ಮೈಸೂರು – ಕನ್ನಡಕ್ಕೆ ಅವಮಾನ ಮಾಡಿರುವ ಗೂಗಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಭೇರ್ಯ ರಾಮಕುಮಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ,ಎಂಟು ಜ್ಞಾನ ಪೀಠ ಪ್ರಶಸ್ತಿಗಳ ಗೌರವಕ್ಕೆ ಪಾತ್ರವಾಗಿರುವ ಕನ್ನಡ ಭಾಷೆಯನ್ನು ugliest language ಎಂದು ಗೂಗಲ್ ಅವಮಾನ ಮಾಡಿದೆ.
ಕನ್ನಡ ಭಾಷೆಗೆ ಹಿರಿಯ ಚಿಂತಕ ವಿನೋಬಾ ಬಾವೆಯವರು ಲಿಪಿಗಳ ರಾಣಿ ಎಂದು ಬಣ್ಣಿಸಿದ್ದಾರೆ. ದಕ್ಷಿಣ ಭಾರತದ ಸುಮಾರು ಹತ್ತು ಕೋಟಿಗೂ ಹೆಚ್ಚು ಜನರು ಕನ್ನಡ ಬಳಸುತ್ತಾರೆ ಎಂದು ಅಂತರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.
ಇಂತಹ ಪವಿತ್ರ ಕನ್ನಡ ಭಾಷೆಯನ್ನು ugly language ಎಂದು ಬಣ್ಣಿಸಿರುವ ಗೂಗಲ್ ವಿರುದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಗೂಗಲ್ ತನ್ನ ಹೀನ ಕೃತ್ಯಕ್ಕಾಗಿ ಕನ್ನಡಿಗರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕನ್ನಡಿಗರು ಸಿಡಿದೇಳುವುದು ಖಚಿತ ಎಂದು ಅವರು ಹೇಳಿದ್ದಾರೆ.