ಪವಿತ್ರ ರಂಜಾನ್ ಮಾಸ ನಡೆಯುತ್ತಿದ್ದು, ಮುಸ್ಲಿಂ ಸಮುದಾಯದವರು ಉಪವಾಸ ಇದ್ದು ಧಾರ್ಮಿಕ ಆಚರಣೆ ಮಾಡುತ್ತಾರೆ. ಅವರಿಗಾಗಿ ಹಿಂದೂ ಸಮುದಾಯದಿಂದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಮಸೀದಿಯಲ್ಲಿ ಒಟ್ಟಿಗೆ ಕುಳಿತು ಆಹಾರ ಸೇವಿಸಿದ ಹಿಂದೂ ಮುಸ್ಲಿಮರು.
ಉಪವಾಸ, ಪ್ರಾರ್ಥನೆಯ ಬಗ್ಗೆ ಧರ್ಮಗುರುಗಳ ಪ್ರವಚನ. ಪರಸ್ಪರ ಹಣ್ಣು, ತಂಪು ಪಾನೀಯ ಹಂಚಿಕೊಂಡರು.
ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್. ಈ ಸಂದರ್ಭದಲ್ಲಿ ಮುಸ್ಲಿಮರು ದಿನವಿಡೀ ಉಪವಾಸ ಆಚರಿಸುತ್ತಾರೆ. ಉಪವಾಸ ತೊರೆಯುವ ಅವರಿಗಾಗಿ ಹಿಂದೂ ಧರ್ಮವರು ಇಫ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
ಹೌದು, ಇಂತಹದೊಂದು ಧಾರ್ಮಿಕ ಭಾವೈಕ್ಯತೆಯ ಕ್ಷಣಕ್ಕೆ ಮೂಡಲಗಿ ಪಟ್ಟಣ ಸಾಕ್ಷಿಯಾಗಿದೆ. ದರ್ಗಾದಲ್ಲಿ ಆಯೋಜಿಸಲಾಗಿದ್ದ ಇಫ್ತಾರ ಕೂಟದಲ್ಲಿ ಹಿಂದೂ ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗಿ ಆಚರಣೆ ಮಾಡಿದರು.
ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳ ಕಾಲ ನಡೆಯುವ ಉಪವಾಸ ವೃತದ ಹಿನ್ನೆಲೆಯಲ್ಲಿ ಮೂಡಲಗಿಯಲ್ಲಿ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ ಕೂಟವನ್ನ ಆಯೋಜನೆ ಮಾಡಲಾಗಿತ್ತು. ಪಟ್ಟಣದ ಯುವ ಜೀವನ ಸೇವಾ ಸಂಸ್ಥೆ ವತಿಯಿಂದ ಇಫ್ತಾರ ಕೂಟ ಆಯೋಜಿಸಲಾಗಿತ್ತು.
ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಹಿಂದೂ ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆಯನ್ನ ಮೆರೆದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಈರಪ್ಪಾ ಢವಳೇಶ್ವರ, ಬೀರು ವನಶೆನ್ನಿ, ಸಂಜು ಕಮತೆ , ಲಕ್ಷ್ಮಣ ಮಳ್ಳಿಗೇರಿ, ಸುನೀಲ ಗಸ್ತಿ, ಅನೇಕರು ಹಾಜರಿದ್ದರು.