ಬೀದರ – ಕಾಂಗ್ರೆಸ್ ನವರು ಕುಟುಂಬ ಒಡೆಯುವ ಕೆಲಸ ಮಾಡುತ್ತಾರೆ ಎಂದೆಲ್ಲ ಸಚಿವ ಭಗವಂತ ಖೂಬಾ ಅವರು ನನ್ನ ಹಾಗೂ ರಾಜಶೇಖರ ಪಾಟೀಲ ವಿರುದ್ಧ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ಬಾಲಿಶತನದಿಂದ ಕೂಡಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರುು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪ್ರಕಾಶ ಖಂಡ್ರೆ ಆಯ್ಕೆಯಾದಾಗ ಈಶ್ವರ ಖಂಡ್ರೆಯವರು ಬೆಳಿಗ್ಗೆ ಆರಕ್ಕೆ ಫೋನ್ ಮಾಡಿ ಅಭಿನಂದಿಸುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆಯನ್ನು ಸಚಿವ ಖೂಬಾ ನೀಡುತ್ತಾರೆ ಎಂದು ಆರೋಪಿಸಿದರು.
ಸುಳ್ಳು ಹೇಳುವುದು ನಮ್ಮ ರಕ್ತದಲ್ಲಿಯೇ ಬಂದಿಲ್ಲ.ಕುಟುಂಬ ನಾವು ಒಡೆಯುತ್ತಿಲ್ಲ ಬಿಜೆಪಿಯವರು ಒಡೆಯುತ್ತಿದ್ದಾರೆ. ದೇಶ ಒಡೆಯುತ್ತಿದ್ದಾರೆ. ಇಂಥವರು ಕಾಂಗ್ರೆಸ್ ನವರು ಕುಟುಂಬ ಒಡೆಯುತ್ತಾರೆ ಎಂದು ಹೇಳಿದ್ದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಾಗಿದೆ ಎಂದರು.
ಬೀದರ ಭಾಲ್ಕಿ ರಸ್ತೆ ಆರಂಭವಾಗಿ ಐದು ವರ್ಷಗಳಾದವು. ಹೆದ್ದಾರಿಯ ಕಳಪೆ ಕಾಮಗಾರಿಯಾಗಿದೆ. ಅದನ್ನು ರಿಪೇರಿ ಮಾಡುವ ಯೋಗ್ಯತೆ ಇಲ್ಲ. ನೌಬಾದ ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋದರೆ ಸೊಂಟ ಮುರಿಯುತ್ತದೆ. ಗರ್ಭಿಣಿ ಹೋದರೆ ಹೆರಿಗೆಯಾಗುತ್ತದೆ. ಬೀದರ ಜಿಲ್ಲೆಗೆ ಉತ್ತರ ಕೊಡಿ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಸೋಲಿನ ಭಯದಿಂದ ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸುಳ್ಳು ಹೇಳುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬೀದರನಲ್ಲಿ ಸಚಿವ ಭಗವಂತ ಖೂಬಾ ಹಾಗೂ ಈಶ್ವರ ಖಂಡ್ರೆ ಅವರ ಮಧ್ಯೆ ವಾಗ್ಯುದ್ಧ ಜೋರಾಗಿದ್ದು ಬರುಬರುತ್ತ ಉದ್ರಿಕ್ತ ರೂಪ ತಳೆಯುತ್ತಿದೆ. ಇದು ಇನ್ನೂ ಎಲ್ಲಿಗೆ ಮುಟ್ಟಬಹುದು ಎಂಬುದನ್ನು ಕಾಲವೇ ಹೇಳಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ