ಬೆಳಗಾವಿ – ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಚೋರ್ಲಾ ರಸ್ತೆಯಲ್ಲಿ ನೀವು ಪ್ರಯಾಣಿಸಬೇಕಾದರೆ ಎರಡು ರೀತಿಯ ಅನುಭವವಾಗುತ್ತದೆ.
ಒಂದು ಜಾಂಬೋಟಿಯಿಂದ ಚೋರ್ಲಾ ಅಂದರೆ ಗೋವಾ ಗಡಿಯ ಹತ್ತಿರದ ತನಕ ರಾಜ್ಯ ಹೆದ್ದಾರಿ ೩೧ ರಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸಬೇಕು. ಬೆಲೆಬಾಳುವ ಕಾರು ಇದ್ದರಂತೂ ಅಲ್ಲಲ್ಲಿ ರಸ್ತೆಯ ತಗ್ಗುಗಳಿಂದಾಗಿ ಕಾರಿಗೆ ಏನಾದರೂ ಆದೀತೆಂಬ ಭಯ ಬಾಯಿಗೆ ಬರುತ್ತದೆ. ಇನ್ನೊಂದು ಅಲ್ಲಿಂದ ಮುಂದೆ ಸಾಗಿದರೆ ಗೋವಾ ತನಕ ಉತ್ತಮ ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ.
ಇದರಿಂದಲೇ ತಿಳಿಯುತ್ತದೆ ಕರ್ನಾಟಕ ಸರ್ಕಾರ ಅದರಲ್ಲೂ ಬೆಳಗಾವಿ ಜಿಲ್ಲಾಡಳಿತದ ರಸ್ತೆಗೆ ಸಂಬಂಧಿಸಿದ ಇಲಾಖೆಯ ಬೇಜವಾಬ್ದಾರಿತನ. ಪಕ್ಕದ ರಾಜ್ಯದ ರಸ್ತೆಗಳನ್ನಾದರೂ ನೋಡಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿಗಳು ಕಣ್ಣು ತೆರೆಯಬೇಕಾಗಿತ್ತು ನಿರ್ಲಕ್ಷ್ಯವನ್ನೇ ನಖಶಿಖಾಂತ ಹೊದ್ದು ಮಲಗಿರುವ ಈ ಇಲಾಖೆಗಳ ಅಧಿಕಾರಿಗಳನ್ನು ಎಬ್ಬಿಸುವರಾರು ?
ಈಗಂತೂ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಆಗದ ರಸ್ತೆ ಇನ್ನೂ ಚುನಾವಣೆ ಮುಗಿದು, ಹೊಸ ಸರ್ಕಾರ ಬಂದು ಅದು ಮನಸು ಮಾಡಬೇಕು, ಪುಣ್ಯಕ್ಕೆ ಇದರಲ್ಲಿ ಯಾವ ರಾಜಕಾರಣವೂ ಹೊಗದೇ ಇದ್ದರೆ ರಸ್ತೆ ಆಗಬಹುದು. ಇಲ್ಲದಿದ್ದರೆ ರಾಜ್ಯ ಹೆದ್ದಾರಿ ೩೧ ರ ರಸ್ತೆ ಚೋರ್ಲಾವರೆಗೆ ಕಚಡಾ ಆಗಿಯೇ ಉಳಿಯಬಹುದು. ಅಲ್ಲಿಯವರೆಗೆ ಗೋವಾಕ್ಕೆ ಪ್ರಯಾಣಿಸುವ ಖಾಸಗಿ ವಾಹನಗಳ ಚಾಲಕರು, ಪ್ರವಾಸಿಗರು ಕೇವಲ ಹಿಡಿಶಾಪ ಹಾಕುವುದರಲ್ಲಿಯೇ ತೃಪ್ತಿ ಪಡಬೇಕಾಗಿದೆ.
ಆದರೂ ಪಕ್ಕದ ರಾಜ್ಯದ ರಸ್ತೆಗಳನ್ನು ನೋಡಿಯಾದರೂ ಈ ರಸ್ತೆ ಆಗಿಲ್ಲವೆಂದರೆ ಸರ್ಕಾರ, ಶಾಸಕ ಹಾಗೂ ಜಿಲ್ಲಾಡಳಿತದ ಚರ್ಮ ೬ ಎಂಎಂ ಗಿಂತಲೂ ದಪ್ಪ ಇರಬೇಕು ಎಂದು ಅಂದಾಜಿಸಬೇಕಾಗುತ್ತದೆ. ಅಂಥ ಚರ್ಮದ ಅಧಿಕಾರವನ್ನು ಎಚ್ಚರಿಸುವುದು ಆ ಭಗವಂತನಿಂದಲೂ ಸಾಧ್ಯವಿಲ್ಲ. ಮೊದಲೇ ಕಾಡಿನ ರಸ್ತೆಯಾಗಿರುವುದರಿಂದ ಕಚ್ಚಾ ರಸ್ತೆಯಿಂದಾಗಿ ರಸ್ತೆ ಮಧ್ಯದಲ್ಲಿಯೇ ವಾಹನ ಕೈಕೊಟ್ಟರೆ ಇದೇ ನಿಷ್ಕರುಣಿ, ಭ್ರಷ್ಟ ಅಧಿಕಾರಿಗಳ ಶತನಾಮಾವಳಿ ಹೇಳುತ್ತ ಕೂರಬೇಕಾಗುತ್ತದೆ.
ಬೆಳಗಾವಿ ಜಿಲ್ಲೆ ಅದರಲ್ಲೂ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ರಾಜಕಾರಣಕ್ಕೆ ಹೆಸರುವಾಸಿಯಾಗಿವೆ. ರಾಜಕಾರಣದಲ್ಲಿ ಇರುವ ತುರುಸು ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ಇದ್ದಿದ್ದರೆ ನಾವಿಂದು ಇಂಥ ರಸ್ತೆಯಲ್ಲಿ ಅನುಭವ ಪಡೆಯಲು ಆಗುತ್ತಿರಲಿಲ್ಲ. ಇನ್ನು ಮುಂದಾದರೂ ಸಂಬಂಧಪಟ್ಟ ಪುಢಾರಿಗಳು, ಅಧಿಕಾರಿಗಳು ಗಾಢ ನಿದ್ದೆಯಿಂದ ಎಚ್ಚತ್ತುಕೊಂಡು ಬೇರೆಯ ರಾಜ್ಯಗಳ ಪ್ರಯಾಣಿಕರ ಎದುರು ಮರ್ಯಾದೆ ತಕ್ಕೊಳ್ಳದಂತೆ, ಮತದಾರರ ಮರ್ಯಾದೆ ತೆಗೆಯದಂತೆ ರಸ್ತೆ ರಿಪೇರಿಗೆ ಮುಂದಾಗಬೇಕು.
ಉಮೇಶ ಬೆಳಕೂಡ, ಮೂಡಲಗಿ