ನಮ್ಮ ಊಟದ ತಟ್ಟೆಯಲ್ಲಿಯ ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಮೇಘಾಲಯದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕಾಡು ಹಣ್ಣುಗಳ ವಿಜ್ಞಾನಿ ಡಾ. ಎಚ್.ಎನ್.ಕೆಂಚರಡ್ಡಿಯವರು ಕಪ್ಪತಗಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ ಪ್ರಾಯೋಜಿತ 7ನೆ ಚಾರಣ ಹಾಗೂ ಸಸ್ಯಾನುಭಾವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗತ್ತಿನಲ್ಲಿ ಮೂರು ಲಕ್ಷಕ್ಕೂ ಅಧಿಕ ಸಸ್ಯಗಳನ್ನು ಆಹಾರವಾಗಿ ಬಳಸಲು ಸಾಧ್ಯವಿದ್ದರೂ ನಾವು ಕೇವಲ ಮೂವತ್ತು ಸಸ್ಯಗಳಿಗೆ ನಮ್ಮ ಸೇವನೆಯನ್ನು ಸೀಮಿತಗೊಳಿಸಿದ್ದು ಅಪೌಷ್ಟಿಕತೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ಐದಾರು ಆಹಾರಧಾನ್ಯಗಳಿಗೆ ಸೀಮಿತಗೊಳಿಸಿರುವದು ಸರಿಯಾದ ಬೆಳವಣಿಗೆಯಲ್ಲ, ಕಡಿಮೆಯಾಗಿರುವ ಸಿರಿಧಾನ್ಯಗಳ ಬಳಕೆಯನ್ನು ವೃದ್ಧಿಸಿ ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ನಮ್ಮ ಹಿರಿಯರು ಸ್ಥಳೀಯವಾಗಿ ಲಭ್ಯವಿರುವ ಕಾಡು ಹಣ್ಣುಗಳನ್ನು ಸೇವಿಸುತ್ತಿದ್ದ ಕಾರಣ ರೋಗ ನಿರೋಧಕ ಶಕ್ತಿ ಹೊಂದಿರುತ್ತಿದ್ದರು. ನಾವು ವಿದೇಶಿ ಹಣ್ಣುಗಳ ವ್ಯಾಮೋಹಕ್ಕೆ ಸಿಲುಕಿ ಸ್ಥಳೀಯ ಹಣ್ಣು ಬೆಳೆಗಾರರಿಗೆ ಅನ್ಯಾಯವೆಸಗುತ್ತಿದ್ದೇವೆಯೆಂದೂ ಸಹ ಅಭಿಪ್ರಾಯಪಟ್ಟರು
ಧಾರವಾಡದ ವೀರಶೈವ ಲಿಂಗಾಯತ ಜಾಗೃತಿ ಸಮಿತಿಯ ಮಹಿಳಾ ಘಟಕದ ಮಹಾದೇವಿ ಕೊಪ್ಪದರವರು ಮಾತನಾಡಿ ನಶಿಸುತ್ತಿರುವ ಕಾಡು ಹಣ್ಣುಹಣ್ಣುಗಳ ಗಿಡಮರಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದ್ದು ಸಾವಿರಾರು ಕಾಡುಹಣ್ಣುಗಳ ಜೀವ ವೈವಿಧ್ಯತಾ ತಾಣವಾಗಿರುವ ಕಪಗುಡ್ಡದ ಸಂರಕ್ಷಣೆ ಮಾಡಿದರೆ ಕಾಡು ಹಣ್ಣುಗಳ ಪರಂಪರೆ ನಶಿಸದಂತೆ ತಡೆಯಬಹುದಾಗಿದ್ದು, ಅದಕ್ಕಾಗಿ ನಮ್ಮ ಸಮೀತಿಯ ಮಹಿಳಾ ಘಟಕವು ಯಾವುದೇ ಹೋರಾಟಕ್ಕೆ ಧುಮಕಲು ಸನ್ನದ್ಧವಾಗಿದೆಯೆಂದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿಯವರು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಕಪ್ಪತಗುಡ್ಡದ ಸಂರಕ್ಷಣೆಗಾಗಿ ಮನವಿ ಸಲ್ಲಿಸಿರುವ ಕುರಿತು ಮಾಹಿತಿ ನೀಡಿದರು ಹಾಗೂ ಮುಂದಿನ ದಿನಗಳ ಕ್ರಿಯಾಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು.
ಭಾಲಚಂದ್ರ ಜಾಬಶೆಟ್ಟಿ ಮಾತನಾಡುತ್ತಾ, ಕಪ್ಪತಗುಡ್ಡದೊಂದಿಗೆ ಸಮಸ್ತ ಕನ್ನಡಿಗರ ಭಾವ ಬಂಧ ಬೆಸುಗೆಗಾಗಿ ಕಪ್ಪತಗುಡ್ಡ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹಗಲಿರುಳು ಶ್ರಮಿಸುತ್ತಿದ್ದು ನಾಗರಿಕ ಸಮಾಜ ಧನಾತ್ಮಕವಾಗಿ ಸ್ಪಂದಿಸುತ್ತಿರುವುದು ಕಪ್ಪತಗುಡ್ಡದ ಸಂರಕ್ಷಣೆಗಾಗಿ ಇಮ್ಮಡಿ ಬಲ ತಂದಿದೆಯೆಂದರು. ಶ್ರೀಮಠದಿಂದ ನಾಡು ನುಡಿ ಪರಿಸರ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗುವ ದೀರ್ಘಾವಧಿ ಚಟುವಟಿಕೆಗಳ ವಿವರ ನೀಡಿದರು.
ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮುದ್ದೇಬಿಹಾಳ, ಬಸವನಬಾಗೇವಾಡಿ ತಾಲೂಕುಗಳಿಂದ, ಧಾರವಾಡದಿಂದ ಆಗಮಿಸಿದ ಚಾರಣಿಗರು ಸಂಭ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಎಚ್.ಎನ್ ಕೆಂಚರಡ್ಡಿ, ಶಂಕರ ಕುಂಬಿ, ಮಹಾದೇವಿ ಕೊಪ್ಪದ, ಶಕುಂತಲಾ ಪಾಟೀಲ ಹಾಗೂ ಬಸ್ ಚಾಲಕ ಈಶ್ವರ ತಡಕೋಡರವರಿಗೆ ಗೌರವ ಸನ್ಮಾನ ನೀಡಲಾಯಿತು
ಪ್ರಶಾಂತ ಪಾಟೀಲ, ಶಕುಂತಲಾ ಪಾಟೀಲ, ರಾಜರಾಜೇಶ್ವರಿ ಹಿರೇಮಠ, ರತ್ನಾ ಕುಲಕರ್ಣಿ, ಸವಿತಾ ನಡಕಟ್ಟಿ, ದಾಕ್ಷಾಯಿಣಿ ಬಡಿಗೇರ, ಶೋಭಾ ಗರಗ ಹಾಗೂ ಇನ್ನಿತರರು ಭಾಗವಹಿಸಿದ್ದರು
ಭಾಲಚಂದ್ರ ಜಾಬಶೆಟ್ಟಿ