ವಾರಾಣಸಿ (ಉ.ಪ್ರ.) : ಶಿವನ ಸೃಷ್ಟಿಯ ಪ್ರಕೃತಿಯೊಳಗಿನ ಕಲ್ಲು, ಮಣ್ಣು, ಉಸುಕು, ನೀರು ಬಳಸಿಯೇ ಮನುಷ್ಯ ತನ್ನ ವಾಸಕ್ಕೆಂದು ಮನೆ-ಮಠಗಳನ್ನು ನಿರ್ಮಿಸುತ್ತಾನೆ. ಅವು ಭಗವಂತನ ಕೃಪೆ ಎನ್ನುವದನ್ನು ಮರೆತು ಎಲ್ಲವೂ ತನ್ನದೆಂದು ಹೇಳಿಕೊಳ್ಳುತ್ತಾನೆ. ಇಲ್ಲಿ ಸೃಷ್ಟಿ ಪರಮಾತ್ಮನದಾದರೂ ಅಲ್ಲಿರುವ ವ್ಯಾಮೋಹ ಜೀವಾತ್ಮನದಾಗಿರುವುದರಿಂದ ಅಂತಿಮವಾಗಿ ಯಾವುದೋ ನೆಲೆಯಲ್ಲಿ ದುಃಖಿತನಾಗುತ್ತಾನೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ಅವರು ಉತ್ತರಪ್ರದೇಶದ ವಾರಾಣಸಿ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ಶನಿವಾರ ೬ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿ ಮಾತನಾಡುತ್ತಿದ್ದರು. ಮನುಷ್ಯ ಸಾಮಾನ್ಯವಾಗಿ ಮನೆ, ಮಠ, ಮಡದಿ, ಮಕ್ಕಳನ್ನೇ ತನ್ನ ಸಂಸಾರವೆಂದು ತಿಳಿದುಕೊಂಡಿರುತ್ತಾನೆ. ಆದರೆ ಅವು ಯಾವವೂ ಅವನದಾಗಿ ಇರುವದಿಲ್ಲ. ಅದೆಲ್ಲವೂ ಕೇವಲ ವ್ಯಾಮೋಹದ ಭ್ರಮೆ ಮಾತ್ರ. ಯಾವ ವಸ್ತುವಿನ ಮೇಲೆ ನನ್ನದೆಂಬ ಭಾವನೆ ಇರುತ್ತದೆಯೋ ಅದು ಹೆಚ್ಚು ದುಃಖವನ್ನೇ ಕೊಡುತ್ತದೆ ಎಂದರು.
ನೀರಿನಲ್ಲಿರುವ ಕಮಲದಂತೆ, ಕೆಸರಿನಲ್ಲಿರುವ ಕುಂಬಾರ ಹುಳದಂತೆ ಸಂಸಾರದಲ್ಲಿದ್ದ ವಿವೇಕಿಯು ಸಂಸಾರದ ವ್ಯಾಮೋಹವನ್ನು ಅಂಟಿಸಿಕೊಳ್ಳದೆ ಎಲ್ಲವೂ ಭಗವತ್ ಸೃಷ್ಟಿಯೇ ಆಗಿದೆ ಎಂಬ ಭಕ್ತಿಯ ಮುಕ್ತ ಭಾವ ಬದ್ಧತೆಯನ್ನು ಹೊಂದಿದಾಗ ಮಾತ್ರ ಶಿವ-ಶಕ್ತಿಯರ ಕೃಪಾಕಾರುಣ್ಯದೊಂದಿಗೆ ಸಾಕ್ಷಾತ್ಕಾರ ಸಂಪಾದನೆ ಸಾಧ್ಯವಾಗುತ್ತದೆ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕುಂಕುಮಾರ್ಚನೆ : ಶರನ್ನವರಾತ್ರಿಯ ಸಂದರ್ಭದಲ್ಲಿ ಕಾಶಿ ಜ್ಞಾನಪೀಠದಲ್ಲಿರುವ ಶ್ರೀಚಕ್ರಸಹಿತ ಆದಿಶಕ್ತಿ ಮಾತೆಗೆ ಲಲಿತಾ ಸಹಸ್ರನಾಮ ಪಠಣಪೂರ್ವಕ ವಿಶೇಷ ಕುಂಕುಮಾರ್ಚನೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಂಡಿದ್ದರು.
ವರದಿ: ಗುರುಮೂರ್ತಿ ಯರಗಂಬಳಿಮಠ (ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕೆ ಜೀವನ ಶಿಕ್ಷಣ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ), ಶ್ರೀಶಾಂತೇಶ್ವರನಗರ, ಅಮ್ಮಿನಬಾವಿ(ತಾ.ಧಾರವಾಡ) ಮೊ. ೯೯೪೫೮೦೧೪೨೨

