ಬೆಂಗಳೂರಿನ ಅಮೃತನಗರ ಮುಖ್ಯರಸ್ತೆಯ ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್ ನಲ್ಲಿ ಕರ್ನಾಟಕ ಸರ್ವೋದಯ ಮಂಡಲದಿಂದ ಆಯೋಜಿಸಿದ್ದ ‘ಗಾಂಧೀಜಿ ಮತ್ತು ಶಿಕ್ಷಣ’ ವಿಶೇಷ ಉಪನ್ಯಾಸದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಸಿ.ವಿ.ತಿರುಮಲ ರಾವ್ ಮಾತನಾಡುತ್ತ ಸರ್ವರ ಹಿತಕ್ಕಾಗಿ ಆದರ್ಶಗಳನ್ನು ಗಾಂಧೀಜಿ ನಮ್ಮ ಮುಂದೆ ಇಟ್ಟಿದ್ದರು, ಈ ಆದರ್ಶಗಳು ಆದರ್ಶಗಳಾಗಿಯೇ ಉಳಿಯಬೇಕೆ ? ಇಂದು ನಾವು ಈ ಕುರಿತು ಚಿಂತಿಸಬೇಕು, ಗಾಂಧೀಜಿ ಶಿಕ್ಷಕರನ್ನು ,ವಿದ್ಯಾರ್ಥಿಗಳನ್ನು ಕುರಿತು ಹೇಳಿದ ನುಡಿಗಳು ಎಲ್ಲರೂ ಎಲ್ಲ ಕಾಲದಲ್ಲಿಯೂ ಮನನ ಮಾಡುವುದಲ್ಲದೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸ್ವಾತಂತ್ರ್ಯ ಅಮೃತಮಹೋತ್ಸವ ಈ ಕಾಲಘಟ್ಟದಲ್ಲಿ ಗಾಂಧಿ ಚಿಂತನೆಗಳನ್ನು ಯುವ ಜನತೆಗೆ ಪ್ರಚಾರಪಡಿಸುವ ಉದ್ದೇಶದಿಂದ ನಗರದಾದ್ಯಂತ ಈ ಉಪನ್ಯಾಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ಸಮಾರಂಭವನ್ನು ಸಿಲಿಕಾನ್ ಸಿಟಿ ಎಜುಕೇಷನಲ್ ಅಕಾಡೆಮಿಯ ಕಾರ್ಯದರ್ಶಿ ಎಲ್.ರವಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಪ್ರಾಂಶುಪಾಲೆ ಕೀರ್ತಿ ಬದಿಯಡ್ಕ, ಕರ್ನಾಟಕ ಸರ್ವೋದಯ ಮಂಡಲ ಖಜಾಂಚಿ ವಿರೂಪಾಕ್ಷ ಟಿ ಹುಡೇದ್ ಉಪಸ್ಥಿತರಿದ್ದರು.