ಬೀದರ – ವಿಪರೀತ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ಮನನೊಂದ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಯಲ್ಲಿ ಮನೆಯ ಯಜಮಾನ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ತಾಯಿ ಹಾಗೂ ಒಂದು ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಶಿವಮೂರ್ತಿ (೪೫), ಮಕ್ಕಳಾದ ರಿತಿಕ್ (೪), ಶ್ರೀಶಾಂತ (೮) ಹಾಗೂ ರಾಕೇಶ (ಏಳು ತಿಂಗಳು ) ದಾರುಣ ಸಾವಿಗೆ ಈಡಾದವರು. ರಮಾಬಾಯಿ (೪೨) ಹಾಗೂ ಶ್ರೀಕಾಂತ (೭) ಇಬ್ಬರನ್ನೂ ಜನತೆ ಬದುಕಿಸಿದ್ದಾರೆ.
ಕಾರಂಜಾ ಎಡದಂಡೆ ಕಾಲುವೆಗೆ ಮಕ್ಕಳ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡ ಆರು ಜನರ ಪೈಕಿ ತಂದೆ ಹಾಗೂ ಪುಟ್ಟ ಮಗು ಸೇರಿ ಮೂರು ಮಕ್ಕಳು ನಾಲೆಯಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಆದರೆ ತಾಯಿ ಹಾಗೂ ಇನ್ನೊಬ್ಬ ಮಗನ ರಕ್ಷಣೆ ಮಾಡಿದ ಸ್ಥಳೀಯರು ದಡಕ್ಕೆ ತಂದಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರು ಗ್ರಾಮದ ನಾಲೆಯಲ್ಲಿ ನಡೆದಿದೆ.
ಬೀದರ್ ನಗರದ ಮೈಲೂರಿನಲ್ಲಿ ಈ ಕುಟುಂಬ ವಾಸಿಸುತ್ತಿತ್ತು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ.
ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಸರ್ಕಾರ ಜನಪರವಾಗಬೇಕಾಗಿದೆ
ಖಾಸಗಿ ಲೇವಾದೇವಿಯವರಿಂದ ಜನರ ರಕ್ಷಣೆ ಮಾಡುತ್ತೇವೆ ಎಂಬ ಬೊಗಳೆಗಳನ್ನು ಸರ್ಕಾರ ಬಿಡುತ್ತಲೇ ಇದ್ದರೂ ಇತ್ತ ಸಾಲದ ಸುಳಿಗೆ ಸಿಲುಕಿ ಸಾಯುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇತ್ತ ಉಚಿತ ಗ್ಯಾರಂಟಿಗಳ ಪರದೆಯ ಹಿಂದೆ ಎಲ್ಲ ದರಗಳನ್ನು ಏರಿಸಿರುವ ಸರ್ಕಾರದ ನೀತಿಯಿಂದಾಗಿ ಜನತೆಯ ಬದುಕೇ ಕಂಗಾಲಾಗಿದ್ದು ಸಾಲ ಸೋಲ ಮಾಡದೇ ಬದುಕಲು ಸಾಧ್ಯವಿಲ್ಲದಂತಾಗಿದೆ. ಸಾಲ ಮಾಡಿದರೆ ಬಡ್ಡಿ ಚಕ್ರಬಡ್ಡಿ ಎಂಬ ಸುಳಿಯಲ್ಲಿ ಸಿಲುಕಿ ಸಾವು ಅನಿವಾರ್ಯವಾಗುತ್ತಿದೆ. ಸರ್ಕಾರದ ನೀತಿಗಳು ಜನಪರವಾಗುವ ಕಾಲ ಎಂದು ಬರುತ್ತದೆಯೋ ಕಾದು ನೋಡಬೇಕು ಆದರೆ ಅಷ್ಟರೊಳಗೆ ಎಷ್ಟು ಬಲಿ ಕಾದಿವೆಯೇನೋ…
ವರದಿ : ನಂದಕುಮಾರ ಕರಂಜೆ, ಬೀದರ

