ಮೂಡಲಗಿ – ಇಲ್ಲಿನ ಲಕ್ಷ್ಮೀ ನಗರದಲ್ಲಿನ ಏರ್ ಟೆಲ್ ಟಾವರ ಹತ್ತಿರದಿಂದ ಆರ್ ಡಿಎಸ್ ಕಾಲೇಜಿಗೆ ಹೋಗು ದಾರಿಗೆ ಗಟಾರು ಕಾಮಗಾರಿ ಶುರುವಾಗಿದ್ದು ಅದರ ಆಮೆವೇಗದಿಂದಾಗಿ ಇಲ್ಲಿನ ನಾಗರಿಕರು ಪರದಾಡುವಂತಾಗಿದೆ.
ಅಷ್ಟೇ ಅಲ್ಲದೆ ಟಾವರ್ ಹತ್ತಿರದ ಖಾಲಿ ಪ್ಲಾಟ್ ಒಂದರಲ್ಲಿ ಗಟಾರ ನೀರು ತುಂಬಿಕೊಂಡು ಜನತೆ ಗಬ್ಬು ನಾತದಲ್ಲಿಯೇ ಬದುಕು ಸಾಗಿಸುವಂತಾಗಿದ್ದು ಪುರಸಭೆಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಲಕ್ಷ್ಮೀ ನಗರದಲ್ಲಿ ಇನ್ನೂ ಕಾಮಗಾರಿಗಳು ಶುರುವಾಗಿದ್ದು ಪುರಸಭೆಯವರ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ದಿಂದಾಗಿ ಅಲ್ಲಲ್ಲಿ ರಸ್ತೆಗಳಲ್ಲಿ ಅಡಚಣಿಯುಂಟಾಗಿ ನಾಗರಿಕರು ಪರದಾಡುತ್ತಿದ್ದಾರೆ. ಯಾಕಪ್ಪಾ ಈ ಕೆಲಸ ಮಾಡುತ್ತಿದ್ದಾರೆಯೋ ಎನ್ನುವಂತಾಗಿದೆ. ಅಭಿವೃದ್ಧಿ ಕಾರ್ಯಗಳು ಆಗಬೇಕಾದದ್ದು ಒಳ್ಳೆಯದೇ ಆದರೂ ಜನರಿಗೆ ತೊಂದರೆಯಾಗುವಂತಿರಬಾರದು.
ಲಕ್ಷ್ಮೀ ನಗರದ ಇದೇ ರಸ್ತೆಯಲ್ಲಿ ಪುಠಾಣಿ ಬಾವಿ ಮುಚ್ಚಲು ನಾಗರಿಕರಿಂದ ಧರಣಿ ಮಾಡಿದ್ದರೂ ಪುರಸಭೆಯವರು ಅದನ್ನು ಮುಚ್ಚದೆ ಕೇವಲ ಟೈಂಪಾಸ್ ಮಾಡಿದರು. ಈಗ ಅಲ್ಲಿ ಗಿಡಗಂಟಿಗಳು ಬೆಳೆದು ಹಾವು, ಹುಳು ಹುಪ್ಪಡಿಗಳು ಮನೆ ಮಾಡಲು ಅನುಕೂಲವಾದಂತಾಗಿದೆ. ಬಾವಿಯ ಸುತ್ತಮುತ್ತ ಮನೆಗಳಿದ್ದು ಚಿಕ್ಕ ಮಕ್ಕಳು ಆಟವಾಡುವಾಗ ಅಪಾಯ ಸಂಭವಿಸಬಹುದಾಗಿದೆ. ಆದರೆ ನಾಗರಿಕರು ಧರಣಿ ಕುಳಿತಾಗ ಮುಚ್ಚಲು ತಯಾರಾದ ಪುರಸಭೆಯವರು ಅದನ್ನು ಯಾಕೆ ನಿಲ್ಲಿಸಿದರು ಎಂಬುದಕ್ಕೆ ಅವರೇ ಉತ್ತರ ಕೊಡಬೇಕಾಗಿದೆ.
ಇನ್ನೊಂದು ವಿಚಿತ್ರವೆಂದರೆ ಈ ಬಾವಿಯ ತನಕ ಡಾಂಬರು ರಸ್ತೆಯಾಗಿದ್ದು ಮುಂದೆ ಡಾಂಬರು ಆಗಿಲ್ಲ ಇದು ಯಾವ ಸೀಮೆಯ ರಸ್ತೆ ಅಭಿವೃದ್ಧಿ ಎಂದು ಜನತೆ ಕೇಳುವಂತಾಗಿದೆ.
ಈ ವರದಿಗೆ ಪುರಸಭೆಯವರು ಯಾವ ರೀತಿ ಸ್ಪಂದಿಸುವರೋ ಕಾದು ನೋಡಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ