ಮೂಡಲಗಿ: ಪ್ರಾಚೀನ ಕಾಲದಿಂದಲೂ ನಮ್ಮ ನಾಡಿನ ದೇಶದ ಸಂಸ್ಕೃತಿ ಸಂಸ್ಕಾರಗಳಲ್ಲದೇ ಹಬ್ಬ ಹರಿದಿನಗಳು ಆಚರಣೆಗಳೂ ಕೂಡ ನಮ್ಮ ನೈಸರ್ಗಿಕ ಬದಲಾವಣೆಗಳಿಗೆ ತಕ್ಕಂತೆ ನಿರ್ಧರಿತವಾಗಿವೆ ಎಂದು ಪ್ರಧಾನ ಗುರು ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯುಗಾದಿ ಆಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇವು ಬೆಲ್ಲ ವಿತರಿಸಿ ಮಾತನಾಡಿ, ನಮ್ಮ ಪೂರ್ವಜರಿಗೆ ಪ್ರಕೃತಿ ವಿಸ್ಮಯ ವಿಜ್ಞಾನ ವೈಜ್ಞಾನಿಕತೆ ಬಗ್ಗೆ ಆಗಲೇ ತಿಳಿದುಕೊಂಡಿದ್ದರು. ಅದರ ಅಧಾರದ ಮೇಲೆಯೇ ಆಹಾರ ವಿಹಾರ ಸಂಪ್ರದಾಯ ಹಬ್ಬ ಹರಿದಿನಗಳ ಆಚರಣೆ ಆರೋಗ್ಯ ಎಲ್ಲವನ್ನೂ ವಿಜ್ಞಾನ, ಪ್ರಕೃತಿ, ಅಧ್ಯಾತ್ಮದೊಂದಿಗೆ ಮೇಳೈಸಿಕೊಂಡು ತಮ್ಮದೇ ಆದ ಪದ್ದತಿಯೊಂದಿಗೆ ಬದುಕನ್ನು ಜೀವಿಸುತ್ತಾ ಆರೋಗ್ಯವಾಗಿದ್ದರು. ಈ ನಮ್ಮ ಸಂಸ್ಕೃತಿ ಹಬ್ಬಗಳ ಹಿನ್ನೆಲೆ ಆಚರಣೆಯ ಪದ್ಧತಿ ಎಲ್ಲವುಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಹೊಸ ವರ್ಷವೆಂದರೆ ನಮಗೆ ಯುಗಾದಿ. ಆದ ಕಾರಣ ಇವತ್ತು ಎಲ್ಲ ವಿದ್ಯಾರ್ಥಿಗಳಿಗೆ ಬೇವು ಬೆಲ್ಲ ಸಿಹಿ ತಿಂಡಿಯನ್ನು ವಿತರಿಸುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಸಹ ಶಿಕ್ಷಕ ಮಹಾದೇವ ಗೋಮಾಡಿ ಮಾತನಾಡಿ, ಭಾರತಿಯ ಸಂಸ್ಕೃತಿಯಲ್ಲಿ ಎಲ್ಲಾ ಹಬ್ಬಗಳು ವಿಶೇಷ ಸ್ಥಾನ ಹೊಂದಿವೆ. ಪ್ರತಿಯೊಂದು ಹಬ್ಬವು ಪೌರಾಣಿಕ, ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿದ್ದು ಜನರ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಯುಗಾದಿ ಹಬ್ಬವನ್ನು ಹಿಂದೂ ಸಂಸ್ಕೃತಿಯ ಹೊಸ ವರ್ಷದ ಪ್ರಾರಂಭದ ಹಬ್ಬ ಎಂದು ಕರೆಯುತ್ತಾರೆ. ಚೈತ್ರ ಮಾಸದ ಪ್ರಾರಂಭ ಚಿಗುರೆಲೆಯ ಸಸ್ಯಗಳು ಸೂರ್ಯನ ಬಿರು ಬಿಸಿಲು ಇವು ಯುಗಾದಿ ಪ್ರಾರಂಭದ ಸಂಕೇತಗಳಾಗಿವೆ. ಬೇವು ಬೆಲ್ಲ ಸಿಹಿಕಹಿಯ ಸಂಕೇತಗಳಾಗಿವೆ. ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವದರ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬೇವು-ಬೆಲ್ಲ ವಿತರಿಸಿ ಮಕ್ಕಳಿಗೆ ಯುಗಾದಿ ಹಬ್ಬದ ಮಹತ್ವ ತಿಳಿಸಿ ಸಿಹಿ ಊಟ ಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಜ್ಯೋತಿ ಉಪ್ಪಾರ, ಶಂಕರ ಲಮಾಣಿ, ಕಿರಣ ಭಜಂತ್ರಿ, ರೂಪಾ ಗದಾಡಿ, ಶಿವಲೀಲಾ ಹಣಮನ್ನವರ, ರೇಖಾ ಗದಾಡಿ, ಖಾತೂನ ನದಾಫ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.