ಮೂಡಲಗಿ – ಆಯುರ್ವೇದದ ಹೆಸರಿನಲ್ಲಿ ನಕಲಿ ಹಾಗೂ ದಿನಾಂಕ ಮೀರಿದ ಔಷಧಗಳನ್ನಿಟ್ಟುಕೊಂಡು ಆಸ್ಪತ್ರೆ ನಡೆಸುತ್ತಿರುವ ಡಾ. ಶಂಕರ ಕೊಪ್ಪದ ಹಾಗೂ ಡಾ. ಎ ಪಿ ಕೂಡಲಗಿ ಎಂಬುವವರ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.
ರಾಯಬಾಗ ತಾಲೂಕಿನ ಗಡಿ ಗ್ರಾಮವಾದ ಕಪ್ಪಲಗುದ್ದಿ ಹದ್ದಿಯ, ಹಳ್ಳೂರ ಕ್ರಾಸ್ ನಲ್ಲಿ ರಾಯಲಿಂಗೇಶ್ವರ ಆಸ್ಪತ್ರೆ ಎಂಬ ಹೆಸರಿನಲ್ಲಿ ದವಾಖಾನೆ ತೆರೆಯಲಾಗಿದ್ದು ಇಲ್ಲಿ ಎಲ್ಲ ರೀತಿಯ ರೋಗಗಳಿಗೆ ಔಷಧ ಕೊಡಲಾಗುವುದು ಎಂಬ ಪ್ರಚಾರದೊಂದಿಗೆ ನಕಲಿ ಹಾಗೂ ದಿನಾಂಕ ಮೀರಿದ ಔಷಧಗಳನ್ನು ರೋಗಿಗಳಿಗೆ ಕೊಡಲಾಗುತ್ತಿದೆ.
ಈ ಬಗ್ಗೆ ಪತ್ರಿಕೆಯು ಸ್ಥಳಕ್ಕೆ ಭೇಟಿ ನೀಡಿದಾಗ ಡಾ. ಕೊಪ್ಪದ ಅವರು ಭೇಟಿಯಾಗಿದ್ದು ಅವರ ಶಿಕ್ಷಣ ಬಿಎಎಮ್ಎಸ್ ಆಗಿದ್ದಾಗಿ ಹೇಳಿದರೂ ತಮ್ಮ ಸರ್ಟಿಫಿಕೇಟ್ ಅನ್ನು ದವಾಖಾನೆಯಲ್ಲಿ ಪ್ರದರ್ಶಿಸಿರಲಿಲ್ಲ. ಡಾ. ಕೂಡಲಗಿಯವರದು ಜಿಎನ್ಎಮ್ ಬಿಎಸ್ಸಿ, ನರ್ಸಿಂಗ್ ಆಗಿದ್ದು ಇವರು ಕೂಡ ವೈದ್ಯರಾಗಿ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ.
ದವಾಖಾನೆಯಲ್ಲಿ ಇನ್ನೊಂದು ಸರ್ಟಿಫಿಕೇಟ್ ನೇತು ಹಾಕಲಾಗಿದ್ದು ಡಾ. ಬಸವರಾಜ ಚ. ಕೊಣ್ಣೂರ ಎಂಬುವವರದು, ಇನ್ನೊಂದು ಸರ್ಟಿಫಿಕೇಟ್ ಮಸುಕು ಮಸುಕಾಗಿದೆ ಆದರೆ ಈ ವೈದ್ಯರು ಯಾರೂ ಕಾಣಲಿಲ್ಲ.
ಒಟ್ಟು ನಾಲ್ಕೂ ಜನ ವೈದ್ಯರೆನ್ನಿಸಿಕೊಂಡವರು ಒಳಗೆ ಕುಳಿತರೆ ತುಂಬಿ ಹೋಗುವಷ್ಟು ಜಾಗದಲ್ಲಿ ಕಾಕಡೆ ಅಮೃತ ಚಹಾ ಅಂಗಡಿಯ ಹಿಂಬದಿಯಲ್ಲಿ ತೆರೆಯಲಾದ ಈ ಆಸ್ಪತ್ರೆಯ ಶೆಲ್ಫ್ ಗಳೆಲ್ಲ ಧೂಳಿನಿಂದ ತುಂಬಿದ್ದವು, ಆಸ್ಪತ್ರೆಯ ಒಂದೇ ಒಂದು ಕಾಟ್ ಕೆಳಗೆ ಸೋಡಾ ಬಾಟಲ್ ಗಳು ಚೂಡಾ ಪಾಕೀಟುಗಳು ಕಂಡುಬಂದವು. ಹರ್ಬಲ್ ಲೈಫ್ ಎಂಬ ಕಂಪನಿಯ ಕೆಲವು ಔಷಧಗಳು ಎಕ್ಸ್ ಪೈರಿ ಡೇಟ್ ಮೀರಿದ್ದವು.
ಡಾ. ಕೊಪ್ಪದ ಅವರು ಗೋಕಾಕ ತಾಲೂಕಿನ ತಾಲೂಕಾ ಆರೋಗ್ಯಾಧಿಕಾರಿ ಡಾ. ಕೊಪ್ಪದ ಅವರ ಸಹೋದರ ಸಂಬಂಧಿಯೆಂದು ಹೇಳಿಕೊಂಡರು ಆದರೆ ಟಿಎಚ್ಓ ಕೊಪ್ಪದ ಅವರು ಇದನ್ನು ನಿರಾಕರಿಸಿದರು.
ಈ ನಕಲಿ ಆಸ್ಪತ್ರೆ ಹಾಗೂ ನಕಲಿ ವೈದ್ಯರ ಕುರಿತು ರಾಯಬಾಗ ತಾಲೂಕಾ ಆರೋಗ್ಯಾಧಿಕಾರಿಗಳನ್ನು ಕೇಳಿದಾಗ ಸದರಿ ಆಸ್ಪತ್ರೆಯ ಬಗ್ಗೆ ವಿಚಾರಣೆ ಮಾಡಿ, ವೈದ್ಯರಿಗೆ ನೋಟೀಸು ನೀಡಿ ಯೋಗ್ಯ ಕ್ರಮ ಜರುಗಿಸುವುದಾಗಿ ಹೇಳಿದರು. ಟ್ರೀಟ್ ಮೆಂಟ್ ಹೆಸರಿನಲ್ಲಿ ನಕಲಿ ಔಷಧ ಕೊಡುತ್ತ ಜನರ ಜೀವದ ಜೊತೆ ಚೆಲ್ಲಾಟವಾಡುವ ಇಂಥ ವೈದ್ಯರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿದೆ.

