಬೇಕು – ಡಾ.ಪೋತರಾಜ

Must Read

- Advertisement -

ಮೂಡಲಗಿ: ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಿನ್ನೆಲೆಯಿಂದ ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ, ಕನ್ನಡ ನಾಡಿನಲ್ಲಿ 20 ಸಾವಿರಕ್ಕಿಂತಲೂ ಅಧಿಕ ಶಾಸನಗಳು ದೊರೆತಿರುವುದು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹಾಗೂ ಪ್ರಾಚಿನ ಪರಂಪರೆಯನ್ನು ಎತ್ತಿತೋರುತ್ತದೆ ಎಂದು ಖಾನಟ್ಟಿಯ ಡಾ: ಮಹಾದೇವ ಪೋತರಾಜ ಹೇಳಿದರು.

ತಾಲೂಕಿನ ಅರಭಾವಿಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ರಾಜ್ಯೋತ್ಸವ ನಿಮಿತ್ತವಾಗಿ ಶುಕ್ರವಾರದಂದು ವಸ್ತು ಪ್ರದರ್ಶನ, ಚರ್ಚಾ ಸ್ಫರ್ಧೆ, ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಯುವ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡಿನ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪ್ರೀತಿಯಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇದೆ, ಹಲ್ಮಿಡಿ ಶಾಸನ, ಬಾದಾಮಿ ಶಾಸನ, ಶ್ರವಣಬೆಳಗೊಳ ಶಾಸನ ಹಾಗೂ ಕನ್ನಡದ ಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗ, ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ಮತ್ತು10ನೇ ಶತಮಾನದ ಪಂಪ, ರನ್ನ, ಪೊನ್ನ, ಜನ್ನರ ಚಂಪೂ ಸಾಹಿತ್ಯವು ಹಾಗೂ 12ನೇ ಶತಮಾನದ ವಚನ ಸಾಹಿತ್ಯ, 16ನೇ ಶತಮಾನದ ದಾಸ ಸಾಹಿತ್ಯ, ನವೋದಯ, ನವ್ಯ, ದಲಿತ, ಬಂಡಾಯ ಹಾಗೂ ಆಧುನಿಕ ಸಾಹಿತ್ಯವು ಕನ್ನಡ ನಾಡಿನ ಪ್ರಾಚೀನತೆಯನ್ನು, ಆಧುನಿಕತೆಯನ್ನು, ಸೊಬಗನ್ನು, ಹಿರಿಮೆ ಗರಿಮೆಗಳನ್ನು ಬಿತ್ತರಿಸುವಲ್ಲಿ ಸಾಕ್ಷಿಗಳಾಗಿವೆ. ಇಲ್ಲಿನ ಜನಪದ ಸಂಸ್ಕೃತಿಯು ಕನ್ನಡ ನಾಡು ಹಾಗೂ ಭಾಷೆಯ ಪ್ರಮುಖ ಮೌಲ್ಯವಾಗಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕನ್ನಡ ಭಾಷೆಯ ಮಹತ್ವ ಹಾಗೂ ಕರ್ನಾಟಕದ ಇತಿಹಾಸವನ್ನು ಅಧ್ಯಯನ ಮಾಡಿ ಮೈಗೂಡಿಸಿಕೊಳ್ಳಬೇಕು, ನಾಡಿನಲ್ಲಿರುವ ಆಚಾರ-ವಿಚಾರ, ಸಂಸ್ಕೃತಿ ಅರಿತು ಭಾವೈಕ್ಯತೆಯಿಂದ ಬದುಕಬೇಕು, ಭೌಗೋಳಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪುರಾತನ ಕಾಲದಿಂದಲೂ ಕನ್ನಡ ನಾಡು ತನ್ನದೆ ಆದ ಸ್ಥಾನಮಾನ ಪಡೆದುಕೊಂಡಿದೆ ಎಂದ ಅವರು, ಕನ್ನಡ ಭಾಷೆಯು ಜಗತ್ತಿನಾದ್ಯಂತ ಪ್ರಸಾರ ಹೊಂದಿ ಮುಖ್ಯವಾಹಿನಿಗಳಲ್ಲಿ ಒಂದಾಗುವಲ್ಲಿ ಯುವಕರು ನಿರಂತರವಾಗಿ ಶ್ರಮಿಸಬೇಕೆಂದರು.

- Advertisement -

ಸಾಹಿತಿ ಹಾಗೂ ಪತ್ರಕರ್ತ ಮಲ್ಲು ಬೊಳನವರ ಮಾತನಾಡಿ, ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಬಿತ್ತಿದ ಆದಿಕವಿ, ಪಂಪ, ರನ್ನ, ಪೊನ್ನ ಜನ್ನರಂತಹ ಕವಿಗಳ ಕಾವ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ವಚನಕಾರರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಬಿಕೆ, ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮರಂತಹ ಕವಿಗಳ ಕಾವ್ಯ ಜಗತ್ತು ಕನ್ನಡ ನಾಡನ್ನು ಶತಮಾನಗಳಿಂದ ಬೆಳಗುತ್ತಲೇ ಬಂದಿದೆ. ನಮ್ಮ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ದಿನನಿತ್ಯ ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಬಳಕೆ ಕಣ್ಮರೆಯಾಗುತ್ತಿದ್ದು, ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಚ್ಚು ಒಲವು ತೋರಿ ಸಾಹಿತ್ಯ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕೆಂದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣವನ್ನು ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತಿ ಕಾರ್ಯಕ್ರಮದಲ್ಲಿ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಕನ್ನಡ ನಾಡು-ನುಡಿಗಾಗಿ ದುಡಿಯುತ್ತಿರುವ ಯುವಕರಿಗೆ ಸತ್ಕರಿಸಿ ಗೌರವಿಸಿ, ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪಾಂಶುಪಾಲರಾದ ಉಮೇಶ ಬಡಕುಂದ್ರಿ, ಪತ್ರಕರ್ತ ಕೃಷ್ಣಾ ಗಿರೆನ್ನವರ, ಉಪನ್ಯಾಸಕರಾದ ರಾಮು ಸವದಿ, ಗುರಲಿಂಗಪ್ಪ ಹೊಸಮನಿ, ರಾಮಸಾಗರ, ವಿಜಯ ಜುಟ್ಟದವರ, ಸಂತೋಷ ಕೋಟಗಿ, ಪುಷ್ಪಾ ಕಡಕೋಳ, ಪೃಥ್ವಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group