ಒಂದು ವ್ಯಂಗ್ಯ ಚಿತ್ರವಿದೆ. ಮಂಜುಲ್ ಎನ್ನುವವರು ಬರೆದಿದ್ದು. ಅದರಲ್ಲಿ ಜನರು ಓಡುತ್ತಿರುವದನ್ನು ಕಂಡ ಒಬ್ಬ ಕೇಳುತ್ತಾನೆ. ಅನ್ ಲಾಕ್ ಆದನಂತರ ಇವರೆಲ್ಲ ಎಲ್ಲಿಗೆ ಧಾವಿಸುತ್ತಿದ್ದಾರೆ ? ಎಂದು.
ಅದಕ್ಕೆ ಆಕೆ ಉತ್ತರಿಸುತ್ತಾಳೆ: ಬಹುಶಃ ಮೂರನೇ ಅಲೆಯ ಕಡೆಗೆ….
ಲಾಕ್ ಡೌನ್ ತೆಗೆದುಹಾಕಿದ ನಂತರ ಜನರ ಧಾವಂತ ನೋಡಿದರೆ ಈ ಮಾತು ಸರಿ ಅನ್ನಿಸುತ್ತಿದೆ. ಲಾಕ್ ಡೌನ್ ಇದ್ದಾಗಲೇ ಸರಿಯಾಗಿ ಮಾಸ್ಕ್ ಹಾಕದೆ, ಪೊಲೀಸರ ಹೆದರಿಕೆಯೂ ಇರದೆ ಓಡಾಡುತ್ತಿದ್ದವರು ಲಾಕ್ ಡೌನ್ ತೆಗೆದುಹಾಕಿದರೆ ಕೇಳುತ್ತಾರಾ ?
ಒಮ್ಮೆಲೇ ರಸ್ತೆಗೆ ಧಾವಿಸಿಬಿಟ್ಟಿದ್ದಾರೆ. ಮೇಲಿಂದ ಮೇಲೆ ಕೊರೋನಾ ಮೂರನೇ ಅಲೆಯ ಬಗ್ಗೆ ತಜ್ಞರು, ಸರ್ಕಾರಗಳು ಎಚ್ಚರಿಸುತ್ತಿದ್ದರೂ ಯಾರಿಗೂ ಲಕ್ಷ್ಯವಿಲ್ಲ. ಅನಗತ್ಯವಾಗಿ ಮಾರುಕಟ್ಟೆಯಲ್ಲಿ ತಿರುಗಾಡಿದ್ದೇ ತಿರುಗಾಡಿದ್ದು. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಂತೂ ಮೊದಲೇ ಇಲ್ಲ.
ಎಲ್ಲೆಂದರಲ್ಲಿ ಉಗುಳುವುದು, ಗಲೀಜು ಮಾಡುವುದು ನಡೆದೇ ಇದೆ.
ಕೊರೋನಾ ಮೂರನೇ ಅಲೆ ಮಕ್ಕಳಿಗೆ ವಕ್ಕರಿಸುತ್ತದೆ ಎಂದು ಹೇಳುತ್ತಿದ್ದರೂ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲದಂತೆ ಜನರು ವರ್ತಿಸುವುದನ್ನು ನೋಡಿದರೆ ಭಾರತಕ್ಕೆ ಈ ಕೊರೋನಾ ಕಾಟ ಸದ್ಯದಲ್ಲಿ ಬಿಡುವುದಿಲ್ಲ ಅನಿಸುತ್ತಿದೆ.
ಸ್ವತಃ ತಮ್ಮದೇ ಕಾಳಜಿ ಕೂಡ ಇಲ್ಲದಂತೆ ವರ್ತಿಸುತ್ತಿರುವ ಜನರಿಂದ ಕೊರೋನಾ ಹೋಗುವುದೇ ಇಲ್ಲವೆನಿಸುತ್ತಿದೆ. ಈಗ ಸ್ವಲ್ಪ ಕಡಿಮೆಯಾದಂತೆ ಕಂಡಿರುವ ಕೊರೋನಾ ಮತ್ತೆ ವಕ್ಕರಿಸಿದರೆ ಆಶ್ಚರ್ಯವಿಲ್ಲ ಆಮೇಲೆ ಏನು ಮಾಡುವುದು? ಇದ್ದೇ ಇದೆಯಲ್ಲ. ಮೋದಿಯನ್ನ ಹಿಗ್ಗಾಮುಗ್ಗಾ ತೆಗಳುವುದು. ಯಡಿಯೂರಪ್ಪನ ಝಾಡಿಸುವುದು. ನಿಮಗೆ ಸರ್ಕಾರ ನಡೆಸಲು ಆಗಲ್ಲ ರಾಜೀನಾಮೆ ಕೊಡಿ ಅನ್ನುವುದು !!