ಸಿಂದಗಿ: ಪರಿಸರ ನಮಗೆ ಅನಿವಾರ್ಯ ಪರಿಸರಕ್ಕೆ ನಾವು ಅನಿವಾರ್ಯವಲ್ಲ ಎನ್ನುವುದನ್ನು ಕರೋನಾದ ಹಾವಳಿಯ ಸಂದರ್ಭದಲ್ಲಿ ನಾವೆಲ್ಲ ಕಂಡುಕೊಂಡಿದ್ದೇವೆ. ರಾಸಾಯನಿಕಗಳ ಬಳಕೆಯಿಂದ ಜಾಗತಿಕ ತಾಪಮಾನದಿಂದ ಓಜೋನ್ ಪದರ ಹಾಳಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಮಹಾಂತೇಶ ಹಿರೇಮಠ ಹೇಳಿದರು.
ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಶುಭೋದಿ ಪ್ರೌಢಶಾಲಾ ಆವರಣದಲ್ಲಿ 36 ನೇ ವಾರದ ಜಾಗೃತಿ ಆಂದೋಲನದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಸ್ಯಗಳನ್ನು ಮಗುವಿನಂತೆ ಬೆಳೆಸುವ ಮೂಲಕ ಪರಿಸರದಲ್ಲಿ ಸಸ್ಯಗಳನ್ನು ಜಾಗೃತಿಯಿಂದ ಬೆಳೆಸಿದರೆ ಮುಂದೊಂದು ದಿನ ನಮಗೆ ಗಾಳಿ ನೆರಳು ಆಮ್ಲಜನಕ ಹಣ್ಣು ಹೂಗಳನ್ನು ಕೊಟ್ಟು ಮನುಷ್ಯನ ಉಳಿವಿಗೆ ಕಾರಣೀಭೂತವಾಗುತ್ತವೆ ಕಾರಣ ಪ್ರತಿ ಮಗುವಿನ ಅಥವಾ ಮಹಾತ್ಮರ ಜಯಂತಿಯಂದು ಒಂದೊಂದು ಸಸಿ ನೆಡುವ ಪರಿಪಾಠವನ್ನು ಮಾಡುತ್ತಾ ಬಂದಿದ್ದೇ ಆದರೆ ಇಡೀ ಪರಿಸರವೇ ಹಸಿರುಮಯ ಮಾಡಬಹುದು ಎಂದರು
ರಾಂಪುರ ಶಾಲಾ ಶಿಕ್ಷಕಿ ಪರಿಮಳಾ ಯಲಗೋಡ ಮತ್ತು ಸಿಂತುಜಾ ಪಾಟೀಲ ಮಾತನಾಡಿ, ನಮ್ಮ ಜೀವಂತ ನೆನಪುಗಳಲ್ಲಿ ಹಿಂದೆಂದಿಗಿಂತಲೂ ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ತುರ್ತು ಅವಶ್ಯಕತೆಯಿದೆ. ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ಕಲಿಸುವುದು ಬಹಳ ಮುಖ್ಯ, ಏಕೆಂದರೆ ಅವರು ನಮ್ಮ ಗ್ರಹದ ಭವಿಷ್ಯ. ಪರಿಸರದಿಂದಲೇ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಕಲ್ಲೂರ ನಿರೂಪಿಸಿದರು. ಶೇಖರ ಕೆರೂಟಗಿ ಸ್ವಾಗತಿಸಿದರು. ಪಿ.ಪಿ.ಯಡಗಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನಿಂಗಣ್ಣ ಚಂದ್ರಪ್ಪಗೋಳ, ಮುಖ್ಯಗುರು ಜಿ.ಜಿ ಹಿರೇಮಠ, ಪರಶುರಾಮ ಪೂಜಾರಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.