ಸಿಂದಗಿ: ವಿದ್ಯಾರ್ಥಿಗಳು ಮಹಾವಿದ್ಯಾಲಯದ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ಕಟ್ಟಿಕೊಳ್ಳಲು ಪದವಿ ಹಂತದ ಶಿಕ್ಷಣ ಸುಭದ್ರವಾದ ತಳಪಾಯವಾಗಿರುವುದರಿಂದ ನಿರಂತರ ಓದಿನತ್ತ ಗಮನಹರಿಸಬೇಕೆಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಅಶೋಕ್ ಮನಗೂಳಿ ಸಲಹೆ ನೀಡಿದರು.
ಪಟ್ಟಣದ ಸಿ.ಎಮ್. ಮನಗೂಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ ಪ್ರಾಧ್ಯಾಪಕ ಬಿ.ಎನ್. ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಓದಿನ ಮೇಲಿನ ಶ್ರದ್ಧೆ ಹೆಚ್ಚಾಗಬೇಕಾದರೆ ಸಂತರ, ಶರಣರ, ಸತ್ಪುರುಷರ ಬದುಕಿನ ಚಿತ್ರಣಗಳು ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀಕಾಂತ್ ಕೆಂಧೂಳಿಯವರು ಮಾತನಾಡಿ, ವಿದ್ಯಾರ್ಥಿಗಳು ಕಲೆ, ಸಂಗೀತ, ಸಾಹಿತ್ಯದೊಂದಿಗೆ ತಮ್ಮನ್ನು ಒಂದಾಗಿಸಿಕೊಂಡು ಕಲಿತಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ.ಬಿ.ಜಿ ಪಾಟೀಲ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಭವಿಷ್ಯತ್ತಿನ ಶಿಕ್ಷಣಕ್ಕಾಗಿ ಭೌತಿಕ ಉಪಕರಣಗಳ ಜೊತೆಗೆ ಬೌದ್ಧಿಕ ಉಪಕರಣವಾದ ಪುಸ್ತಕಗಳು ಪ್ರಮುಖ ಪಾತ್ರ ವಹಿಸುವುದರಿಂದ, ವಿದ್ಯಾರ್ಥಿಗಳು ಪುಸ್ತಕ ಪ್ರೇಮಿ ಯಾಗಬೇಕೆಂದು ತಿಳಿಸಿದರು.