ಇಂದಿನ ಸಮಾಜ ಒಂದು ಹಂತದಲ್ಲಿ ಒಗ್ಗೂಡಿದ್ದು ಕುಮಾರ ಶ್ರೀಗಳ ಕೃಪೆಯಿಂದ. ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಮಠಮಾನ್ಯಗಳನ್ನು ನಿರ್ಮಿಸಿ ಅನುಭಾವವನ್ನು ಹಂಚಿ ಗ್ರಾಮ ಗ್ರಾಮಗಳಲ್ಲಿ ಸಹಿತ ಶಿಕ್ಷಣ ಸಂಸ್ಥೆಗಳು ಬೆಳೆಯಲು ಕಾರಣವಾಗಿದ್ದ ಕುಮಾರಸ್ವಾಮಿಗಳ ಸೇವೆ ನಿಜಕ್ಕೂ ಅನನ್ಯ ಎಂದು ರವಿವಾರ ದಿ.25 ರಂದು ಬೆಳಗಾವಿಯ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾದ ಲಿಂ. ಹಾನಗಲ್ ಕುಮಾರ ಸ್ವಾಮಿಗಳ ಜನ್ಮದಿನಾಚರಣೆ ಮತ್ತು ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಪ್ರಸ್ತುತ ಸಮಾಜ ಮತ್ತೆ ಹರಿದುಹಂಚಿ ಹೋಗುತ್ತಿದೆ. ಇದರಿಂದ ಎಲ್ಲರೂ ಎಚ್ಚೆತ್ತು ಭೇದಭಾವ ಮರೆತು ಎಲ್ಲರೂ ಒಗ್ಗೂಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಮಹೇಶ್ ಪಿಯು ಕಾಲೇಜಿನ ಪ್ರಾಚಾರ್ಯ ಎಂ. ವಿ. ಭಟ್ ಮಾತನಾಡಿ, ಹಾನಗಲ್ ಕುಮಾರ ಶ್ರೀಗಳು ತೀವ್ರ ಬಡತನದಲ್ಲಿ ಹುಟ್ಟಿ ಮೂಲತಃವಾಗಿ ಭಿಕ್ಷೆ ಬೇಡಿ ತಿನ್ನುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದ ಅವರು ಒಂದೊಮ್ಮೆ ಭಿಕ್ಷೆ ಏಕೆ ಬೇಡುತ್ತಿ ದುಡಿದು ತಿನ್ನಬಾರದೇ ಎಂದು ಅವಮಾನಿಸಿದಾಗ ನೊಂದ ಬಾಲಕ ಓದು ಬರಹ ಕಲಿಯಬೇಕೆಂದು ಪಣ ತೊಟ್ಟು ಓದಲು ಪ್ರಾರಂಭಿಸಿದ. ಕಾರಣಾಂತರಗಳಿಂದ ಪರೀಕ್ಷೆಯಲ್ಲಿ ಫೇಲಾದಾಗ ಶಿಕ್ಷಣವೇ ಬದುಕಲ್ಲ ಎಂದು ಮನೆಬಿಟ್ಟು ದುಡಿಯಲು ಆರಂಭಿಸಿದ. ಇನ್ನೇನು ತಂದೆತಾಯಿಯರಿಂದ ಮತ್ತೇ ಮನೆಗೆ ಕರೆ ಬಂದಾಗ ಅದನ್ನು ಧಿಕ್ಕರಿಸಿ ಸನ್ಯಾಸತ್ವವನ್ನು ಸ್ವೀಕರಿಸಿ ಸಿದ್ದಾರೂಢರ ಆಶ್ರಯಕ್ಕೆ ಬಂದು ಅನುಭಾವ ಕಲಿತು ಹಾನಗಲ್ಲಿಗೆ ಹೋಗಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು.
ಹರಿದು ಹಂಚಿಹೋಗಿದ್ದ ಸಮಾಜವನ್ನು ಒಂದುಗೂಡಿಸಿದರು. ಗ್ರಾಮಗ್ರಾಮಗಳಲ್ಲಿ ಶಿಕ್ಷಣದ ಬಗ್ಗೆ ತಿಳಿವಳಿಕೆ ಮೂಡಿಸಿ ಶಿಕ್ಷಣ ಸಂಸ್ಥೆಗಳು ಹುಟ್ಟಲು ಕಾರಣವಾದರು. ಪ್ರಸ್ತುತ ಕರ್ನಾಟಕದಲ್ಲಿರುವ ಬಹುತೇಕ ಮಠಾಧೀಶರು ಹಾನಗಲ್ಲ ಶ್ರೀಗಳು ಕಟ್ಟಿಬೆಳೆಸಿದ ಶಿವಯೋಗಿ ಮಂದಿರದಲ್ಲಿ ಶಿಕ್ಷಣ ಪಡೆದವರು ಎಂದು ಶ್ರೀಗಳ ಜೀವನ ವೃತ್ತಾಂತವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಶೀಲಾ ಗುರವ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಯೋತಿ ಬದಾಮಿ, ಗುರುದೇವಿ ಹುಲೆಪ್ಪನವರಮಠ, ಸುಧಾ ಪಾಟೀಲ, ಕಮಲಾ ಗಣಾಚಾರಿ, ಎಲ್. ಕೆ ಗುರವ, ಎಂ.ಎಸ್ ಹೂಗಾರ, ಎಸ್. ಸಿ. ಗುಂಡಕಲ್ಲೆ, ಎಂ ವೈ ಮೆಣಸಿನಕಾಯಿ, ಬಿ.ಬಿ ಮಠಪತಿ, ಶಿವಾನಂದ ತಲ್ಲೂರ ಸೇರಿದಂತೆ ಸಮಾಜದ ಹಿರಿಯರು ಆಗಮಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವೀಣಾ ಚಿನ್ನಣ್ಣವರ ಸ್ವಾಗತಿಸಿದರು. ಕೆ ರೂಪಾ ವಚನ ಪ್ರಾರ್ಥನೆ ಮಾಡಿದರು. ರಕ್ಷಾ ದೇಗಿನಾಳ ವಚನ ವಿಶ್ಲೇಷಿಸಿದರು. ಸಂಗೀತಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು ವಿ. ಕೆ.ಪಾಟೀಲ ವಂದಿಸಿದರು.