ಮಾಜಿ ಸಚಿವರ ವಿರುದ್ದ ಗಂಭೀರ ಆರೋಪ ಮಾಡಿದ ಗಂಗಾಧರ್ ರಾಥೋಡ್ ಕುಟುಂಬಸ್ಥರು.
ಬೀದರ – 26 ಎಕರೆ ಜಮೀನು ಖರೀದಿಸಿ ಹಣದ ಬದಲಾಗಿ ಮಗಳನ್ನು ಸೊಸೆ ಮಾಡಿಕೊಳ್ಳುವದಾಗಿ ಹೇಳಿ ಈಗ ಹಣವೂ ಇಲ್ಲ ಸಂಬಂಧವೂ ಇಲ್ಲ ಎಂಬಂತಾಗಿ ಹೈರಾಣಾದ ರಾಥೋಡ್ ಕುಟುಂಬವು ಮಾಜಿ ಸಚಿವರ ಮನೆಯೆದುರು ಧರಣಿ ಮಾಡುವ ಬೆದರಿಕೆ ಒಡ್ಡಿರುವ ಪ್ರಕರಣ ಜರುಗಿದೆ.
ಸಹೋದರ ಮಾರುತಿಯ, ಪತ್ನಿ ಹೆಸರಲ್ಲಿ ಜಮೀನು ಖರೀದಿಸಿದ್ದ ಮಾಜಿ ಸಚಿವ ಪ್ರಭು ಚೌಹಾಣ್ ಜಮೀನಿನ ಹಣದ ಬದಲು ನೆಂಟಸ್ತಿಕೆ ಬೆಳೆಸೋದಾಗಿ ಹೇಳಿದ್ದು ಪುತ್ರ ಪ್ರತೀಕ ಜೊತೆ ಔರಾದ್ ತಾಲೂಕಿನ ಕಿರಗುಣವಾಡಿ ಗಂಗಾಧರ್ ರಾಥೋಡ್ ಅವರ ಮಗಳನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರೆನ್ನಲಾಗಿದೆ. ಮದುವೆ ವಿಷಯವಾಗಿ ಏಪ್ರಿಲ್ 23, 2023 ರಂದು ಪೂಜಾ ಜೊತೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.
ಆದರೆ ಡಿ.25 ರಂದು ಬೇರೆ ಯುವತಿ ಜೊತೆ ಮದುವೆ ನಿಶ್ಚಿತಾರ್ಥಕ್ಕೆ ಸಿದ್ದತೆ ಮಾಡಿಕೊಂಡಿರುವ ಹಿನ್ನೆಲೆ ಅಳಲು ತೋಡಿಕೊಂಡಿರುವ ರಾಥೋಡ ಕುಟುಂಬಸ್ಥರು, ಮದುವೆ ಮಾಡಿಕೊಡಿ, ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಪ್ರಭು ಚವ್ಹಾಣ ಜಮೀನಿಗೆ ಹಣವನ್ನೂ ನೀಡಿಲ್ಲ, ಮದುವೆಯನ್ನೂ ಮಾಡಿಕೊಳ್ಳುತ್ತಿಲ್ಲ ಎಂದು ಯುವತಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ.
ಘಟನೆಯ ಸಂಕ್ಷಿಪ್ತ ವಿವರ ಇಲ್ಲಿದೆ:
ಔರಾದ ತಾಲೂಕಿನ ಕಿರುಗುನವಾಡಿ ಗ್ರಾಮದ ನಿವಾಸಿ ಘಟುರ ತಂದೆ ಲಸ್ಕರ್ ಹಾಗೂ ನಮ್ಮ ತಾಯಂದಿರಾದ ಸುಭದ್ರಾಬಾಯಿ ಗಂಡ ಘಟುರ ಹಾಗೂ ಭಾಗಿರಥಿಬಾಯಿ ಗಂಡ ಘಟುರ ಇವರೆಲ್ಲರೂ ಅನಕ್ಷರಸ್ಥರಾಗಿದ್ದು, ನಮ್ಮ ಗಮನಕ್ಕೆ ತರದೆ ಔರಾದನ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ ಅವರು ವಂಚಿಸಿದ್ದಾರೆ ಎಂದು ಗಂಗಾಧರ ರಾಠೋಡ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ತಂದೆ ಹಾಗೂ ತಾಯಂದಿರ ಹೆಬ್ಬೆರಳು ಗುರುತು ಪಡೆದು ಸರ್ವೆ ನಂ. 125 ರಲ್ಲಿ 20 ಎಕರೆ ಜಮೀನನ್ನು ಹಾಗೂ ನಮ್ಮ ತಾಯಂದಿರಾದ ಸುಭದ್ರಾಬಾಯಿ ಹಾಗೂ ಭಾಗಿರಥಿಬಾಯಿ ಅವರ ಹೆಸರಿನಲ್ಲಿರುವ ಸರ್ವೆ ನಂ. 126 ರಲ್ಲಿರುವ ತಲಾ ಮೂರು ಎಕರೆ 8 ಗುಂಟೆ ಜಮೀನನ್ನು ಕಬಳಿಸಿ ಹಣ ಕೊಡುವುದಾಗಿ ನಂಬಿಸಿದ್ದಾರೆ. ಹಣವನ್ನು ಕೇಳಿದರೆ ನಿನ್ನ ಮಗಳನ್ನು ನನ್ನ ಮಗನಿಗೆ ಕೊಟ್ಟು ಮದುವೆ ಮಾಡಿ ಸಂಬಂಧ ಬೆಳಸುವುದಾಗಿ ಹೇಳಿದರು. ಈಗ ಹಣವನ್ನೂ ಕೊಡದೆ ..ನನ್ನ ಮಗಳನ್ನೂ ಮದುವೆ ಮಾಡಿ ಕೊಳ್ಳದೆ ಇನ್ನೊಂದು ಕಡೆ ಮಗನಿಗೆ ಸಂಬಂಧ ನೋಡಿ ಮದುವೆ ಮಾಡಲು ಸಿದ್ಧರಾಗಿದ್ದಾರೆ ಶಾಸಕ ಪ್ರಭು ಚವ್ಹಾಣ ಎಂದು ಆರೋಪ ಮಾಡಿದ್ದಾರೆ.
ಹಣ ಕೇಳಿದರೆ ನಮ್ಮ ಪುತ್ರಿಯನ್ನು ತಮ್ಮ ಮಗ ಪ್ರತಿಕ ಚವ್ಹಾಣ ಜೊತೆ ಸಂಬಂಧ ಕುದುರಿಸುವುದಾಗಿ ಹೇಳಿ ಇಂದು ಮಹಾರಾಷ್ಟ್ರದ ದೇಗಲೂರು ತಾಲೂಕಿನ ಹಣೆಗಾಂವ ಗ್ರಾಮದ ಸಂಬಂಧ ಬೆಳೆಸಲು ಮುಂದಾಗುವ ಮೂಲಕ ಎಂದರೆ ಡಿ, 25 ರಂದು ಬೇರೆ ಸಂಬಂಧ ಬೆಳೆಸಲು ಮುಂದಾಗುವ ಮೂಲಕ ವಂಚಿಸಿದ್ದಾರೆ. ಹಣ ಕೊಡುವ ಹಾಗೂ ಸಂಬಂಧ ಬೆಸೆಯುವ ನೆಪದಲ್ಲಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಗಂಗಾಧರ ಆಪಾದಿಸಿದರು.
ದಿನಾಂಕ: 09-10-2020 ರಂದು ಸ. ನಂ. 126ರಲ್ಲಿ ಭಾಗಿರಥಿಬಾಯಿ ಗಂಡ ಘಟುರ ಹಾಗೂ ಸುಭದ್ರಾಬಾಯಿ ಗಂಡ ಘಟುರ ಇವರಿಂದ ತಲಾ 3 ಎಕರೆ 8 ಗುಂಟೆ ಅಂದರೆ ಒಟ್ಟು 6 ಎಕರೆ 16 ಗುಂಟೆ ಜಮೀನು ಲಪಟಾಯಿಸಿರುತ್ತಾರೆ. ಮತ್ತು 25-11-2020 ರಂದು ಘಟುರ ತಂದೆ ಲಸ್ಕರ್ ಇವರಿಂದ ಸ.ನಂ 125ರಲ್ಲಿ 20 ಎಕರೆ ಜಮೀನು ಮೋಸದಿಂದ ಕಬಳಿಸಲಾಗಿದೆ. ಈ ಎಲ್ಲಾ (26 ಎಕರೆ 16 ಗುಂಟೆ) ಜಮೀನಿನ ಸರಾಸರಿ ಮೊತ್ತ ಒಂದು ಕೋಟಿ ಐವತ್ತು ಲಕ್ಷ ಆಗಿದ್ದು, ಒಂದು ನಯಾಪೈಸೆ ನೀಡದೆ ಪ್ರಭು ಚವ್ಹಾಣ ನಮಗೆ ಮೋಸ ಎಸಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಂಬಂಧದ ನೆಪವೊಡ್ಡಿ ಜಮೀನಿನ ಹಣವೂ ಕೊಡದೇ ಸಂಬಂಧವೂ ಕುದುರಿಸದೆ ಮೋಸ ಮಾಡಿರುವುದನ್ನು ಪ್ರಶ್ನಿಸಿ ಬೀದರ ಮಹಿಳಾ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಈಶಾನ್ಯ ವಲಯ ಐಜಿಪಿ ಕಲಬುರಗಿ ಅವರಿಗೆ, ಮಾನ್ಯ ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಅವರಿಗೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಈ ಕುರಿತು ದೂರು ಸಲ್ಲಿಸಲಾಗಿದೆ. ನಮ್ಮೊಂದಿಗೆ ಸಂಬಂಧ ಬೆಳೆಸುವುದಾಗಿ ನಂಬಿಸಿ ಈಗ ಬೇರೆ ಸಂಬಂಧ ವರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕು. ಆಕ್ರಮವಾಗಿ ಕಬಳಿಸಿದ ಜಮೀನು ಪುನಃ ನಮಗೆ ನೀಡಿ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ನಮ್ಮ ಇಡೀ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುವುದಾಗಿ ಗಂಗಾಧರ ರಾಠೋಡ ಎಚ್ಚರಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ