ಸಿಂದಗಿ: ಕೊರೊನಾ ಆವರಿಸಿದ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ಸಹಾಯಹಸ್ತ ನೀಡುವುದು ಮಾನವೀಯತೆಯ ಸಂಕೇತವಾಗಿದ್ದು ಸರಕಾರದ ಜೊತೆ ಕ್ಷೇತ್ರದ ಜನರ ನೆರವಿಗೆ ನಿಂತು ಪ್ರತಿಯೊಂದು ಬಡ ಕುಟುಂಬಕ್ಕೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ತಮ್ಮ ಸ್ವಗ್ರಹದ ಆವರಣದಲ್ಲಿ ಸಿಂದಗಿ ನಗರದ ಸಾವಿರಾರು ಬಡ, ನಿರ್ಗಕತಿಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿ, ಇಡೀ ಸಮಾಜವೇ ನಲುಗುವಂತೆ ಮಾಡಿರುವ ಕೊರೋನಾ ಅದೆಷ್ಟೋ ಕುಟುಂಬಗಳನ್ನು ನಿಸ್ಸಹಾಯಕರನ್ನಾಗಿ ಮಾಡಿದೆ. ಕ್ಷೇತ್ರದ ಋಣ ತೀರಿಸಲು ಇದೊಂದು ಸದವಕಾಶವಾಗಿದೆ. ಕೊರೋನಾ ಕಂಟಕ ಪ್ರಾರಂಭವಾದಾಗಿನಿಂದಲೂ ಕ್ಷೇತ್ರದ ಜನರ ಮಧ್ಯೆ ಇದ್ದು, ಅವರ ನೋವು, ನಲಿವುಗಳಲ್ಲಿ ಭಾಗಿಯಾಗಿದ್ದೇನೆ. ಎರಡು ಸಲ ಶಾಸಕನನ್ನಾಗಿ ಮಾಡಿದ ಜನ ಇನ್ನೂ ಸಹ ಅಷ್ಟೇ ಪ್ರೀತಿಯಿಂದ ಗೌರವಿಸುತ್ತಾರೆ. ಹೀಗಾಗಿ ನನ್ನ ಜನರ ಸೇವೆ ಮಾಡುವ ಸೌಭಾಗ್ಯ ಇನ್ನಷ್ಟು ಸಿಗಲಿ ಕೊರೋನಾ ಸಂಕಷ್ಟ ಕಡಿಮೆಯಾಗುವವರೆಗೂ ಸಹಕಾರ ನೀಡಲು ಸದಾ ಸಿದ್ಧ ಎಂದರು.
ಬಿಜೆಪಿ ಯುವಮುಖಂಡ ಸಂತೋಷಗೌಡ ಪಾಟೀಲ ಡಂಬಳ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಅವರು ಕಳೆದ ಹಲವಾರು ದಿನಗಳಿಂದ ಬಿಜೆಪಿ ಪಕ್ಷ ಸಿದ್ದಾಂತದಂತೆ ಕ್ಷೇತ್ರದಲ್ಲಿ ಸಂಚರಿಸಿ ಜನಸೇವೆ ಮಾಡುತ್ತಿದ್ದಾರೆ. ಇಡೀ ಬಿಜೆಪಿ ಅವರ ಬೆನ್ನಿಗಿದೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನಸಮಾನ್ಯರಿಗೆ ಕೊರೋನಾ ಸಮಯದಲ್ಲಿ ದೊಡ್ಡ ಅನುಕೂಲವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ವಲಯದ ಸುಮಾರು ಸಾವಿರಾರು ಬಡ ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮುಖಂಡರಾದ ಶ್ರೀಶೈಲಗೌಡ ಬಿರಾದಾರ, ಗುರು ತಳವಾರ, ಶಿವಾನಂದ ಆಲಮೇಲ, ಸುದರ್ಶನ ಜಂಗಾಣಿ, ರಮೇಶ ಚಿನ್ನಾಕರ, ಹೊನ್ನಳ್ಳಿ ಗ್ರಾಪಂ ಸದಸ್ಯೆ ಯಾಶ್ಮೀನ ನಾಯ್ಕೋಡಿ, ಸಿದ್ರಾಮ ಪೂಜಾರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.