ಮೂಡಲಗಿ: ಶಿಲ್ಪಿ ಶಿಲೆಯನ್ನು ಮೂರ್ತಿ ಮಾಡುವಂತೆ, ಗುರು ತನ್ನ ಶಿಷ್ಯನನ್ನು ಒಂದು ಭವ್ಯ ಜ್ಞಾನದ ಮೂರ್ತಿಯನ್ನಾಗಿ ರೂಪಿಸಲು ಪ್ರಯತ್ನಿಸುತ್ತಾನೆ. ತನ್ನಲ್ಲಿರುವ ಅನುಭವಗಳನೆಲ್ಲ ಶಿಷ್ಯನಿಗೆ ಧಾರೆಯೆರೆಯುತ್ತಾನೆ. ಇದಕ್ಕೆ ನಾವು ಯಾವ ಬಹುಮಾನ ನೀಡಿದರೂ ಕಡಿಮೆ ಆದ್ದರಿಂದ ಈ ಜಗತ್ತಿನಲ್ಲಿ ತೀರಿಸಲಾಗದ ಎರಡು ಋಣಗಳೆಂದರೇ ಒಂದು ಗುರುವಿನ ಋಣ ಮತ್ತೊಂದು ತಂದೆ ತಾಯಿ ಋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ನ.13 ರಂದು ಯಾದವಾಡ ಗ್ರಾಮದ ಎಂ. ಆಯ್. ಕೆ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ದಿ. ಮಹಾಲಿಂಗಪ್ಪ ಕತ್ತಿ ಇವರ 4ನೇ ಪುಣ್ಯಸ್ಮರಣೆ ನಿಮಿತ್ತ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಹಾಗೂ ಕೃಷಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ದಿ. ಮಹಾಲಿಂಗಪ್ಪ ಕತ್ತಿ ಅವರು 1957ರಲ್ಲಿ ವಿದ್ಯಾವರ್ಧಕ ಸಂಘ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿ, 37 ವರ್ಷಗಳ ಕಾಲ ಒಬ್ಬ ಆದರ್ಶ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು. ಕತ್ತಿ ಅವರ ಶಿಷ್ಯ ಬಳಗ ಹಾಗೂ ಅಭಿಮಾನಿಗಳು ಸೇರಿಕೊಂಡು ಮಹಾಲಿಂಗಪ್ಪ ಕತ್ತಿ ಪ್ರತಿಷ್ಠಾನದ ವತಿಯಿಂದ ಕಂಚಿನ ಪುತ್ಥಳಿಯನ್ನು ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದರು.
ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ಚಿಂತನೆಯನ್ನು ಸಾಕಾರ ಗೊಳಿಸಲು ಶ್ರಮಿಸುತ್ತಿದ್ದಾರೆ. ದೇಶ ಆತ್ಮನಿರ್ಭರವಾಗಲು ಕೃಷಿ ಕ್ಷೇತ್ರ ಮಹತ್ವ ಪಾತ್ರ ವಹಿಸುತ್ತದೆ. ರೈತರ ಬದುಕಿನಲ್ಲಿ ಒಳ್ಳೆಯ ದಿನಗಳು ಬರಬೇಕು ಮತ್ತು ರೈತರ ಆದಾಯ ದ್ವಿಗುಣಗೊಳಿಸಬೇಕೆಂದು ಸ್ವಾತಂತ್ರ್ಯಾನಂತರ ಸಂಕಲ್ಪ ಮಾಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ರೈತರ ಬದುಕನ್ನು ಹಸನು ಮಾಡಬೇಕು ಅವರ ಉತ್ಪನ್ನಗಳಿಗೆ ಲಾಭ ಸಿಗುವಂತಾಗಬೇಕು ಎಂದು ಉದಾತ್ತ ಕಲ್ಪನೆಯಿಂದ ಮೋದಿ ಅವರು ಮುಂದುವರಿದಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶಿವಯೋಗೇಶ್ವರ ಮಠದ ಪೂಜ್ಯಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಯಾದವಾಡದ ಪೂಜ್ಯಶ್ರೀ ಬಸಲಿಂಗಯ್ಯ ಸ್ವಾಮಿಗಳು ವಹಿಸಿದ್ದರು.
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ನಿರಾಣಿ ಗ್ರುಪ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಡಾ. ದ್ರಾಕ್ಷಾಯಣಿ ನಿರಾಣಿ, ಭೀಮಶಿ ಗಡಾದ, ಮಲ್ಲಿಕಾರ್ಜುನ ಕಲ್ಲೋಳಿ, ಬಸಗೌಡ ಪಾಟೀಲ, ಡಾ. ವಿಠ್ಠಲ ಬೆಣಗಿ, ಡಾ. ಮಾರುತಿ ಮಲವಾಡಿ, ಸಿ.ಬಿ.ಮೇಟಿ, ಪ್ರಭುಗೌಡಾ ಪಾಟೀಲ, ಪ್ರಕಾಶ ವಸ್ತ್ರದ, ರಮೇಶ ಇಟ್ನಾಳ, ಎಚ್.ಎಸ್. ಭಜಂತ್ರಿ, ಪಧ್ಮಾವತಿ ಮಹಾಲಿಂಗಪ್ಪ ಕತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈಶ್ವರ ಕತ್ತಿ ಸ್ವಾಗತಿಸಿದರು, ಬಸವರಾಜ ಹಿಡಕಲ್ ವಂದಿಸಿದರು, ಮಲ್ಲಪ್ಪ ಚಾಯಪ್ಪಗೊಳ ಕಾರ್ಯಕ್ರಮ ನಿರೂಪಿಸಿದರು.