ಮೂಡಲಗಿ – ಸ್ಥಳೀಯ ಶ್ರೀ ಶಿವಬೋಧರಂಗನ ಜಾತ್ರೆಯಲ್ಲಿ ಕರೆಂಟು ಹೋದ ಸಮಯದಲ್ಲಿ ಕೈಚಳಕ ತೋರಿದ ಬಾಲಕಿಯೊಬ್ಬಳು ಭಕ್ತರೊಬ್ಬರ ಚಿನ್ನದ ಸರವನ್ನು ಎಗರಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ.
ಕೆಲವು ಮಹಿಳೆಯರಿಗೆ ಸೇರಿದ ಬಂಗಾರದ ಸರ, ಬೋರಮಾಳ, ಮಾಂಗಲ್ಯ ಸರಗಳನ್ನು ಕದ್ದ ಬಾಲಕಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದು ಬಾಲಕಿ ಮಹಾರಾಷ್ಟ್ರದ ಅಂಬಾಲಾದವಳು ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಪಿಎಸ್ಐ ರಾಜು ಪೂಜೇರಿ ಮಾಹಿತಿ ನೀಡಿದರು.
ಚಿನ್ನದ ಸರ ಕಳೆದುಕೊಂಡ ಮಾಲೀಕರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಸೂಕ್ತ ವಿಚಾರಣೆ ನಡೆಸಿದ ನಂತರ ಮಾಲೀಕರಿಗೆ ವಸ್ತುವನ್ನು ಒಪ್ಪಿಸಲಾಗುವುದು ಎಂದರು. ಆದರೆ ಕಳ್ಳತನ ಪ್ರಕರಣದಲ್ಲಿ ಕೇವಲ ಒಬ್ಬಳೇ ಬಾಲಕಿ ಶಾಮೀಲಾಗಿರದೇ ಇವಳ ಹಿಂದೆ ತಂಡವೇ ಇರಬಹುದು ಎಂಬ ಗುಮಾನಿಯಿದ್ದು ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕಿದೆ
ಕತ್ತಲಲ್ಲಿ ಕೈಚಳಕ ತೋರಿದ ಕಳ್ಳಿ
ಮೂಡಲಗಿಯಲ್ಲಿ ಸಾಮಾನ್ಯವಾಗಿ ಕರೆಂಟು ಹೋಗುವುದಿಲ್ಲ ಆದರೆ ಜಾತ್ರೆಯ ದಿನವಾದ ಶುಕ್ರವಾರದಂದು ಎರಡು ಸಲ ವಿದ್ಯುತ್ ಕಡಿತವಾಗಿದ್ದು ವಿಚಿತ್ರವಾಗಿದೆ.
ಇದೇ ಸಮಯದಲ್ಲಿ ಕಳ್ಳರು ಕೈಚಳಕ ತೋರುತ್ತಾರೆ. ಪ್ರತಿವರ್ಷ ಶ್ರೀ ಶಿವಬೋಧರಂಗನ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಲವೂ ಸಕ್ಕರೆ ಹಂಚುವ ದಿನ ವಿಪರೀತ ಗದ್ದಲವಿದ್ದು ಇಂಥ ಸಮಯದಲ್ಲಿಯೇ ರಾತ್ರಿ ಎರಡು ಸಲ ಕರೆಂಟ್ ಹೋಗಿದ್ದು ಯಾಕೆ ಎಂಬುದಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಉತ್ತರ ನೀಡಬೇಕಾಗುತ್ತದೆ.