ಮೂಡಲಗಿ: ಹಾವೇರಿ ಜಿಲ್ಲೆಯ ಶ್ರೀ ಕ್ಷೇತ್ರ ಕಾಗಿನೆಲೆಯ ಕನಕ ಗುರುಪೀಠದ ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಯವರ 16 ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳ ಗುರುವಂದನಾ ಮಹೋತ್ಸವವು ಜುಲೈ 13 ರಂದು ಕಾಗಿನೆಲೆಯಲ್ಲಿ ಜರುಗಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಅವರು ರವಿವಾರ ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ಜರುಗಿದ ತಾಲೂಕಾ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳ, ಸಮಾಜ ಮುಖಂಡರ ಗುರುವಂದನಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗುರುಪರಂಪರೆಯ ಇತಿಹಾಸವುಳ್ಳ ಸಮಾಜವಾಗಿರುವದರಿಂದ, ಗುರುಗಳ ಮಾರ್ಗದರ್ಶನ ಹಾಗೂ ನೇತೃತ್ವ ಅವಶ್ಯಕವಾಗಿದೆ. ರಾಜ್ಯದ ಪ್ರತಿ ಜಿಲ್ಲೆಯವರು ಪ್ರತಿ ವರ್ಷ ಗುರುವಂದನಾ ಮಹೋತ್ಸವ ನಡೆಸಿಕೊಂಡು ಬಂದಿರುತ್ತಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಪ್ರಸಕ್ತ ವರ್ಷ ಬೆಳಗಾವಿ ಜಿಲ್ಲೆಯವರಿಂದ ನಡೆಯಿಸಿ ಕೊಡುವದಾಗಿದೆ. ಸಮಾಜ ಬಂಧುಗಳು ತನು, ಮನ ಧನ ಹಾಗೂ ನಿಸ್ವಾರ್ಥ ಮನಸ್ಸಿನಿಂದ ಗುರುಗಳ ಸೇವಾ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಈ ಸ್ಮರಣೀಯ ಗುರುವಂದನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಸಂಘಟನೆ ಜೊತೆಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಬಲವರ್ಧನೆಯಾಗಬೇಕು. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಬೆಳಗಾವಿ ಜಿಲ್ಲೆಯ ಹೆಸರನ್ನು ರಾಜ್ಯದಲ್ಲಿ ಗುರುತಿಸುವಂತೆ ಶ್ರಮವಹಿಸಬೇಕು. ಪ್ರತಿ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಚರ್ಚೆಗಳನ್ನು ಮಾಡಬೇಕು. ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿಕೊಂಡರು.
ತಾಲೂಕಾಧ್ಯಕ್ಷ ಡಾ. ಎಸ್.ಎಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾ ಮನೋಭಾವನೆಯಿಂದ ಸಕಲರು ಕೈಜೋಡಿಸಬೇಕು ಹಾಗೂ ನೂತನ ತಾಲೂಕು ಕೇಂದ್ರವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ಆಗುಹೋಗುಗಳ ಕುರಿತು ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಗಳು ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪದಾಧಿಕಾರಿಗಳು, ಸದಸ್ಯರು, ಮುಖಂಡರು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಬೆಳಗಾವಿ ಜಿಲ್ಲಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷ, ಮಾಜಿ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಪ್ರಧಾನ ಕಾರ್ಯದರ್ಶಿ ಎಚ್.ಎಸ್ ನಸಲಾಪೂರೆ, ಜಿಲ್ಲಾ ಸಮಿತಿಯ ವಿನಾಯಕ ಬನಹಟ್ಟಿ, ಟ್ರಸ್ಟಿಯಾದ ಸಿದ್ದಪ್ಪ ಪೂಜೇರ, ಶಿವಾಜಿ ಶಹಾಪೂರಕರ, ಶ್ರೀಮಂತ ಧನಗರ ಹಾಗೂ ತಾಲೂಕಾ ಪ್ರದೇಶ ಕುರುಬರ ಸಂಘದ ಸದಸ್ಯರು, ಸಮಾಜ ಮುಖಂಡರು, ಯುವಕರು ಹಾಜರಿದ್ದರು.