ಶ್ರೀ ಮಠದವತಿಯಿಂದ ದಾನದ ರೂಪದಲ್ಲಿ ಗೋವುಗಳನ್ನು ಹಾಗು ಹೋರಿಗಳನ್ನು ನೀಡುವ ಸಾಮಾಜಿಕ ಕಳಕಳಿ ಕಾರ್ಯಕ್ರಮ
ಮಂತ್ರಾಲಯ: ಶ್ರೀ ಮಠದ ಮುಂಭಾಗದಲ್ಲಿ ಇರುವ ಸುಂದರವಾದ ವೇದಿಕೆಯ ಮೇಲೆ ವಿರಾಜಮಾನರಾಗಿ ಮುಸ್ಸಂಜೆಯ ಹೊತ್ತಿನಲ್ಲಿ ಕುಳಿತ್ತಿದ್ದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಮುಂದೆ ಎರಡು ಡಬ್ಬಿ ಇಡಲಾಗಿತ್ತು , ತಂಪನೆಯ ತಂಗಾಳಿ ಬೀಸುತ್ತ ಇದ್ದಾಗ ಶ್ರೀ ಮಠದ ಮ್ಯಾನೇಜರ್ ಎಸ್. ಕೆ .ಶ್ರೀನಿವಾಸ್ ಅವರು ವೇದಿಕೆಯ ಮೇಲಿದ್ದ ಶ್ರೀ ಗಳಿಗೆ ವಂದಿಸಿ ನೆರೆದಿದ್ದ ಭಕ್ತ ಸಮೂಹ ಹಾಗು ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ರೈತರನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠ – ಗೋ ಸಂರಕ್ಷಣಾ ಕೇಂದ್ರ – ಮಂತ್ರಾಲಯದ ವತಿಯಿಂದ ಸ್ವಾಗತಿಸಿದ್ದರು.
ಕಾರ್ಯಕ್ರಮ ವನ್ನು ನೋಡುತ್ತಾ ಅಲ್ಲಿಯೇ ಕುಳಿತಿದ್ದ ನನಗೆ ಶ್ರೀ ಮಠದ ಆವರಣದಲ್ಲಿ ಭಕ್ತ ಸಮೂಹ ಇರುವುದು ಸರಿ ಆದರೆ ರೈತ ಸಮೂಹ ಇರುವ ಬಗ್ಗೆ ಅಚ್ಚರಿ ಹಾಗು ವೇದಿಕೆಯ ಬಲ ಬದಿಯಲ್ಲಿ ಒಂದಿಷ್ಟು ಜನ ಕುಳಿತಿದ್ದರು ಅವರಲ್ಲಿ ಸ್ಟ್ಯಾಂಪ್ ವೆಂಡರ್ ಸಹ ಕುಳಿತಿದ್ದರು , ಅವರ ಬಳಿ ಸುಮಾರು ಒಂದು ಸಾವಿರದ ಇನ್ನೂರ ಮೂವತ್ತೈದು ಅರ್ಜಿಗಳು ಇದ್ದವು. ಅವುಗಳಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ – ಗೋ ಸಂರಕ್ಷಣಾ ಕೇಂದ್ರದವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಮುಂದೆ ಇಡಲಾಗಿದ್ದ ಎರಡು ಡಬ್ಬಿ ಗಳಲ್ಲಿ ಗೋವು ಹಾಗು ಹೋರಿಗಳಿಗೆ ದಾನವಾಗಿ ಪಡೆಯಲು ಸಲ್ಲಿಸಿದ್ದ ಅರ್ಜಿಗಳು ಇದ್ದವು , ಅದರಲ್ಲಿ ಇದ್ದ ಅದೃಷ್ಟವಂತ ರೈತರ ಅರ್ಜಿ ನಂಬರ್ ನಮೂದಿಸಿದ್ದ ಚೀಟಿ ಎತ್ತುವ ಮೂಲಕ ಶ್ರೀ ಗಳು ಚಾಲನೆ ನೀಡಿದರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಸಮಕ್ಷಮದಲ್ಲಿ ಹಾಗು ಮಂತ್ರಾಲಯದ ಶಾಸಕರ ಸಮ್ಮುಖದಲ್ಲಿ ಚೀಟಿ ಹಾಕಿ ಪಾರದರ್ಶಕತೆಯ ಮೂಲಕ ಹೆಸರು ಬಂದ ರೈತರಿಗೆ ಚೀಟಿ ಹಾಕಿ ಅದರಲ್ಲಿ ಬಂದ ಅದೃಷ್ಟವಂತ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಗೋವುಗಳನ್ನು ಹಾಗು ಹೋರಿಗಳನ್ನು ಶ್ರೀ ಮಠದವತಿಯಿಂದ ದಾನದ ರೂಪದಲ್ಲಿ ನೀಡಲಾಯಿತು .
ಶ್ರೀ ರಾಘವೇಂದ್ರ ಸ್ವಾಮಿ ಮಠ – ಗೋ ಸಂರಕ್ಷಣಾ ಕೇಂದ್ರ
ಶ್ರೀ ಮಠದಲ್ಲಿ ಇರುವ ಗೋ ಶಾಲೆಯಲ್ಲಿ ಒಟ್ಟು ಸಾವಿರದ ಐನೂರು ಹಸು – ಹೋರಿಗಳು ಇದ್ದು ಅವುಗಳ ಸಂರಕ್ಷಣೆ ಕಾರ್ಯವನ್ನು ಶ್ರೀ ಮಠದ ವತಿಯಿಂದ ನಿರ್ವಹಿಸುತ್ತಿದ್ದು , ಅವುಗಳ ಆಹಾರಕ್ಕೆ ಬೇಕಾಗುವ ಹಸಿ ಹುಲ್ಲು ಮತ್ತು ಮೇವನ್ನು ಶ್ರೀ ಮಠದ ಮೂವತ್ತರಿಂದ ನಲವತ್ತು ಎಕರೆ ಜಮೀನಿನಲ್ಲಿ ಬೆಳೆಯಲಾಗುತ್ತದೆ – ಗೋವುಗಳು ಹಾಗು ಹೋರಿಗಳ ಚಿಕಿತ್ಸೆಯನ್ನು ಸಮಯ – ಸಮಯಕ್ಕೆ ಸರಿಯಾಗಿ ಪಶು ವೈದ್ಯರಿಂದ ಪರಿಶೀಲನೇ ನಡೆಸಲಾಗುತ್ತದೆ ಎನ್ನುತ್ತಾರೆ ಶ್ರೀ ಮಠದ ಮ್ಯಾನೇಜರ್ ಎಸ್ . ಕೆ . ಶ್ರೀನಿವಾಸ್ ರಾವ್ .
ದಾನದ ರೂಪದಲ್ಲಿ ಗೋವಿನ ಮೇವು:
ಮಂತ್ರಾಲಯದ ಸಮೀಪ ಇರುವ ಹಾಗು ನಾಡಿನ ವಿವಿಧ ರಾಜ್ಯಗಳಿಂದ ರೈತರು ( ಕರ್ನಾಟಕ , ಆಂಧ್ರ , ತೆಲಂಗಾಣ ಇನ್ನು ಅನೇಕ ರಾಜ್ಯ ಗಳಿಂದ ) ಅವರು ಬೆಳೆದ ಬೆಳೆಗಳನ್ನು ದಾನದ ರೂಪದಲ್ಲಿ ಗೋವಿನ ಮೇವು ನೀಡುತ್ತಾರೆ , ಎನ್ನುತ್ತಾರೆ ಶ್ರೀ ಮಠದ ಮ್ಯಾನೇಜರ್ ಎಸ್ . ಕೆ . ಶ್ರೀನಿವಾಸ್ ರಾವ್ .
” ಸಕಲ ಪ್ರದಾತ ರಾಘವೇಂದ್ರ ಗುರುಗಳಿಗೆ ಹಸುವಿನ ಹಾಲಿನಿಂದ ಪಂಚಾಮೃತ ಅಭಿಷೇಕ ”
ಹಾಲು ಕೊಡುವ ಆಕಳುಗಳ ಹಾಲನ್ನು ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಕ್ಕೆ ಹಾಗು ಶ್ರೀ ಮಠದ ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ನೆರೆದಿದ್ದ ಭಕ್ತರು ಹಾಗು ರೈತ ಸಮೂಹ ಕುರಿತು ಇದು ಪರಮ ಪವಿತ್ರವಾದಂತಹ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಕ್ಷೇತ್ರ ಮಂತ್ರಾಲಯ – ಶ್ರೀ ಪ್ರಹ್ಲಾದ ರಾಜರು ಅವತಾರ ಮಾಡಿ ಇಲ್ಲಿಯೇ ಯಜ್ಞ – ಯಾಗಾದಿಗಳನ್ನು ಮಾಡಿದಂತಹ ಪವಿತ್ರ ಸ್ಥಳ ಮತ್ತು ಶ್ರೀ ರಾಘವೇಂದ್ರ ಯತಿವರ್ಣರು (೧೫೯೫-೧೬೭೧) ವರುಷಗಳ ಕಾಲ ಇದ್ದು – ಜಪ -ತಪ – ಅನುಷ್ಠಾನ ಮಾಡಿ ಅನುಗ್ರಹ ಮಾಡಿದಂತಹ ಪುಣ್ಯ ಸ್ಥಳ – ಅರ್ಥಾತ್ ಈ ಪವಿತ್ರ ಭೂಮಿ – ಮಂತ್ರಯುಕ್ತವಾದ ಸ್ಥಳ -ಇಂತಹ ಕ್ಷೇತ್ರದಿಂದ ಗೋವುಗಳನ್ನು – ಹೋರಿಗಳನ್ನು ಪಡೆಯುವ ನೀವೇ ಪುಣ್ಯವಂತರು , ತಾವೆಲ್ಲ ಈ ಗೋವುಗಳನ್ನು – ಹೋರಿಗಳನ್ನು ತಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿ ಭಾವಿಸಿ – ಅವುಗಳ ಸಂರಕ್ಷಣೆಯನ್ನು ಶೃದ್ದೆ ಯಿಂದ ಮಾಡಿದರೆ – ಆ ಹೋರಿ ಗಳಿಂದ ತಮ್ಮ ಹೊಲ ಸಮೃದ್ಧಿ ಯಾಗುತ್ತದೆ ಎಂದು ನುಡಿದರು .
ಮಂತ್ರಾಲಯದಲ್ಲಿ ಗೋವುಗಳ ಸಂರಕ್ಷಣೆ:
ದೇಶದಲ್ಲಿ ಗೋವುಗಳ ಸಂತತಿ ನಾಶವಾಗುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗೋವುಗಳ ಸಂರಕ್ಷಣೆ ವಿಚಾರ ಹೆಚ್ಚು ಮಹತ್ವ ಪಡೆದಿದೆ. ಆದರೆ ಮಂತ್ರಾಲಯ ಮಠದಲ್ಲಿ ಪೂರ್ವ ಯತಿಗಳ ದೂರದೃಷ್ಟಿಯ ಫಲವಾಗಿ ಗೋಶಾಲೆ ಬಹು ಹಿಂದೆಯೇ ಸ್ಥಾಪನೆಯಾಗಿದ್ದು, ನೂರಾರು ಗೋವುಗಳ ಸಂರಕ್ಷಣೆ ನಿರಂತರ ಸಾಗಿದೆ.
ಗೋವುಗಳ ಸಂರಕ್ಷ ಣೆಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಹೆಚ್ಚಿನ ಒತ್ತು ನೀಡಿದೆ. ಪೀಠವನ್ನು ಅಲಂಕರಿಸಿದ ಪೀಠಾಧಿಪತಿಗಳು ಗೋ ಸಂರಕ್ಷ ಣೆ ಕಾರ್ಯ ಮುನ್ನಡೆಸಿಕೊಂಡು ಬಂದಿದ್ದಾರೆ. ಅಂತೆಯೇ ಮಂತ್ರಾಲಯದಲ್ಲಿ ದೊಡ್ಡದಾದ ಗೋ ಶಾಲೆ ತಲೆ ಎತ್ತಿದೆ , ಮಂತ್ರಾಲಯದ ರಾಯರ ದರ್ಶನಕ್ಕೆಂದು ಬರುವವರು ರಾಯಚೂರು ರಸ್ತೆಯಲ್ಲಿರುವ ಗೋಶಾಲೆಯನ್ನು ಭೇಟಿ ಮಾಡದೇ ಇರಲಾರರು.
ಗೋ ಶಾಲೆಯಲ್ಲಿ ಸದ್ಯ ಸುಮಾರು ೧೫೦೦ ಗೋವು, ಹೋರಿ , ಅವುಗಳಲ್ಲಿ ಹಾಲು ಕೊಡುವ ಮತ್ತು ಕೊಡದೇ ಇರುವ ಆಕಳುಗಳೂ ಸೇರಿವೆ. ಹಾಲು ನೀಡಲಿಲ್ಲ ಎಂದು ಗೋವುಗಳನ್ನು ಗೋ ಶಾಲೆಯಿಂದ ಹೊರಹಾಕಿಲ್ಲ. ಗೋವುಗಳಿಂದ ಏನನ್ನೂ ನಿರೀಕ್ಷಿಸದೇ ಸಂರಕ್ಷಣೆಯಷ್ಟೇ ಮುಖ್ಯ ಎಂಬ ಧ್ಯೇಯದೊಂದಿಗೆ ಶ್ರೀಮಠದ ಆಡಳಿತ ಗೋಶಾಲೆ ನಿರ್ವಹಿಸುತ್ತಿದೆ.
ಗೋಶಾಲೆಯಲ್ಲೇನಿದೆ?
ಮಂತ್ರಾಲಯದ ಗೋ ಶಾಲೆಯು 10 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಹರಡಿದೆ. ಆಂಧ್ರ ಮತ್ತು ಕರ್ನಾಟಕದ ವಿವಿಧ ತಳಿಗಳ ಗೋವುಗಳಿಲ್ಲಿವೆ. ಅವುಗಳ ಪಾಲನೆ ಪೋಷಣೆಗೆ ನೂರಕ್ಕೂ ಹೆಚ್ಚಿನ ಸಿಬ್ಬಂದಿಯಿದೆ. ಗೋವುಗಳ ಪಾಲನೆ ಪೋಷಣೆ ಹೊಣೆ ಅವರದ್ದಾಗಿದೆ. ಸಿಬ್ಬಂದಿ ಸಹ ಮಠದಂತೆಯೇ ಕಾಳಜಿಯುಳ್ಳವರಾಗಿದ್ದು, ಗೋವುಗಳ ಪಾಲನೆ ಪೋಷಣೆಯಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ರೈತರು ತುಂಬಾ ಸಂತುಷ್ಟರಾಗಿ ರಾಯರ ಪ್ರಸಾದ ಎಂದು ಭಾವಿಸಿ ತಮಗೆ ಸಿಕ್ಕಂತಹ ಹೋರಿಗಳನ್ನು – ಗೋವುಗಳನ್ನು , ಪವಿತ್ರ – ಪೂಜ್ಯ ಭಾವನೆಯಿಂದ ತೆಗೆದು ಕೊಂಡು ತಮ್ಮ – ತಮ್ಮ ಸ್ವ ಕ್ಷೇತ್ರ ಗಳಿಗೆ ಹೋದ ವಿಷಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿ ಹಲವು ವರುಷ ಗಳಿಂದ ಶ್ರೀ ರಾಘವೇಂದ್ರ ಸ್ವಾಮಿಮಠ – ಗೋ ಸಂರಕ್ಷಣಾ ಕೇಂದ್ರ – ಮಂತ್ರಾಲಯ ಹಾಗು “ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಅನುಗ್ರಹದಿಂದ ಅರ್ಹ ಫಲಾನುಭವಿಗಳಿಗೆ ಶ್ರೀ ಮಠದವತಿಯಿಂದ ದಾನದ ರೂಪದಲ್ಲಿ ಗೋವುಗಳನ್ನು ಹಾಗು ಹೋರಿಗಳನ್ನು ನೀಡುವ ಸಾಮಾಜಿಕ ಕಳಕಳಿ ಕಾರ್ಯಕ್ರಮ ” ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ !! .
ಸೂಚನೆ: ಶ್ರೀ ಮಠದ ವ್ಯವಸ್ಥಪಕರಾದ ಎಸ್ . ಕೆ . ಶ್ರೀನಿವಾಸ್ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಲೇಖನ ಬರೆಯಲಾಗಿದೆ.
ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ