ಬೀದರ – ಬೀದರ ಹಾಗೂ ಮಹಾರಾಷ್ಟ್ರದ ಕೆಲವು ಕಡೆ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹಾಗೂ ಮಹಾರಾಷ್ಟ್ರದ ಧನ್ಯೆಗಾಂವ್ ಡ್ಯಾಮ್ ನಿಂದ ಭಾರೀ ಪ್ರಮಾಣದಲ್ಲಿ ಬಿಡಲಾದ ನೀರಿನಿಂದ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲವು ಗ್ರಾಮದಲ್ಲಿ ಪ್ರವಾಹ ಉಂಟಾಗಿದ್ದು ಅಪಾರ ಹಾನಿ ಉಂಟಾಗಿದೆ.
ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಬರುವ ಗ್ರಾಮ ಗಳಾದ ಸೈಗಾಂವ್ ಮಾಳೆಗಾಂವ್ ಲಕಣ್ಗಾಂವ್ ಸಂಗಮ್ ಹಾಗೂ ಇತರ ಗ್ರಾಮದ ಕೃಷಿ ಭೂಮಿಗಳು ಜಲಾವೃತವಾಗಿದ್ದು ಪ್ರಸ್ತುತ ಧನ್ಯೆಗಾಂವ್ ಡ್ಯಾಮ್ ನ ಹದಿನೆಂಟು ಗೇಟ್ ಗಳಲ್ಲಿ ಕೇವಲ ಆರು ಗೇಟ್ ಗಳಿಂದ ನೀರು ಬರುತ್ತಿದೆ. ತಾಲೂಕಿನ ಗಡಿಗ್ರಾಮಗಳ ಬಹುತೇಕ ರೈತರ ಭೂಮಿಗಳು ಜಲಾವೃತಗೊಂಡಿವೆ.
ಆದರೆ ಜಲಾಶಯದ ಎಲ್ಲಾ ಗೇಟ್ ಗಳನ್ನು ತೆರೆಯುವಂತೆ ಸೂಚನೆಗಳನ್ನು ನೀಡಿದಾರೆ ಎನ್ನಲಾಗಿದ್ದು ಒಂದು ವೇಳೆ ಅವರು ಎಲ್ಲಾ ಗೇಟ್ ಓಪನ್ ಮಾಡಿದರೆ ನೀರು ಗಡಿಭಾಗದ ಗ್ರಾಮಗಳಿಗೆ ನುಗ್ಗಿ ಈ ಭಾಗದ ಜನರು ಪ್ರವಾಹಕ್ಕೆ ಸಿಲುಕಿ ಪ್ರಾಣ ಹಾನಿಗಳು ಆಗುವ ಸಾಧ್ಯತೆ ಹೆಚ್ಚಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕೂಡಲೆ ಮಧ್ಯಪ್ರವೇಶ ಮಾಡಿ ಮಹಾರಾಷ್ಟ್ರ ಸರ್ಕಾರ ನೀರು ಬಿಡುವದನ್ನು ತಡೆದು ಗಡಿ ಗ್ರಾಮದ ಜನರ ಪ್ರಾಣ ವನ್ನು ರಕ್ಷಿಸುವಂತೆ ಮಾಧ್ಯಮದ ಮೂಲಕ ಸ್ಥಳೀಯ ಜನರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಈ ಗಡಿ ಗ್ರಾಮದ ಮನವಿಗೆ ಸ್ಪಂದಿಸಿ ಗಡಿ ಭಾಗದ ಗ್ರಾಮಗಳ ಜನರ ರಕ್ಷಣೆಗೆ ಮುಂದಾಗುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ